ಬುಧವಾರ, ಡಿಸೆಂಬರ್ 6, 2017

ಹೊಳಪು ಕಂಗಳ ಹುಡುಗಿ

ಹೂ ಎಸಳುಗಳಿಗೆ ರೇಶಿಮೆಯ ಬಣ್ಣ
ಭೂಮಿಗೆ ತಂದವರಾರು ಅಂಗೈಯಲ್ಲಿ ಇಟ್ಟವರಾರು?

ಗಾಳಿ ಬೀಸಿದಂತೆಲ್ಲ ತೆರೆದುಕೊಳ್ಳುವ ರೆಕ್ಕೆ
ನವಿಲ ಗರಿಯ ನೇಯ್ದವರಾರು ಬೆನ್ನಿಗೆ ನವಿರಾಗಿ ಪೋಣಿಸಿದವರಾರು?

ಎದೆನದಿಯಲ್ಲಿ ಸದಾ ಹರಿವ ಪ್ರೀತಿ ಜೇನು
ಅಮೃತದ ಹೊಳೆಗೆ ಅಡ್ಡಗಟ್ಟಿದವರಾರು ಕಲ್ಲಿನ ಅಣೆಕಟ್ಟು ಕಟ್ಟಿದವರಾರು?

ಹುಡುಗಿಯವಳು,,
ಹೂವಂತೆ ಅರಳಿದಳು; ಹಕ್ಕಿಯಂತೆ ಹಾರಿದಳು; ನದಿಯಂತೆ ಹರಿದಳು..

ಹೊಳಪು ಕಂಗಳ ಹುಡುಗಿ ನಕ್ಷತ್ರವಾದಳು
ಆಕಾಶದ ತುಂಬೆಲ್ಲ ಹರಡಿಕೊಂಡಳು!

#Metoo

ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಹೆಚ್ಚೇನೂ ಬೇಡ ದೇಹಕ್ಕೆ!
ದಕ್ಕಿದರೆ ಒಂದಷ್ಟು ಏಕಾಂತ,
ಇಲ್ಲದಿದ್ದರೆ ಸ್ವಲ್ಪ ಕತ್ತಲು,
ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ..
ದಿನಕ್ಕೊಂದು ಬಾರಿ ಬಚ್ಚಲಲ್ಲಿ,
ಮನಸ್ಸಿದ್ದರೆ ಹಾಸಿಗೆಯಲ್ಲಿ! ಪ್ರೇಮವೋ, ಕಾಮವೋ ಕಡೆಗೆ ಬಲಾತ್ಕಾರವೋ
ಮತ್ತೆ ಮತ್ತೆ ಬತ್ತಲಾಗುತ್ತಲೇ ಇರುತ್ತದೆ ಮೈ.


ಮನಸ್ಸಿದೆಯಲ್ಲ ಅದು ಹಾಗಲ್ಲ.
ಅದೊಂದು ಶುದ್ಧ ತಪಸ್ಸಿನಂತೆ.. 
ವರ ಸಿಕ್ಕ ಎಷ್ಟೋ ಹೊತ್ತಿನ ನಂತರವೂ ಇಹದ ಪರಿವೆಯಿರುವುದಿಲ್ಲ!
ಗಾಂಧೀ ಬಜಾರಿನ ಗಲ್ಲಿಯಲ್ಲಿ, ದಾಂಡೇಲಿಯ ಕಾಡಿನಲ್ಲಿ ಅಥವಾ ಮೆಟ್ರೋದ ಕೊನೆಯ ಬಾಗಿಲಿನಲ್ಲಿ.. ಮನಸ್ಸು ಬತ್ತಲಾದಾಗಲೆಲ್ಲಾ ಕಣ್ಣು ತೇವವಾಗುತ್ತದೆ! ಹೃದಯ ಆರ್ದ್ರವಾಗುತ್ತದೆ! ದೇಹ ಕಂಪಿಸುತ್ತದೆ..
ಹಂಗೆಲ್ಲಾ ಸುಖಾಸುಮ್ಮನೆ ಬಯಲಿಗೆ ತೆರೆದುಕೊಳ್ಳುವ ಜಾಯಮಾನದ್ದಲ್ಲ ಅದು.
ಅದಕ್ಕೊಂದು ಸ್ಪರ್ಶ ಬೇಕು, ಆ ಸ್ಪರ್ಶಕ್ಕೆ ಜೇನಿನ ಹಿತವಿರಬೇಕು..
ಅದಕ್ಕೊಂದು ನುಡಿ ಬೇಕು, ಆ ನುಡಿ ಜೀವನವನ್ನೇ ಧಾರೆ ಎರೆದು ಕೊಟ್ಟೇನು ಎಂಬಷ್ಟು ಆಳವಾಗಿರಬೇಕು.


ಹಿಂಗೆಲ್ಲಾ ಸದಾ ಕಿರಿಕಿರಿ ಮಾಡುವ ಮನಸ್ಸಿದೆಯಲ್ಲಾ ಕೆಲವೊಂದು ಬಾರಿ ವಿಚಿತ್ರವಾಗಿಬಿಡುತ್ತದೆ!!
ಯಾವುದೇ ತಲೆಬುಡಗಳಿಲ್ಲದೆ ಭೋರ್ಗರೆದು ಸುರಿಯುವಷ್ಟು ದುಖಃವನ್ನು ದಯಪಾಲಿಸುತ್ತದೆ..
ಸದ್ಯಕ್ಕೆ ಅಂಥದೇ ಒಂದು ದುಃಖ ಕಣ್ಣೆದುರಿಗಿದೆ. ಅದೇ #Metoo

ಏನೇ ಹೇಳಿ;;
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಥೇಟ್ ಅಪ್ಪನ ತರಹದ್ದು!

ನಂಗೊಂದು ಸಾದಾಸೀದಾ ಬದುಕು ಬೇಕು
ಥೇಟ್ ಅಪ್ಪನ ತರಹದ್ದು! 
ಆರಕ್ಕೇರದ ಮೂರಕ್ಕಿಳಿಯದ
ಸಮಸ್ಥಿತಿಯ ಸಮಚಿತ್ತತೆಯ ಬದುಕು..


ಬೇಜಾರಾದಾಗ ಕಾಶಿಗೋ ರಾಮೇಶ್ವರಕ್ಕೋ ಯಾತ್ರೆ ಹೋಗುವ,
ಖರ್ಚು ಹೆಚ್ಚಾಯಿತೆನಿಸಿದಾಗ 'ಈ ಸಲ ಹಬ್ಬಕ್ಕೆ ಬಟ್ಟೆಯಿಲ್ಲ' ಎಂದು ಘೋಷಿಸುವ,
ಇಂಕ್ರಿಮೆಂಟ್ ಬಂದಾಗ ಮನೆಯವರ್ಯಾರಿಗೂ ಹೇಳದೇ 
ಅನಾಥಾಶ್ರಮಕ್ಕೋ, ಶಾಲೆಗೋ ದಾನ ಕೊಟ್ಟುಬಿಡುವ ಅದೇ ಅಪ್ಪನ ಬದುಕು ಬೇಕು ನಂಗೆ..

ಯಾವತ್ತಿಗೂ ಪ್ರೀತಿಯನ್ನು ಬಾಯಿಬಿಟ್ಟು ಹೇಳದೇ ಬರಿದೆ ಕ್ರಿಯೆಯಲ್ಲಿಯೇ ವ್ಯಕ್ತಪಡಿಸುವ,
ಐವತ್ತೈದರ ಹರಯದಲ್ಲಿಯೂ ಸ್ಕೂಟಿ ಕಲಿಯುವಷ್ಟು ಉತ್ಸಾಹವಿರುವ,
ಡಾಕ್ಟರಿಗೇ ಆಶ್ಚರ್ಯವಾಗುವಷ್ಟು ದೇಹಕ್ಕೆ ಒಗ್ಗಿಹೋಗಿರುವ ತಂಬಾಕಿನ ಚಟವನ್ನೇ 
ಜೀವನಪ್ರೀತಿಯೆನ್ನುವ ಹೂಬೇಹೂಬು ಅಪ್ಪನಂಥದ್ದೊಂದು ಬದುಕು ಬೇಕು ನಂಗೆ..

ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!

ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! 
'ಪರದೆ ಎಳೆಯುವ ಮುನ್ನ ಮುಖ ತೋರಿಸಬೇಕಲ್ಲ'
ಹೊರಗಿನಿಂದ ಧ್ವನಿಯೊಂದು ಕೇಳಿಬರುತ್ತದೆ.. ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳಬೇಕೇನು??
ಮರುಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ..

ಬಣ್ಣ ಅಳಿಸದೆಯೇ, ವೇಷ ಕಳಚದೆಯೇ ಸಭೆಯ ಎದುರಿಗೆ ಬಂದು ನಿಲ್ಲುತ್ತೇನೆ..
ಪಾತ್ರದ ಪರಿಚಯಿಕೆ ಪ್ರಾರಂಭ!
ಅಲ್ಲಿಷ್ಟು ಇಲ್ಲಿಷ್ಟು ಗುಸುಗುಸು ಪಿಸುಪಿಸು..
ನಡು ನಡುವೆಯೊಮ್ಮೆ ಚಪ್ಪಾಳೆ.
ಹೆಸರು ಕರೆದ ತಕ್ಷಣ ಒಂದಡಿ ಹೆಜ್ಜೆ ಮುಂದಿಟ್ಟು, ಕೈ ಜೋಡಿಸಿ ನಮಸ್ಕರಿಸಿ, ಮುಗುಳ್ನಕ್ಕು... ಹಃ!!
'ಬೇಗ ಬೇಗ ಬಟ್ಟೆ ಬದಲಾಯಿಸಿ,, ಹೊತ್ತಾಯಿತು ' ಮತ್ತದೇ ಹೊರಧ್ವನಿ.
ಕೋಣೆಯೊಳಗಿನ ಕನ್ನಡಿ ಇಣುಕುತ್ತದೆ ಕಣ್ಮುಂದೆ.. 
ಸ್ತ್ರೀ ಸಹಜ ಗುಣವದು.. ಬಿಡಲಾದೀತೇ? ಕನ್ನಡಿಯಲ್ಲೊಮ್ಮೆ ಪ್ರತಿರೂಪಕ್ಕಾಗಿ ಹುಡುಕುತ್ತೇನೆ..
ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು..


ಚೂರು ಕೆದರಿದ ಮುಂಗುರುಳು, ಕಣ್ಣೀರಿಳಿದಿದ್ದರಿಂದಲೋ ಏನೋ ಆಚೀಚೆಯಾದ ಕಾಡಿಗೆ,
ಮಾಸಿದ ತುಟಿಯ ರಂಗು,ಅಲ್ಲಲ್ಲಿ ಅಳಿಸಿ ಹೋದ ಮುಖದ ಮೇಕಪ್ಪು, 
ಬಾಡಿಹೋಗಿ ಭಾರವೆನಿಸುತ್ತಿರುವ ಮುಡಿದ ಹೂವು..
ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!


ಪಾತ್ರದೊಂದಿಗಿನ ಬದುಕೇ ಚಂದವಿತ್ತಲ್ಲವಾ ಎನಿಸುವಷ್ಟರಲ್ಲಿ ವಾಸ್ತವ ಬಾಗಿಲು ದಾಟಿ ಒಳಬರುತ್ತದೆ..
ಇಷ್ಟವಿಲ್ಲದಿದ್ದರೂ ಇದ್ದಂತೆ ನಟಿಸಿ ಸುಮ್ಮನೇ ಹೆಜ್ಜೆ ಹಾಕುತ್ತೇನೆ.
ಮುಂದಿನದ್ದೆಲ್ಲವೂ ಬಣ್ಣ ಹಚ್ಚದೇ ನಟಿಸಬೇಕಾದ ಬದುಕ ಪಾತ್ರ!
ನನ್ನೊಳಗು ತೆರವುಗೊಳ್ಳುವುದು ರಂಗದ ಮೇಲೆಯೇ ಎಂಬುದು ಮತ್ತೆ ಮತ್ತೆ ಅರಿವಾಗುತ್ತದೆ.
ಕಾಯತೊಡಗುತ್ತೇನೆ ನಾನು!
ಬಣ್ಣ ಹಚ್ಚಲು, ವೇಷ ಧರಿಸಲು,,,

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ..

ಅಮೃತವನ್ನೇ ಉಣಿಸಬಹುದಿತ್ತಲ್ಲಾ
ವಿಷದ ಬಟ್ಟಲನ್ನೇಕೆ ತಂದು ಸುರಿದರು?
ಆಕಾಶ ನೋಡುತ್ತಾ ಕೇಳುತ್ತಾಳೆ ಅವಳು..
ಉತ್ತರವಿಲ್ಲದೆ ಸುಮ್ಮನೆ ನಕ್ಷತ್ರ ಎಣಿಸುತ್ತಿರುವಂತೆ ನಟಿಸುತ್ತೇನೆ ನಾನು.

ಅಪರಾತ್ರಿಯ ಸಂವಾದಗಳಿವು ಮೌನದೊಂದಿಗೇ ಘಟಿಸುತ್ತವೆ..
ಅವಳು ಮಾತಿಗಿಳಿಯುವ ಮುಂಚೆಯೇ ಮೂಕಳಾಗುತ್ತೇನೆ! 
ಪ್ರಶ್ನೆಗಳೆಲ್ಲಾ ನೇರ ಎದೆಯ ಕವಾಟಕ್ಕೇ ಗುರಿಯಾಗಿರುತ್ತವೆ.
'ಘಾಸಿಯಾಗುತ್ತದೆ ನನ್ನೆದೆಗೂ'.. ಊಹೂಂ ಆಲಿಸುವಷ್ಟು ಸಹನೆ ಅವಳಿಗಿಲ್ಲ!
 ಅವಳ ಸ್ಥಾನದಲ್ಲಿ ಮತ್ಯಾರಿದ್ದರೂ ಇರುತ್ತಿರಲಿಲ್ಲವೇನೋ..

ಪಾಪದ ಹೆಣ್ಣು ಮಗು.. ಲಾಲಿಸಬೇಕೆನಿಸುತ್ತದೆ,, ಪಾಲಿಸಬೇಕೆನಿಸುತ್ತದೆ,, 
ಬಿಗಿದಪ್ಪಿ ಸಮಾಧಾನಿಸಬೇಕೆನಿಸುತ್ತದೆ..
ಮತ್ತೆ ಮತ್ತೆ ಅಸಹಾಯಕತೆಯ ಕೊಂಡಿಗಳಿಗೆ ನಮ್ಮನ್ನು ನಾವೇ ಬಂಧಿಸಿಕೊಂಡು ನರಳುತ್ತೇವೆ! 
ನಾನಿಲ್ಲಿ, ಅವಳಲ್ಲಿ..


ಸೋತಿದ್ದೇನೆ ನಾನೂ, ಅವಳಂತೆಯೇ
ಬದುಕ ಆಯ್ಕೆಗಳಲ್ಲಿ,, ಇಟ್ಟ ನಂಬಿಕೆಯಲ್ಲಿ
ಕುಸಿದಿದ್ದೇನೆ ನಾನೂ, ಅವಳಂತೆಯೇ
ಮುರಿದುಬಿದ್ದ ಪ್ರೀತಿಯಲ್ಲಿ,, ಛಿದ್ರಗೊಂಡ ಕನಸುಗಳಲ್ಲಿ..

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ.. 
ತುಂಬುವುದಾದರೆ ಇಬ್ಬರ ಮಡಿಲಿಗೂ ವಿಷವನ್ನೇ ತುಂಬಿಬಿಡಲಿ!
ಸಾಧ್ಯವಾದರೆ ವಿಷದ ಬಟ್ಟಲಿಗೂ ಪ್ರೀತಿಯನ್ನು ಸುರಿಯುತ್ತೇವೆ.. 
ಇಲ್ಲವಾದರೆ ವಿಷವನ್ನೇ ಅನುದಿನವೂ ಗುಟುಕಿಸುತ್ತಾ, ಅದನ್ನೇ ಅಮೃತವೆಂಬಂತೆ ಭಾವಿಸುತ್ತಾ ಬದುಕಿಬಿಡುತ್ತೇವೆ..

’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’

ಪದ್ಯವಾಗಿಸಲು ಹೋದ ಪದಗಳೆಲ್ಲಾ ಗದ್ಯಗಳಾಗಿಬಿಡುತ್ತವೆ
ಅದೇಕೋ ಕವಿತೆ ಮುನಿಸು ತೋರಿ ದೂರ ನಿಂತುಬಿಟ್ಟಿದೆ ನನ್ನಿಂದ
ಕಾವ್ಯವೆಲ್ಲಾ ಕಥೆಗಳಾಗಿಬಿಟ್ಟಿವೆ!
ಪ್ರಾಸ. ಲಯ-ಲವಲವಿಕೆ ಯಾವುದೂ ಘಟಿಸುತ್ತಲೇ ಇಲ್ಲ..
ಗರಿಗಳಷ್ಟು ಹಗುರವಾಗಿಮಂಜಿನಷ್ಟು ಬಿಳುಪಾಗಿ ಕವಿತೆ ಹೊಮ್ಮಬೇಕಿತ್ತು.
ಹೊಗೆಯಷ್ಟು ದಟ್ಟವಾಗಿಬೆಳಕಿನಷ್ಟು ತೀವ್ರವಾಗಿ ಕಥನ ಹಬ್ಬುತ್ತದೆ!
ಉಸಿರಾದಲು ಕಷ್ಟವಾಗುವಷ್ಟು ಗಟ್ಟಿಯಾಗಿಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿಕವಿತೆ ಒಮ್ಮೆ ತಬ್ಬಿಬಿಡಬೇಕು ನನ್ನ:)
            ಕವಿತೆಗಳ ಮೇಲೆ ಹೀಗೊಂದು ತೀವ್ರತರವಾದ ಪ್ರೀತಿ ಉಕ್ಕುವಂತೆ ಮಾಡಿದ್ದು ಕೃಷ್ಣರವರ ಕವಿತೆಗಳು.  ಮತ್ತೆ ಮತ್ತೆ ಹುಟ್ಟುತ್ತೇನೆಚಿತ್ರವಾಗಿ ಕಾಡುತ್ತೇನೆ ಎನುತ್ತಲೇ ಸಾಲುಗಳು ನಮ್ಮನಾವರಿಸಿಕೊಂಡುಬಿಡುತ್ತವೆ ಹಾಗೂ ಕಾಡುತ್ತಲೇ ಹೋಗುತ್ತವೆ. ಹೂ ಹುಡುಗಿಯೆಂಬ ಸಂಭೋದನೆಯೇ ಇನ್ನಷ್ಟು ಮತ್ತಷ್ಟು ಆಪ್ತವಾಗಿಸುತ್ತವೆ. ಚಿತ್ರಗಳ ನಂತರ ಪದಗಳು ಮೂಡುತ್ತವೆಯೋಪದಗಳ ಜೊತೆಜೊತೆಗೇ ರೇಖೆಗಳು ರೂಪು ತಳೆಯುತ್ತವೆಯೋ ಎಂಬುದೊಂದು ಅನುಮಾನ ನನ್ನೊಳಗೆ. ಒಮ್ಮೆ ಕನ್ನಡಿಯೊಳಗೆ ಹೂ ಬಿಟ್ಟ ಕನಸ ಮರಮತ್ತೊಮ್ಮೆ ಒಲೆಯುರಿಯ ನಿಗಿನಿಗಿ ಕೆಂಡದಂಥಾ ವಾಸ್ತವಮಗದೊಮ್ಮೆ ಬಾಚಿತಬ್ಬಿಬಿಡೋಣ ಎನ್ನುವಂಥಾ ಮೃದುಲ ಭಾವಗಳು. ಕೃಷ್ಣರ ಚಿತ್ರಕಾವ್ಯದ ಕಡಲಿನ ಪ್ರತಿಹನಿಯೂ ಎದೆಯ ಚಿಪ್ಪಿನಲ್ಲಿ ಮುತ್ತಾಗುವಂಥವುಗಳೇ.. :)
            ಕೃಷ್ಣರ ವ್ಯಕ್ತಿತ್ವ ಆಕರ್ಷಿಸಿದಷ್ಟೇ ಕವಿತೆಗಳು ಸೂಜಿಗಲ್ಲಿನಂತೆ ಸೆಳೆದಿವೆ ನನ್ನನ್ನು. ಮನದ ಆಕಾಶದಲ್ಲಿ ಅಗಾಧ ಮೌನವನ್ನುಅನಂತ ಪ್ರೇಮವನ್ನೂಅವ್ಯಕ್ತ ನೋವುಗಳನ್ನೂ ಸೃಷ್ಟಿಸುವ ಶಕ್ತಿ ಈ ನಕ್ಷತ್ರದ ಹೊಳಪಿರುವ ಕವಿತೆಗಳಿಗಿದೆ. ಕಾವ್ಯ ಪ್ರಪಂಚಕ್ಕಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನೆಡೆಗೆ ಎಳೆದುಕೊಂಡು,ಅದ್ಭುತವೆನಿಸೋ ಪದಗಲನ್ನು ಪೋಣಿಸಿ ನಮ್ಮೆದುರಿಟ್ಟು ’ಇದು ಹೇಗಿದೆ ಹೇಳಿ..’ ಎನ್ನುವ ಕೃಷ್ಣರ ದನಿಯಲ್ಲಿ ಆಳವಾದ ಜೀವನಪ್ರೀತಿ ಮತ್ತು ನನ್ನ ಕಂಗಳಲ್ಲಿ ಮುಗಿಯದ ಬೆರಗು. ಕಟ್ಟುಪಾಡು ಎಂತನಿಸುವ ಎಲ್ಲದರಿಂದಲೂ ದೂರವೇ ಉಳಿಯುವುದರಿಂದಲೇ ಏನೋ ಬೇಲಿಯಾಚೆಗಿನ ಭಾವಗಳೆಲ್ಲಾ ಚುಕ್ಕಿಗಳಾಗಿ, ಚಿತ್ರಗಳಾಗಿ,ಪದ್ಯಗಳಾಗಿ ಕೃಷ್ಣರಿಗೆ ದಕ್ಕಿಬಿಡುತ್ತವೆ.
            ಅರಮನೆಯೊಳಗಿನ ಜೋಳಿಗೆಯಲ್ಲಿ ಬುದ್ಧನೆಂಬ ಅಗುಲನ್ನು ಹುಡುಕುವಾಗಹೊಸ್ತಿಲ ಬಳಿ ನಿಂತ ಯಶೋಧರೆಯ ಕನವರಿಕೆಗಳು ಕದ ತಟ್ಟುತ್ತವೆ. ಅವ್ವನ ಬುತ್ತಿಗಂಟಿನೊಂದಿಗೆ ಲಂಕೇಶರನ್ನು ನೆನೆವ ಹೊತ್ತಿಗೆ ಕಿಟಕಿಯಾಚೆಗಿನ ವಿಸ್ಮಯ ಲೋಕದ ಬಾಗಿಲು ತೆರೆದು ತೇಜಸ್ವಿ ಒಳಬಂದಿರುತ್ತಾರೆ. ’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’ ಎನ್ನುವಲ್ಲಿ ಮೂಡುವ ನವಿರು ಭಾವ’ಮನ ತುಂಬಿದಳು ಹಾರಿಬಿಟ್ಟೆ.. ರೇಖೆಗಳಂತೆ ಹರಡಿಬಿಟ್ಟೆ’ ಎನ್ನುವಷ್ಟರಲ್ಲಿ ಪ್ರೀತಿಯಾಗಿ ಹಬ್ಬಿನಿಲ್ಲುತ್ತದೆ. ’ಹಕ್ಕಿಗಳಿಗೆ ಬೇಕಂತೆ ಸೂರು.. ಕೊಟ್ಟು ಬಿಡೋಣ ಈ ಬೆಂಗಳೂರು’ ಇಂಥಾ ಸಾಲುಗಳು ಮನ ಕಲುಕುವ ರೀತಿಯನ್ನುಅವು ಮೂಡಿಸುವ ಕಂಪನಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ನನ್ನಿಂದ ಅಸಾಧ್ಯ.
            ಚುಕ್ಕೆಹಾಡು ಅಂತೆಲ್ಲ ಅನಿಸಿದ್ದ ಇವರ ಚಿತ್ರಕಾವ್ಯಲೋಕ ಈಗ ಶಬ್ಧದಾಚೆಯ ಕನವರಿಕೆಗಳು.. ಭಾವಕೋಶದ ಭಿತ್ತಿಯ ಮೇಲೆ ಸಹಸ್ರ ವರ್ಣಗಳು..

'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ

ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ',  'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ ದಿನ ಬೆಕ್ಕಿನಂತೆ ಶತಪಥ ತಿರುಗಿದ್ದೆ ನಾ. ಅದೆಷ್ಟು ಗೋಗರೆದರೂ ಸ್ಥಳ ಯಾವುದೆಂದು ಸುಳಿಹೂ ಕೊಡಲಿಲ್ಲ ಆ ಪುಣ್ಯಾತ್ಮ. ಫೋಟೋಗ್ರಫಿಯ ನೆಪದಲ್ಲಿ ಅವನು ಊರು ಸುತ್ತುತ್ತಿದ್ದರೆ, ಬೆನ್ನು ಹತ್ತಿದ ಬೇತಾಳದಂತೆ ನಾನೂ ಅವನ ಬಾಲ ಹಿಡಿದು ಹೋಗುತ್ತಿದ್ದೆ! 'ಇರ್ರಿಟೇಟ್ ಮಾಡ್ಬೇಡ ನಂಗೆ.. ನಿನ್ನ ಎಲ್ಲಾ ಕಡೆನೂ ಕರ್ಕೊಂಡ್ ಹೋಗೋಕೆ ಸಾಧ್ಯ ಆಗಲ್ಲ' ಎಂದು ಬೈದು ನನ್ನ ಬಿಟ್ಟು ಹೋಗುತ್ತಿದ್ದುದೇ ಹೆಚ್ಚು. ಇವತ್ಯಾಕೋ ಅವನೇ ಸಿದ್ಧನಾಗಿರು ಎಂದಿದ್ದು ಚಕಿತಳನ್ನಾಗಿ ಮಾಡಿತ್ತು ನನ್ನ. ಯಾವ ಸ್ಥಳ ಎಂಬ ಸುಳಿವೇ ಇಲ್ಲದೆ ಸುಮ್ಮನೆ ತಯಾರಾಗಿ ನಿಂತಿದ್ದೆ ನಾ. ಮತ್ತೆ ಪಯಣ ಸಾಗಿದ್ದು ಮೂಡಿಗೆರೆಯ ರಸ್ತೆಯಲ್ಲಿ. 'ದೇವರಮನೆಗಾ!!??' ಎಂಬ ಉದ್ಗಾರ ಹೊಮ್ಮಿತ್ತು ನನ್ನಿಂದ.
      ವರ್ಷದ ಹಿಂದೆ ಮೂಡಿದ್ದ ಕನಸು "ದೇವರಮನೆ".  ಹೆಸರೇ ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಿಸಿತ್ತು. ಜಾನಪದ ಕಥೆಯೊಂದರ ಪ್ರಕಾರ ಶಿವ ತನ್ನ ಬಸವನನ್ನು ಭೂಲೋಕದ ಜನರ ಯೋಗಕ್ಷೇಮ ವಿಚಾರಿಸಲು ಕಳುಹುತ್ತಾನೆ. ಜನರು ಸಂಕಷ್ಟದಿಂದ ನರಳುತ್ತಿದ್ದರೂ ಬಸವ ಎಲ್ಲರೂ ಸುಕ್ಷೇಮದಿಂದಿದ್ದಾರೆ ಎಂಬುದಾಗಿ ಸುಳ್ಳು ಹೇಳುತ್ತದೆ. ಸತ್ಯಾಂಶ ತಿಳಿದ ಪರಶಿವನು ನೀನು ಜನಗಳ ಸೇವೆ ಮಾಡುತ್ತಾ ಅವರ ಬಡತನವನ್ನು ನಿವಾರಿಸು ಎಂದು ಶಾಪವನ್ನು ನೀಡುತ್ತಾನೆ. ಹೀಗೆ ಭೂಮಿಗೆ ಬಂದ ಬಸವನ ಹಿಂದೆ ಭಗವಂತನೂ ಕಾಲಭೈರವನಾಗಿ ಬಂದು 'ದೇವರಮನೆ'ಯಲ್ಲಿ ನೆಲೆ ನಿಲ್ಲುತ್ತಾನೆ. ಹೀಗೆ ಕಥೆಯ ಗುಂಗು ಹಿಡಿದು, ಜೊತೆಗೆ ಅಲ್ಲಿಷ್ಟು ಕಾಡಿದೆ ಎಂಬ ವಿಷಯ ತಿಳಿದು ದೇವರಮನೆಗೆ ಹೋಗುವ ಇರಾದೆಯನ್ನು ವ್ಯಕ್ತಪಡಿಸಿದ್ದೆ. ಪ್ರಾಜೆಕ್ಟ್, ಪೇಪರ್ ಪ್ರೆಸೆಂಟೇಶನ್ ಎಂಬ ಹುಚ್ಚು ಹಿಡಿದು ತಲೆ ರೋಷ ಹಿಡಿಸಿಕೊಂಡಿದ್ದ ನನ್ನ ಅಲ್ಲಿಗೆ ಕರೆದೊಯ್ಯುವ ಮನಸು ಮಾಡಿದ್ದ ಗೆಳೆಯ! ಮೂಡಿಗೆರೆಯಿಂದ ಕಳಸದ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುಗಿದರೆ ದೇವರಮನೆಗೆ ಸುಮಾರು 20ಕಿ.ಮೀ ನ ಹಾದಿ. ಹಾವು ಕವಲಿನ ದಾರಿಯಾದರೂ , ಗುಂಡಿ-ಹಳ್ಳಗಳಿಲ್ಲವಾದ್ದರಿಂದ ಪ್ರಯಾಣ ಆಯಾಸವೆನಿಸುವುದಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್, ಕಿ.ಮೀ ಗಟ್ಟಲೆ ದೂರವಿರೋ ಮನೆಗಳು, ಮಧ್ಯೆ-ಮಧ್ಯೆ ತಲೆದೋರೋ ಜಾನವಾರುಗಳು. ದಾರಿಯೊಂದಿಷ್ಟು ಗೊಂದಲವಾಗಿ 'ದೇವರಮನೆ' ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರಾಗಿತ್ತು.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಂಗೊಳಿಸೋ ಪರ್ವತಗಳ ಶ್ರೇಣಿ. ಸುತ್ತ ತಲೆಯೆತ್ತಿ ನಿಂತಿರೋ ಗಿರಿಗಳ ನಡುವೆ ಸುಶೋಭಿಸುತ್ತಿದ್ದಾನೆ ಕಾಲಭೈರವನಾದ ಗಿರಿಜಾವಲ್ಲಭ. ಕಲ್ಲು ಕಡೆದು ನಿರ್ಮಿಸಿರೋ ಶಿವನ ಆಲಯ ಹೆಚ್ಚೇನೂ ಅಲಂಕಾರವಿಲ್ಲದೇ, ನಿರಾಭರಣ ಸುಂದರಿಯಂತೆ ಆಕರ್ಷಿಸುತ್ತದೆ. ದೇವಸ್ಥಾನದ ಎದುರಿನಲ್ಲಿಯೇ ದೊಡ್ಡದೊಂದು ಕೆರೆ. ಕೆರೆಯ ಮಧ್ಯಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿರೋ ಕಲ್ಯಾಣಿ. ಅಭಿಷೇಕ ಪ್ರಿಯನಾದ ಈಶ್ವರನಿಗೆ ಈ ಕಲ್ಯಾಣಿಯಿಂದಲೇ ನಿತ್ಯ ಜಲ ಪೂರೈಕೆ. ದೇವಾಲಯದ ಹಿಂಭಾಗದಲ್ಲಿ ಬಿಮ್ಮನೆ ಹರಡಿರೋ ಬೆಟ್ಟ-ಗುಡ್ಡಗಳ ಸಾಲು.
    ಏರುತ್ತಾ ಹೋದಂತೆಲ್ಲಾ ಏರಿಸಿಕೊಳ್ಳುತ್ತಾ ಹೋಗುತ್ತವೆ ಈ ಬೆಟ್ಟಗಳು. ವಿದ್ಯುತ್ ತಂತಿಗಳು ಹಾಯ್ದುಹೋಗಿರುವ ಕಡೆ ನಡೆದರೆ ಕಿವಿಯೊಳಗೆ ಗುಯ್ ಗುಟ್ಟುವ ಸದ್ದು ಮಾರ್ದನಿಸುತ್ತದೆ. ಮೋಡಗಳು ಮುತ್ತಿಡುವಷ್ಟು ಹತ್ತಿರವಲ್ಲದಿದ್ದರೂ; ಕೈ ತಾಕುವಷ್ಟು ಸನಿಹ :)  ಈ ಬೆಟ್ಟದಿಂದ ಆ ಬೆಟ್ಟಕ್ಕೆ, ಅದರಿಂದ ಮತ್ತೊಂದಕ್ಕೆ ಕುಣಿದುಕೊಂಡು ಸಾಗಬಹುದು. ತುತ್ತತುದಿಯಲ್ಲಿ ದೊರಕುವ ನೀರವತೆ, ನಿರ್ಲಿಪ್ತತೆ ವಿವರಣೆಗೆ ನಿಲುಕದ್ದು. ಆ ಮೌನ ಅದಮ್ಯ ಹಾಗೂ ಅಗೋಚರ! ಈ ಬೆಟ್ಟಗಳಲ್ಲೆಲ್ಲೂ ಧೀಮಂತವೆನಿಸೋ ಮರಗಳಿಲ್ಲ. ತೇಗ, ಬೀಟೆ, ಸಾಗುವಾನಿ ಯಾವುದರ ಸುಳಿವೂ ಇಲ್ಲ! ಕುರುಚಲು ಪೊದೆ, ಕೈ-ಕಾಲಿಗೆ ಅಡರೋ ಮುಳ್ಳುಗಳ ಹೊರತು ಮತ್ತೇನೂ ಕಾಣ ಸಿಗದು. ಸರ್ವವ್ಯಾಪಿ ಶಂಕರನ ಪ್ರತಿರೂಪವಾದಂತೆ ಕಂಡವು ಈ ಬೆಟ್ಟಗಳು. ಬೆಟ್ಟವಾದರೇನು, ಬಯಲಾದರೇನು; ಪ್ರೀತಿ ಹಬ್ಬಿ ನಕ್ಕರಾಯಿತು ಎಂದು ಇಳಿದುಬಂದಿದ್ದೆ.
        ಈ ಸ್ಥಳದ ಸುತ್ತ ಹೆಚ್ಚೆಂದರೆ ನಾಲ್ಕೈದು ಮನೆಗಳಷ್ಟೇ ಇರುವುದು. ಸ್ಥಳೀಯರ ಪ್ರಕಾರ ಹೊಯ್ಸಳರ ರಾಜ ಈ ದೇವಸ್ಥಾನವನ್ನು ನಿರ್ಮಿಸಿದನಂತೆ.  1200 ವರ್ಷಗಳ ಇತಿಹಾಸವಿರೋ ದೇವರಮನೆ ಒಮ್ಮೊಮ್ಮೆ ವಿಸ್ಮಯವೆನಿಸಿದರೆ ಮತ್ತೊಮ್ಮೆ ನಿರ್ಲಿಪ್ತವೆನಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ದಿನಕ್ಕೆ ಸರಿಸುಮಾರು 30 ರಿಂದ 35 ಜನರು 'ದೇವರಮನೆ'ಗೆ ಭೇಟಿ ನೀಡುತ್ತಾರೆ. ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. 'ಅದ್ಯಾವುದೋ ಸಿನಿಮಾದೋರು ಇಲ್ಲಿ ಜಾತ್ರೆ ಮಾಡಿದ್ರು ಸಾರ್.. ಅವ್ರು ಹಚ್ಚಿರೋ ಬಣ್ಣ ಎಲ್ಲಾ ಹಂಗೇ ಇದೆ ನೋಡಿ ಸಾರ್.. ಎಲ್ಲಾ ಕ್ಲೀನ್ ಮಾಡಿ ಅಂದ್ರೂ ಬಿಟ್ಟೋಗಿದಾರೆ ' ಎನ್ನುತ್ತಿದ್ದ ಸ್ಥಳೀಯನ ಮಾತಿನಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿತ್ತು. ಅದ್ಯಾಕೋ ಬೆಟ್ಟದ ಮೇಲೆ ಕಂಡ ಬೀರ್ ಬಾಟಲ್ ಗಳು , ಸಿಗರೇಟ್ ತುಂಡುಗಳು ಫಕ್ಕನೆ ನೆನಪಾದವು. ಕಾಲಭೈರವನೇ ಇವರಿಗೆಲ್ಲಾ ಬುದ್ಧಿ ದಯಪಾಲಿಸು ಎಂಬುದೊಂದು ಪ್ರಾರ್ಥನೆಯ ಸಲ್ಲಿಸಿ ಗೋಧೂಳಿ ಮುಹೂರ್ತದಲ್ಲಿ ಮರಳಿ ಹೊರಟ ನಮ್ಮನ್ನು ದಾರಿಯುದ್ದಕ್ಕೂ ಅಸ್ತಂಗತನಾಗುತ್ತಿದ್ದ ಸೂರ್ಯ ಕಾಡುತ್ತಿದ್ದ. 'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ ಮನದಲ್ಲಿ ರೂಪುಗೊಳ್ಳುತ್ತಿತ್ತು.. :) 

ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು..



ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು.. ಇಂಜಿನಿಯರಿಂಗ್ ಎಂಬ ನೆಪದಲ್ಲಿ ಚಿಕ್ಕಮಗಳೂರಿನ ಹಾದಿ ಹಿಡಿದಿದ್ದೆ! ಇದೇ ಊರ ಆಯ್ಕೆ ಮಾಡಿಕೊಂಡ ಕಾರಣ  ವರ್ಷ ಪೂರ್ತಿ ಮಳೆ ಸುರಿಯತ್ತೆ ಎಂಬ ಖುಷಿಗೋ, ಸೆಖೆಗಾಲವೇ ಇರುವುದಿಲ್ಲ ಎಂಬ ಸಂತಸಕ್ಕೋ ತಿಳಿದಿಲ್ಲ.. ಬಂದ ಒಂದೆರಡು ತಿಂಗಳು ಸ್ವಲ್ಪ ಜಾಸ್ತಿಯೇ ಕಷ್ಟವಾದರೂ ವರ್ಷವೆರಡು ಕಳೆಯುವಷ್ಟರಲ್ಲಿ ಇಡೀ ಊರು ನನ್ನದಾಗಿಹೋಗಿದ್ದು, ಬಿಟ್ಟು ಬರಲು ಮನಸೇ ಬಾರದಷ್ಟು ನಾ ಈ ನೆಲವ ಹಚ್ಚಿಕೊಂಡಿದ್ದು ಈಗ ಇತಿಹಾಸ.. ಮೊದಲೇ ಊರೂರು ಸುತ್ತೋ ಹುಚ್ಚಿರೋ ನಂಗೆ ಚಿಕ್ಕಮಗಳೂರು ಆಪ್ತವಾಗಿದ್ದು ದೊಡ್ಡ ವಿಷಯವಲ್ಲದಿದ್ದರೂ ಅಂಥದೇ ಮನಃಸ್ಥಿತಿಯ ಗೆಳೆಯರು ಸಿಕ್ಕಿದ್ದು ವಿಶೇಷ. 'ನಮ್ಮ ಚಿಕ್ಕಮಗಳೂರು' ಎಂಬ ನೆಪದಲ್ಲಿ ಪೂರ್ತಿ ಊರನ್ನು ಸುತ್ತಲು ಪ್ರಾರಂಭಿಸಿ ವರ್ಷ ಎರಡಾಯಿತು.. 
ಹೇಳಿ-ಕೇಳಿ ನಮ್ಮೂರು ಹುಲಿ-ಚಿರತೆಗಳಿಗೆ ಪ್ರಸಿದ್ಧವಾದದ್ದು. ಎಸ್ಟೇಟ್ ನ ದಾರಿಯಲ್ಲೆಲ್ಲಾದರೂ ಹುಲಿ ಎದುರಾದರೂ, ಶಾಲೆಯೊಳಗೆ ಚಿರತೆ ಬಂದು ಕೂತು ಪಾಠ ಕೇಳಿದರೂ ಅಚ್ಚರಿಯೇನಿಲ್ಲ :ಫ್ ಹಿಂಗೇ ಯಾವಾಗಲೋ ಊರೊಳಗೆ ಬಂದ ಚಿರತೆಯನ್ನ ನೋಡಿಕೊಂಡು ಬರುವ ಎಂದು ಹೊರಟಾಗ  ಮಾರ್ಗ ಮಧ್ಯದಲ್ಲಿ ಹುಟ್ಟಿಕೊಂಡ ಕನಸು 'ಮುತ್ತೋಡಿ'. 'ಮುತ್ತೋಡಿಯ ಕಾಡು ಅದೆಷ್ಟು ಚಂದವಿದೆ ಗೊತ್ತಾ' ಎಂಬ ಒಂದು ಮಾತು ಸಾಕಿತ್ತು ನಮಗೆ!! ಹಿಂದೆ ಮುಂದೆ ನೋಡದೆ ಮುಂದಿನ ವಾರ ಮುತ್ತೋಡಿಗೆ ಹೋಗುವ ಎಂಬ ಪ್ಲಾನ್ ಸಿದ್ಧವಾಗಿತ್ತು. ಅದ್ಯಾಕೋ ಕಾಲೇಜಿನ ಗಡಿಬಿಡಿಯ ಕೆಲಸಗಳ ನಡುವೆ ಆ ಮುಂದಿನ ವಾರ ತಿಂಗಳುಗಳು ಕಳೆದರೂ ಬಂದಿರಲೇ ಇಲ್ಲ.. ಪರೀಕ್ಷೆಗಳೆಲ್ಲ ಮುಗಿದ ಸಂಭ್ರಮಾಚರಣೆಗೆ ಮತ್ತೆ ಮುತ್ತೋಡಿ ನೆನಪಾಗಿತ್ತು. 
ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಹೀಗೆ ತುಂಗೆಯ ಮಡಿಲಲ್ಲೇ ಬೆಳೆದ ನಂಗೆ ಭದ್ರೆಯೆಂದರೆ ಅದೇನೋ ಸೆಳೆತ. ಸಮಾಸಮ ಬಳುಕಿ ತಣ್ಣಗೆ ಹರಿಯೋ ತುಂಗೆ ಪ್ರೀತಿಯ ಸೆಲೆಯಂತೆ ಕಂಡರೆ ರಭಸದಿ ಭೋರ್ಗರೆಯೋ ಭದ್ರಾ ಆಕರ್ಷಣೆಯ ತುತ್ತತುದಿ. ಭದ್ರೆಯ ತಟದ ಕಾಡು ಎಂಬ ಅಂಶ ಮತ್ತೂ ಸೆಳೆದಿತ್ತು ಆ ದಟ್ಟಡವಿಯೆಡೆಗೆ. ಪರೀಕ್ಷೆ ಮುಗಿದ ಮರುದಿನವೇ ಊರಿನ ಕಡೆ ಮುಖ ಮಾಡುವುದ ಬಿಟ್ಟು ಅರಣ್ಯ ಪರ್ವ ಶುರುವಾಗಿತ್ತು. 'ಬೆಳಗ್ಗೆಯೊಂದು ಸಂಜೆಯೊಂದರ ಹಾಗೆ ಎರಡು ಟ್ರಿಪ್ ಇರುತ್ತೆ, ಎಷ್ಟೊತ್ತಿಗ್ ಹೋಗ್ತೀರಾ ?' ಎಂದು ಕೇಳಿದ್ದ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರಿಗೆ ಬೆಳಗ್ಗೆಯೇ ಆಗ್ಬೋದು ಎಂಬ ಉತ್ತರ ನೀಡಿಯಾಗಿತ್ತು. ಹೀಗೆ ವರ್ಷದ ಕಡೆಯ ದಿನಕ್ಕೆ ಕಾಡೊಂದರ ನಡುವೆ ವಿದಾಯ ನೀಡೋ ಸಡಗರ ನಮ್ಮೊಡಗೂಡಿತ್ತು :) 
     ಬೆಳ್ಳಂಬೆಳಿಗ್ಗೆ 3-45 ನಿಂದಲೇ ದಡಬಡಿಸಿ ಎದ್ದು, ಜೊತೆಯಲ್ಲಿ ಉಳಿದವರಿಗೂ ಒಂದಷ್ಟು ಇರ್ರಿಟೇಟ್ ಮಾಡಿ ಎಬ್ಬಿಸಿ , ಮತ್ತಷ್ಟು ಬೈಸಿಕೊಂಡು ಚಿಕ್ಕಮಗಳೂರು ಬಿಡುವ ಹೊತ್ತಿಗೆ ಗಂಟೆ ಐದಾಗಿತ್ತು! ಮಲ್ಲಂದೂರು ರಸ್ತೆಯಲ್ಲಿ ಸುಮಾರು 40-45 ಕಿ.ಮೀ ಹಾವು ಕವಲಿನ ಹಾದಿ ಸಾಗಿದರೆ ಮುತ್ತೋಡಿಯ ಕಾಡು ಸ್ವಾಗತಿಸುತ್ತದೆ. ಗವ್ವೆನ್ನುವ ಕತ್ತಲು, ಒಂದೆಡೆ ಕಾಫಿ-ಟೀ  ಎಸ್ಟೇಟ್; ಮತ್ತೊಂದು ಬದಿ ಸಾವಿರಾರು ಅಡಿಯ ಪ್ರಪಾತ. ಆಗೊಮ್ಮೆ ಈಗೊಮ್ಮೆ ಘಮ್ಮೆನ್ನುವ ಕಾಫಿಯ ತಿರುಳ ಸುಗಂಧ( ನಮ್ಮೂರ ಕಾಫಿ ರುಚಿ ಬಲ್ಲವರಿಗಷ್ಟೇ ಇದು ಸುಗಂಧವಾಗಿರುತ್ತದೆ :ಫ್ ) , ಚಂದ್ರ ಇಲ್ಲದೇ ಸೂರ್ಯ ಮೂಡದೇ ಬರೀ ಚುಕ್ಕಿಗಳಿಂದಲೇ ಕೂಡಿದ್ದ ನೀಲಾಕಾಶ, ಕಾಡಿನ ಬಗೆಗಿಷ್ಟು ನನ್ನದೇ ರಮ್ಯ ಊಹಾಲೋಕ ಜೊತೆಗಿಷ್ಟು ಗೆಳೆಯರ ಮಾತುಕಥೆ! ಮುಂಜಾನೆಯೊಂದು ಇದಕ್ಕಿಂತ ಚಂದವಿರಲಾರದು ಅನ್ನೋ ಭಾವ ನನ್ನೊಳಗೆ.. 
    ದಿನಮಣಿ ಕಣ್ತೆರವ ಹೊತ್ತಿಗೆ ನಾವೈವರು ಭದ್ರಾ ಅಭಯಾರಣ್ಯದ ಮಡಿಲಲ್ಲಿ ಹಕ್ಕಿಗಳ ಕಲರವ ಆಲಿಸುತ್ತಿದ್ದೆವು. ಸುಮಾರು ಹತ್ತು ವರ್ಷಗಳ ಹಿಂದೆ ನಿಟ್ಟೂರಿನ ನೇಚರ್ ಕ್ಯಾಂಪ್ ನಲ್ಲಿ ತಟಸ್ಥವಾಗಿ ಕುಳಿತು ಪಕ್ಷಿಗಳ ಚಿಲಿಪಿಲಿ ಕೇಳಲು ಕಲಿತಿದ್ದ ಅಭ್ಯಾಸ ಇಂದ್ಯಾಕೋ ನಿರಾಯಾಸವಾಗಿ ನನ್ನೊಳಗೆ ಅರಳಿ ನಿಂತಿತ್ತು. ನೀಲಿ ಪುಕ್ಕ, ಕಪ್ಪು ಬಾಲ, ಕೆಂಪು ಕಣ್ಣು, ಚೀಂವ್ ಚೀಂವ್ ಸದ್ದು ಪ್ರತಿ ಪ್ರಕೃತಿ ಪ್ರೇಮಿಯ ಹೃದಯದಲ್ಲಿ ಅವರ್ಣನೀಯ ಆನಂದವ ಮೂಡಿಸುವುದಂತೂ ಸುಳ್ಳಲ್ಲ. ಪೂರ್ತಿ ಬೆಳಕಾಗಿ ಸೂರ್ಯ ರಶ್ಮಿ ಮೈ ತಾಕುವ ಮುಂಚೆಯೇ ತೆರೆದ ಜೀಪಿನಲ್ಲಿ ಸಫಾರಿ ಹೊರಡಲು ತುದಿಗಾಲಲ್ಲಿ ನಿಂತಿದ್ದೆವು ನಾವು!:) 6-45 ರಿಂದ ಮತ್ತೆರಡು ಘಂಟೆ ಈ ಯಾಂತ್ರಿಕ ಯುಗದಿಂದ ದೂರಾಗಿ ಕಾಡೊಳಗೆ ನಾವು ಕಳೆದುಹೋಗಿದ್ದೆವೋ; ನಮ್ಮಳಗೆ ಕಾಡು ಇಳಿದು ಹೋಗಿತ್ತೋ ನಾ ಕಾಣೆ!!  ಕೈ-ಕಾಲೆಲ್ಲಾ ಮರಗಟ್ಟಿ ಹೋಗುವಂಥ ತಣ್ಣನೆ ಕುಳಿರ್ಗಾಳಿ, ದಟ್ಟಾರಣ್ಯದ ನಡುವೆ ಅಪರೂಪಕ್ಕೊಮ್ಮೆ ಚುಂಬಿಸಿ ಹೋಗೋ ದಿನಕರನ ಕಿರಣಗಳು, ಜುಳು ಜುಳನೆ ಸದ್ದು ಮಾಡಿಕೊಂಡು ಹರಿಯೋ ನನ್ನಿಷ್ಟದ ಭದ್ರೆ.. "ಅನುಭವಿಸಿದವರಿಗೇ ಗೊತ್ತು ಅನುಭವದ ಮರ್ಮ!!" ದುರಾದೃಷ್ಟವಶಾತ್ ಪ್ರಾಣಿಗಳಾವುವೂ ಕಣ್ಣಿಗೆ ಬೀಳದಿದ್ದರೂ ಬೇಸರವಾಗದ ರೀತಿಯಲ್ಲಿ ಕಾಡಿನ ಮೋಡಿ ನಮ್ಮನ್ನು ಆವರಿಸಿತ್ತು. 'ಕ್ಯಾಮರಾ ತಂದಿದ್ದೂ ವ್ಯರ್ಥ.. ಒಂದಾದ್ರೂ ಹುಲಿ ಕಾಣ್ಬಾರ್ದಿತ್ತ ಮಾರಾಯ್ತಿ' ಎಂದು ಗೆಳೆಯ ಬೇಸರಿಸುತ್ತಿದ್ದರೆ, ಹುಲಿ ಕಂಡಿದ್ದರೆ ಕಾಡಿನ ಮನಮೋಹಕತೆಯೆಲ್ಲಾ ಹುಲಿಯ ನೆಪದಲ್ಲಿ ಕಳೆದುಹೋಗಿಬಿಡುತ್ತಿತ್ತೇನೋ ಎಂಬ ಭಯ ನನ್ನಾವರಿಸಿ 'ಕಾಣದಿದ್ದಿದ್ದೇ ಒಳ್ಳೆಯದಾಯ್ತು ಬಿಡು..' ಎಂದಿದ್ದ ನನ್ನ ಕೊಂದೇ ಬಿಡುವಷ್ಟು ಕೋಪದಲ್ಲಿ ನೋಡಿ ಮತ್ಯಾವುದೋ ಮರದ ಫೋಟೋ ಕ್ಲಿಕ್ಕಿಸಲು ದಾಪುಗಾಲಿಟ್ಟು ನಡೆದುಬಿಟ್ಟಿದ್ದ ಅವ. ಮರಳಿ ಬರುವ ಹಾದಿಯಲ್ಲಿ ಸೊಂಟ ಬಳುಕಿಸಿ, ಗಾಂಭೀರ್ಯದಿಂದ ನಡೆದು ಬರುತ್ತಿದ್ದ ನೂರು ಗರಿಯ ನವಿಲೊಂದೇ ನಮಗೆ ಕಂಡ ವನ್ಯಜೀವಿ. ಜೀಪಿಳಿಯುವ ಸಮಯಕ್ಕೆ ಡ್ರೈವರ್ ನ ಅದೆ ಹಳೆಯ ಡೈಲಾಗ್ ' ನನ್ನ ಸರ್ವಿಸ್ ನಲ್ಲೇ ಇದೇ ಮೊದಲು ಸಾರ್ ಒಂದೂ ಪ್ರಾಣಿ ಕಾಣಿಸದೇ ಇರೋದು.. ಛೇ ಹೀಗಾಗ್ಬಾರ್ದಾಗಿತ್ತು'!! ಕಿಸಕ್ಕೆಂದು ನಕ್ಕ ಗೆಳತಿಯ ಬಾಯಿ ಮುಚ್ಚಿಸಿ ಎಲ್ಲದಕ್ಕೂ ಅದೃಷ್ಟ ಬೇಕು ಬಿಡಿ ಎಂದು ಅವನ ಮುಂದುವರಿಯುವ 'ವಾರದ ಹಿಂದೆ ಹುಲಿ ಕಂಡಿತ್ತು ಗೊತ್ತಾ'  ಕಥೆಗೆ ಬ್ರೇಕ್ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೆವು. ಏನೇ ಆದರೂ ಕಾಡಿನೊಳಗೆ ಐದು ಜನ ಹಿಡಿದು ನಿಲ್ಲುವಷ್ಟು ದೊಡ್ಡದಾದ, ಮುನ್ನೂರು ವರ್ಷಗಳ ಇತಿಹಾಸವಿರೋ ತೇಗದ ಮರದ ಚಿತ್ರ ಈ ಕ್ಷಣಕ್ಕೂ ಕಣ್ಣಲ್ಲೇ ನಿಂತಿದೆ.  
           ಎಲ್ಲ ಅನುಭವಗಳನ್ನೂ ಮತ್ತೆ ಅಮ್ಮನೊಂದಿಗೆ ಹಂಚಿಕೊಳ್ಳುವಾಗ ಚಿಕ್ಕಮಗಳೂರ್ಯಾಕೋ ಇನ್ನೂ ಆಪ್ತವಾದಂತೆ ಭಾಸವಾಗಿತ್ತು. ಮುತ್ತೋಡಿಯ ಕಾಡಿಗೆ ಸಂಜೆಯೂ ಒಮ್ಮೆ ಹೋಗಿ ನೋಡ್ಬೇಕು ಅನ್ನೋ ಆಸೆ ಮನದೊಳಗೆ ಮೂಡಿಯಾಗಿದೆ. ಸೂರ್ಯಾಸ್ತದ ಕೆಂಪು ಕೆಂಪು ರಂಗಲ್ಲಿ ಕಾಡು ಇದರ ನಾಲ್ಕು ಪಟ್ಟು ಸೆಳೆಯಬಹುದೇನೋ ಎಂಬ ಕುತೂಹಲ ನನ್ನಲ್ಲಿ. ಈ ಊರಿನ ಮೋಹಕತೆಗಳೆಲ್ಲಾ ಅಂತೆಯೇ ಉಳಿದುಬಿಡಲಿ.
    " ಅಲ್ಲೆ ಇವೆ ಕಾಜಾಣ ಕೋಗಿಲೆ
           ಏನೆ ಗಿಳಿ ಕಮಕಳ್ಳಿಯೂ.. 
       ಕಂಪೆರೆವ ಸೀತಾಳೆ ಕೇದಗೆ 
          ಬಕುಳ ಮಲ್ಲಿಗೆ ಬಳ್ಳಿಯೂ.. 
       ನೀಲಿ ಬಾನಲಿ ಹಸಿರು ನೆಲದಲಿ 
           ಕಂಗಳೆರಡವೆ ಬಲ್ಲವು.. 
       ಅಲ್ಲಿ ಸಗ್ಗವೆ ಸೂರೆಗೊಂಡಿದೆ
            ನಂದನವೆ ನಾಡೆಲ್ಲವೂ.. "
ಮುತ್ತೋಡಿಯ ಕಾಡೆಂದರೆ ಮತ್ತೆ ಮತ್ತೆ ನೆನಪಾಗೋ ಕುವೆಂಪುರ ಸಾಲುಗಳ ಜೊತೆಗೆ ಕಾಡಿನ ಕಂಪೂ ಚಿರವಾಗಲಿ ಎದೆಯೊಳಗೆ..

ಮಳೆ ಹಾಡಾಗಲಿ.. ಬದುಕಾಗಲಿ..

ಹೊಳೆ ತುಂಬಾ ನೀರು, ಮನೆ ತುಂಬಾ ಖುಷಿ, ಮನಸ್ಸು ತುಂಬಾ ಪ್ರೀತಿ :) ಮಳೆಗಾಲ ಅಂದ್ರೆ ಯಾವತ್ತಿಗೂ ಸಂಭ್ರಮವೇ..  ಆಲಿಕಲ್ಲು, ಮುಳುಗೋ ರಾಮ ಮಂಟಪ, ಕೊಚ್ಚೆ ಕಾಲು ಹಾಗೂ ಮುರಿದುಹೋಗಿರೋ ಕೊಡೆ(ಛತ್ರಿ).. ಮಳೆಯ ಮೇಲೆ ಒಲವಾಗದೇ ಹೋಗುವುದಕ್ಕೆ ಕಾರಣವೇ ಸಿಗುವುದಿಲ್ಲವಾದೀತು.. ಪ್ರತಿ ಊರಿನ ಮಳೆಗೂ ಅದರದ್ದೇ ಆದ ಅಂದ-ಚಂದವಿದೆ, ಘನತೆ-ಗಾಂಭೀರ್ಯವಿದೆ. ತೀರ್ಥಹಳ್ಳಿಯಲ್ಲೊಂದು ಆಪ್ತಭಾವವ ಕಟ್ಟಿಕೊಡೋ ಮಳೆಹನಿಗಳು, ಚಿಕ್ಕಮಗಳೂರಲ್ಲಿ ಹೂಕಂಪನ ಮೂಡಿಸುತ್ತವೆ.. ಬೆಂಗಳೂರಿನ ಮಳೆಯಲ್ಲಿ ಒಂಟಿತನದ್ದೊಂದು ಛಾಪಿದೆ.. ಶಿವಮೊಗ್ಗದಲ್ಲಿ ನಿರ್ಲಿಪ್ತವೆಂತನಿಸೋ ಮಳೆಗಾಲ, ಸಾಗರ-ಶಿರಸಿಯಲ್ಲೆಲ್ಲಾ ಆರ್ಭಟವೆನಿಸಿಬಿಡುತ್ತದೆ. ಕಡಲೂರಿನಲ್ಲಿ ಮಳೆಯ ಲಯವೇ ಬೇರೆ! ಬಯಲುಸೀಮೆಯಲ್ಲಿ ಮಳೆಯೆಂದರೆ ಜೀವಜಲ.
ಮಳೆಗೊಂದು ತಾಳವಿದೆ.. ಧೇನಿಸಿದರೆ ನಮ್ಮದೆನಿಸೋ ರಾಗವಿದೆ.. ಶೃತಿಬದ್ಧವಾಗಿ ಸುರಿಯೋ ಮಳೆಯಲ್ಲೊಂದು ಮೌನವಿದೆ. ಮೌನದಾಚೆಗಿನ ಉಳಿದುಹೋದ ಮಾತುಗಳಿವೆ.. 
ಸುಮ್ಮನೇ ಕುಳಿತರೆ ಸಾಂತ್ವನಿಸೋ ಮಳೆ, ಖುಷಿಸ ಹೊರಟರೆ ಕುಣಿಯಲಾರಂಭಿಸುತ್ತದೆ :) ಮಳೆಯ ಹುಡುಕಿಕೊಂಡು ಊರೂರು ಅಲೆದಿದ್ದಿದೆ.. ಮಳೆಗೋಸ್ಕರವೇ ನಾಲ್ಕು ವರ್ಷದ ಓದನ್ನ ಆ ಊರಲ್ಲಿ ಓದಿದ್ದಿದೆ.. ಜೋರಾಗಿ ಮಳೆ ಬರ್ಲಿ ಅಂತೆಲ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ದೇವರಲ್ಲಿ ಬೇಡಿಕೊಂಡಿದ್ದಿದೆ.. ಮಳೆಯಾಗುವಾಗ ಸಮುದ್ರ ಹೇಗಿರತ್ತೆ? ಕಾಡಲ್ಲಿ ಮಳೆಯಾದ್ರೆ ಎಷ್ಟು ಜೋರಾಗಿ ಕೇಳತ್ತೆ? ಬೆಟ್ಟದ ಮೇಲೆ ನಿಂತಾಗ ಮಳೆಹನಿ ರಭಸ ಹೆಚ್ಚಿರತ್ತಾ? ಅನ್ನೋ ಎಕ್ಸ್ ಪೆರಿಮೆಂಟ್ ನೆಲ್ಲಾ ಅದೆಷ್ಟೋ ಬಾರಿ ಮಾಡಿದ್ದಿದೆ.. ಇವೆಲ್ಲದರ ಆಚೆಗೂ ಮಳೆಯ ಬಗೆಗಿನ ಕುತೂಹಲ ಹಾಗ್ ಹಾಗೆಯೇ ಉಳಿದುಹೋಗಿಬಿಡುತ್ತದೆ. 
ಮಳೆಯಲ್ಲಿ ಮಡಿಯುಟ್ಟು ಕೊಡೆಹಿಡಿದು, ಚಪ್ಪಲಿಯೂ ಹಾಕದೆ, ಕೆಸರು ರಸ್ತೆಯಲ್ಲೇ ದೇವಸ್ಥಾನಕ್ಕೆ ನಡೆದುಹೋಗೋ ಚಿಕ್ಕಪ್ಪ.. ’ಗಾಜನೂರು ಡ್ಯಾಮ್ ಅಲ್ಲಿ ನೀರು ಬಿಟ್ಬಿಟ್ರು ಕಣೇ ಅಕ್ಕಾ.. ಇಲ್ದಿದ್ರೆ ಇವತ್ತಿಗ್ ರಾಮ ಮಂಟಪ ಮುಳುಗಿ ರಜೆ ಸಿಕ್ತಿತ್ತು ನಮ್ಗೆ’ ಅಂತ ಹ್ಯಾಪು ಮೋರೆ ಹಾಕಿ ಕೂತಿರೋ ಪುಟ್ಟ ತಮ್ಮ.. ಮಳೆಗಾಲದಲ್ಲಿ ಶೀತವಾಗದಿರಲಿ ಅಂತ ದೊಡ್ಡಮ್ಮ ಕೊಟ್ಟಿರೋ ಪೆಪ್ಪರುಮೆಂಟಿನ ತರದ ಶುಂಠಿ ಮಾತ್ರೆ.. ಮಳೆಯಂದ್ರೆ ಮನಮುತ್ತೋ ಆಪ್ತ ಭಾವಗಳ ಸಂತೆ :)
ನೀ ಈ ಊರಿಗೆ ಮತ್ತೆ ಬಂದ್ರೆ ಮಳೇಲೊಂದು ಲಾಂಗ್ ಡ್ರೈವ್ ಕರ್ಕೊಂಡು ಹೋಗಿ ಕಡೆಗೊಂದು ಬೆಚ್ಚಗಿನ ಕಾಫೀ ಕೊಡಿಸ್ತೀನಿ ಅನ್ನೊ ಬದುಕ ಗೆಳೆಯ.. ಪೇಪರ್ ದೋಣಿಯ ಜೊತೆಗೆ ಕವನದ ಸಾಲಿರಿಸಿ   ಪೋಸ್ಟ್ ಮಾಡಿರೋ ಗೆಳತಿ.. ಮಳೆಯಾದಾಗೆಲ್ಲಾ ತಿನ್ಬೇಕು ಅನ್ನಿಸೋ ಭಟ್ರಂಗಡಿ ಪಾನಿಪೂರಿ.. ಮಳೆಯಂದ್ರೆ ಮನಕಲುಕೋ ನಿಶ್ಶ್ಯಬ್ಧ ಭಾವಗಳ ಚಡಪಡಿಕೆ :)
ಇವತ್ತಿನ್ನೂ ಆರಿದ್ರೆಯ ಮಳೆ ಮುಗಿದಿದೆ..  ನಾಳೆಯಿಂದ ಧೋ ಸುರಿಯೋ ಪುನರ್ವಸು ನಕ್ಷತ್ರದ ಮಳೆ :) 
ಮನದ ಭಾವಗಳನ್ನೆಲ್ಲಾ ಪ್ರತಿಫಲಿಸೋ ಮಳೆ ಇನ್ನಷ್ಟು ಸುರಿಯಲಿ.. ಮತ್ತಷ್ಟು ಭೋರ್ಗರೆಯಲಿ. ಮಳೆ ಹಾಡಾಗಲಿ.. ಬದುಕಾಗಲಿ. 

ಅನಾಹತ..

ಅದೊಂದು ಬದುಕ ತುಂಬಾ ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ! ಪ್ರೀತಿಯೆಂಬ ಯುದ್ಧದಲ್ಲಿ ಗೆಲ್ಲುತ್ತಲೇ ಸೋತವರ ಕಥೆ.. ಜಗತ್ತು ತೊಡಿಸಿದ ಮಹಾಪತೀವ್ರತೆಯರೆಂಬ ಹಣೆಪಟ್ಟಿಯ ಭಾರ ಹೊರಲಾರದೇ ನಲುಗಿದವರ ಕಥೆ..
ಅಲ್ಲಿದ್ದವರೈವರು.. ಸ್ವರ್ಗದ ವಸಂತೋತ್ಸವದ ಸಂಭ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಗತಕ್ಕೆ ಜಾರುತ್ತಾರೆ ಈ ನಾರೆಯರು..
ರಾಮಾಯಣದುದ್ದಕ್ಕೂ ಕಾಡುವ ಊರ್ಮಿಳೆ ತನ್ನ ವೇದನೆಗಳ ನಿವೇದಿಸುವ ಪರಿ ಆತ್ಮೀಯವೆನಿಸಿದರೂ ನಮ್ಮದಾಗುವುದಿಲ್ಲ! ಪಾತ್ರಧಾರಿಗಳೆನಿಸುತ್ತಾರೆಯೇ ಹೊರತು ರಂಗದ ಮೇಲಿದ್ದವರು ಊರ್ಮಿಳೆಯೆನಿಸುವುದಿಲ್ಲ.. ಆದರೂ ಊರ್ಮಿಳೆ ಮನ ಮುಟ್ಟುತ್ತಾಳೆ! ಮಾತುಗಳ ಮೂಲಕ, ಭಾವಗಳ ಮೂಲಕ ಅವಳ ಮೂಕ ಸಂವೇದನೆಗಳು ನೋಡುಗರನ್ನು ತಲುಪುತ್ತವೆ.. ಲಕ್ಷ್ಮಣ, ರಾಮನ ತಮ್ಮನಾಗಿ ಮಾತ್ರವಲ್ಲದೆ, ಊರ್ಮಿಳೆಯ ಗಂಡನೂ ಆಗಿದ್ದ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹದಿನಾಲ್ಕು ವರ್ಷ ಪ್ರೀತಿಸುವ ಪತಿಯನ್ನು ಅಗಲಿ ಅರಮನೆಯಲ್ಲಿ ವನವಾಸ ಅನುಭವಿಸುವ ಹದಿನಾರರ ತುಂಬು ಹರೆಯದ ಹುಡುಗಿ ಊರ್ಮಿಳೆ. ದೇಹದ ಬಯಕೆಗಳ ಮೆಟ್ಟಿ ಪ್ರೀತಿಗೆ ಹಾತೊರೆಯುತ್ತಾ ಹಪಾಹಪಿಸುವ ಅವಳಿಗೆ ವನವಾಸದ ನಂತರವೂ ಗಂಡನಾಗಿ ಲಕ್ಷ್ಮಣ ದೊರೆಯುವುದೇ ಇಲ್ಲ! ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ರಾಮಾಯಣದ ಪಾತ್ರಗಳಲ್ಲಿ ಊರ್ಮಿಳೆ ಕಾಣುವುದೇ ಇಲ್ಲ... 'ನೀನು ಲಕ್ಷ್ಮಣನ ಜೊತೆಗೆ ಕಾಡಿಗೆ ಹೋಗಿದ್ದರೆ, ಅಲ್ಲಿ ಮಾಯಾಜಿಂಕೆಯ ಬೇಟೆಯ ಸಮಯದಲ್ಲಿ ಸೀತೆಯ ಜೊತೆಯಿದ್ದಿದ್ದರೆ.. ರಾವಣನ ಬಲೆಯಲ್ಲಿ ಸೀತೆ ಬೀಳದೇ ಹೋಗುತ್ತಿದ್ದಳಾ?' ಎಂಬ ಮಂಡೋದರಿಯ ಪ್ರಶ್ನೆ ರಾಮಾಯಣವನ್ನು ನೋಡಬಹುದಾದ ಮತ್ತೊಂದು ಆಯಾಮವನ್ನು ತೋರಿಸುತ್ತದೆ..
ಪ್ರಶ್ನೆಗಳಲ್ಲಿಯೇ ಮುಳುಗೇಳುವ ಊರ್ಮಿಳೆಯ ನಂತರ ಉತ್ತರವಾಗಿ ಆವರಿಸಿಕೊಳ್ಳುವವಳು ಅಹಲ್ಯೆ! ತಾಯಿಯಿಲ್ಲದೆ ಆಶ್ರಮದಲ್ಲಿ ಬೆಳೆದ ಮಗು ಆಕೆ. ಆಶ್ರಮದ ಕಟ್ಟುಪಾಡಿಗೆ ಹೊಂದಲಾಗದೇ ಬಿಡುಗಡೆಗೆಂದು ಕಾಯುತ್ತಿರುವ ದಿನದಂದೇ ಜೀವನಪರ್ಯಂತದ ಬಂಧನಕ್ಕೆ ಒಳಗಾದವಳು. ಮೋಹಿಸದೇ ವರಿಸಿದ ಪತಿಯನ್ನು ಒಪ್ಪಲಾಗದೇ ಪ್ರತಿ ರಾತ್ರಿ ತನ್ನನ್ನು ತಾನೇ ದಹಿಸಿಕೊಂಡವಳು. ಗೌತಮರ ಸನ್ಯಾಸತ್ವದ ಜೀವನವನ್ನು ಸಹಿಸಲಾರದೇ ಎದೆ ತುಂಬಾ ಪ್ರೀತಿ ನೀಡುವ ಜೀವಕ್ಕಾಗಿ ಕಾದ ನೆಲದಂತೆ ಕಾದವಳು! ಆಗ ಬಂದಿದ್ದ ಇಂದ್ರ.. ಅವನ ಪ್ರೀತಿಗೆ, ಎದೆಯ ಹರವಿಗೆ, ತೋಳ ಬಿಸುಪಿಗೆ ಇಡಿ ಇಡಿಯಾಗಿ ತನ್ನನ್ನು ಅರ್ಪಿಸಿಕೊಂಡ ಅಹಲ್ಯೆಗೆ ಕಡೆಗೂ ಸಿಕ್ಕಿದ್ದು ಏಕಾಂತವೆಂಬ ಬಂಧನವಿಲ್ಲದ ಬಯಲು. ಇಂದ್ರನನ್ನು ಮೋಹಿಸಿದ್ದು ಹೌದು, ಅವನೊಡನೆ ಭೋಗಿಸಿದ್ದು ಹೌದು, ಇಂದ್ರನೆಂದು ತಿಳಿದೇ ಅವನೊಡನೆ ಪ್ರೀತಿಗೆ ಬಿದ್ದಿದ್ದು ಎಂಬುದನ್ನು ಇನಿತೂ ಅಂಜಿಕೆಯಿಲ್ಲದೆ ಹೇಳಿ ಉಳಿದದ್ದೆಲ್ಲವನ್ನೂ  ಕಟ್ಟುಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿ ಬಿಡುವ ಅಹಲ್ಯೆಯನ್ನು ಬಾಚಿ ತಬ್ಬಿಕೊಂಡುಬಿಡುವ ಮನಸ್ಸಾಗುತ್ತದೆ. ಗಂಡನ ನಿರಾಕರಣೆಗೆ ಒಳಗಾದ ಹೆಣ್ಣು ಪ್ರೀತಿಗಾಗಿ ಹಂಬಲಿಸಿದರೆ, ಕೈ ಚಾಚಿದರೆ ತಪ್ಪು ಎನ್ನುವ ಸ್ವಯಂಘೋಷಿತ ಬುದ್ಧಿಜೀವಿಗಳೆದುರಿಗೆ 'ಅನಾಹತ' ಬೇರೆಯದೆ ರೀತಿಯಾಗಿ ಎದ್ದುನಿಲ್ಲುತ್ತದೆ..
ಕಡೆಗೆ ಬರುವವಳು ರಾಧೆ! ಅದೇ ನಡುಮಧ್ಯಾಹ್ನದ ಕನಸಲ್ಲಿ ಬಂದು ಕೃಷ್ಣನ ಬಗ್ಗೆ ಕುತೂಹಲವ ಕೆರಳಿಸುವ ರಾಧೆ.. ಮುರುಳಿಯ ಕೊಳಲ ನಾದಕ್ಕೆ ಮಾರುಹೋದವಳು, ಅವನ ಬೆಚ್ಚಗಿನ ಸ್ಪರ್ಶಕ್ಕೆ ಮಾರುಹೋದವಳು, ನವಿರು ಪ್ರೀತಿಗೆ ಮನಸೋತವಳು.. ರಾಧೆ ಹೇಳುವ ಕಥೆ ಕಲುಕುತ್ತದೆ! ಕೊಳಲ ಬಿಸುಟು ಹೊರಟ ಕೃಷ್ಣನನ್ನು ಒಮ್ಮೆ ತಡೆದು ನಿಲ್ಲಿಸುವ ಮನಸ್ಸಾಗುತ್ತದೆ.. 'ಮಥುರೆಗೆ ಹೋಗಬೇಡವೋ ಮಾಧವಾ.. ರಾಧೆ ನೋಯುತ್ತಾಳೆ' ಎಂದು ಕೂಗಿ ಹೇಳುವ ಎಂದೆನಿಸುತ್ತದೆ. ಕಡಲು ಸೇರುವ ಮೊದಲೇ ನದಿ ಬತ್ತಿದಂತೆ  ಪ್ರೀತಿಯನ್ನು ಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಮೊದಲೇ ರಾಧೆ ಏಕಾಂಗಿಯಾಗುತ್ತಾಳೆ.. ಕೊಳಲನೂದುವ ಉಸಿರಲ್ಲಿ ಬೆಂಕೆಯಿತ್ತೇ ಎಂಬುವಷ್ಟು ವಿರಹದಲ್ಲಿ ಬೇಯುತ್ತಾಳೆ! 'ಯಾಕಾಗಿ ಬಂದೆ ನೀನು ಕೇಶವ.. ಏನಾಗಿ ಹೋದೆ ನೀನು ಕೇಶವ..' ರಾಧೆ ಕಾಡುತ್ತಾಳೆ, ಕದಲಿಸುತ್ತಾಳೆ.. ಕೃಷ್ಣ ಕರಗುತ್ತಾನೆ, ಕಣ್ಣೀರಾಗಿಸುತ್ತಾನೆ.
ಮಂಡೋದರಿ, ಗಾಂಧಾರಿಯರು ತಮ್ಮ ಕಥೆಗಳನ್ನು ವಿಸ್ತರಿಸದಿದ್ದರೂ ನೋವಿನ ಮಜಲುಗಳನ್ನು ಉಂಡ ಕುರುಹಾಗಿ ನಾಟಕದುದ್ದಕ್ಕೂ ಆಗಾಗ ಸುಳಿದಾಡುತ್ತಿರುತ್ತಾರೆ..
ಪುರಾಣದ ಸ್ತ್ರೀ ಪಾತ್ರಗಳ ಭಾವಕ್ಕೆ, ನೋವಿಗೆ ದನಿಯಾಗುವಲ್ಲಿ, ಹೊಸದೊಂದು ಆಯಾಮವನ್ನೇ ಕಟ್ಟಿಕೊಡುತ್ತಾ ಆಲೋಚನಾ ಲಹರಿಯನ್ನು ಸೆಳೆಯುವಲ್ಲಿ ನಾಟಕ ರಚನಕಾರರು ಗೆದ್ದಿದ್ದಾರೆ. ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬೇಕಿತ್ತು, ಮತ್ತಷ್ಟು ಅನುಭವಿಸಬೇಕಿತ್ತು ಎಂಬ ಆಕ್ಷೇಪಣೆಯ ಹೊರತಾಗಿಯೂ ನಾಟಕ ಗೆಲ್ಲುತ್ತದೆ. ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಅಚ್ಚುಕಟ್ಟು. ಒಟ್ಟಾರೆಯಾಗಿ 'ಅನಾಹತ' ಅವ್ಯಾಹತವಾಗಿ ಮನಸ್ಸನ್ನು ತುಂಬಿಕೊಳ್ಳುತ್ತದೆ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆ

ಬದುಕ ಒಂದು ದಡದಲ್ಲಿ ನಿಂತು ನೋಡಿದರೆ ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ, ಮತ್ತೊಮ್ಮೆ ಬಗಲಿನಲ್ಲಿಯೇ ಮಾತಿಗೆ ಕೂರುವಷ್ಟು ಆತ್ಮೀಯ. ಒಮ್ಮೆ ಕಂಡವರಾರೂ ತಿರುಗಿ ಬಂದು ವಿವರಿಸುವ ಸಾಹಸ ಮಾಡಿಲ್ಲವಾದ್ದರಿಂದ, ಸಾವೆಂಬುದು ಬದುಕಿರುವ ಎಲ್ಲ ಜೀವಿಗಳಿಗೂ  ಕಣ್ಣೆದುರಿಗಿದ್ದೇ ಕಾಣದಂತಿರುವ ಅತ್ಯದ್ಭುತ ವಿಸ್ಮಯ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆಯನ್ನು ರಂಗರೂಪವಾಗಿಸಿದರೆ ’ಮಹಾಮಾಯಿ’ ಪ್ರತ್ಯಕ್ಷಳಾಗುತ್ತಾಳೆ. ಊರಿನ ಜನರು ಅವಳಿಗಿಟ್ಟ ಹೆಸರು ’ಶೆಟವಿ ದೇವಿ’. ಸಾವಿನ ಅಧಿದೇವತೆ ಅವಳು.. ಸಂಜೀವಶಿವನೆಂಬ ಸಾಕು ಮಗ, ಗಿರಿಮಲ್ಲಿಗೆಯೆಂಬ ಸಹಾಯಕಿ. ಸಾವಿನ ತಾಯಿಯ ಮಗ ಜೀವ ಉಳಿಸುವ ವೈದ್ಯ! ಈ ವಿರೋಧಾಭಾಸವೇ ನಾಟಕದ ಮೂಲಧಾತು. ಸಂಜೀವಶಿವ ಒಮ್ಮೆ ನಾಡಿ ನೋಡಿದನೆಂದರೆ ಖಾಯಿಲೆ ಗುಣಮುಖವಾದಂತೆಯೇ ಲೆಕ್ಕ.. ಆದರೆ ಅವನು ನಾಡಿ ನೋಡುವುದಕ್ಕೆ ತಾಯಿಯ ಅಪ್ಪಣೆಯಾಗಬೇಕು. ಈ ಅಪ್ಪಣೆ ದೊರೆತ ನಂತರವೇ ವೈದ್ಯ ಮಾಡುವ ಪ್ರಕಿಯೆ ಸಂಜೀವಶಿವನಿಗೆ ವರವೂ ಹೌದು ಅಂತೆಯೇ ಸಂಕೋಲೆಯೇ ಹೌದು.. ಸ್ವಾತಂತ್ರ್ಯವೆಂಬ ಬದುಕನ್ನು, ಸಾವೆಂಬ ಸಂಕೋಲೆ ಇಂಚಿಂಚಾಗಿ ಆವರಿಸುವಾಗ ಚಡಪಡಿಸುವ ಸಂಜೀವಶಿವನ ಮನಸ್ಸು ಚಿನ್ನದ ಪಂಜರದೊಳಗಿನ ಹಸಿರು ಗಿಳಿ.. 
’ಬಂದೇ ಬರುತ್ತದೆಂದು ಗೊತ್ತಿರುವ ಸಾವನ್ನು ಕಾಯುವ ಶಿಕ್ಷೆ ಯಾರಿಗೂ ಬರಕೂಡದು’ ಎಂಬ ಪುಷ್ಪಗಂಧಿಯ ಆಳದ ಮಾತುಗಳು ಬದುಕಿನ ಕಟ್ಟಕಡೆಯ ತೀರದಲ್ಲಿ ನಿಂತಿರುವ ರಾಜಕುಮಾರಿ ಇರುವಂತಿಗೆಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಜೀವನಪ್ರೀತಿಯನ್ನೆಲ್ಲಾ ತನ್ನೆದೆಗೇ ಬಸಿದುಕೊಂಡು , ಬದುಕಬೇಕೆಂಬ ತೀವ್ರ ಹಂಬಲವಿದ್ದಾಗಿಯೂ ; ಸಾವಿನ ನಾವೆಯನ್ನೇರುವ ಪಾರಿಜಾತದಂಥಾ ಹುಡುಗಿ ರಾಜಕುಮಾರಿ ಇರುವಂತಿಗೆ.  ಯಾವುದೋ ಮುಗ್ಧತೆಯ ಸೆಳವಿಗೆ ಒಳಗಾಗಿ ಸಾವಿನ ಗುಹೆಯೊಳಗೆ ನಡೆದುಬಿಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವೈದ್ಯ ಸಂಜೀವಶಿವನನ್ನು ಎದುರುಗೊಳ್ಳುತ್ತಾಳೆ. ಅದು ಬಿಡುಗಡೆಯ ಮೊದಲ ಹಂತ. ತಾಯಿಯ ಅಪ್ಪಣೆಗೆ ವಿರುದ್ಢವಾಗಿ ಇರುವಂತಿಗೆಯ ನಾಡಿ ಮಿಡಿತಕ್ಕೆ ಸ್ಪಂದಿಸುವ ಸಂಜೀವಶಿವ ಹಾಗೂ ಜೀವನೋತ್ಸಾಹವನ್ನು ಮರಳಿಪಡೆದು ಪ್ರೀತಿಯ ಮಾಯೆಗೆ ಸಿಲುಕುವ ರಾಜಕುಮಾರಿ. 
  ನಂತರದ್ದೆಲ್ಲಾ ಪ್ರೀತಿಯನ್ನು ಉಳಿಸಿಕೊಳ್ಳಲು ಸಾವಿನ ವಿರುದ್ಧ ಸೆಣಸಾಟಕ್ಕೆ ನಿಲ್ಲುವ ಸಂಜೀವಶಿವನ ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯ ವಿವರ ಸಂಕಲನ. ಸಂಜೀವಶಿವ ನಮ್ಮೆಲ್ಲರ ಪ್ರತಿರೂಪವಾಗಿ ಕಣ್ಣೆದುರಿಗೆ ನಿಲ್ಲುತ್ತಾನೆ. ಹೆಜ್ಜೆ ಹೆಜ್ಜೆಗೂ ತಾಯಿಯೆಂಬ ಮೋಹದೊಂದಿಗೆ, ಸಾವೆಂಬ ಮಾಯೆಯೊಂದಿಗೆ, ಅಧಿಕಾರವೆಂಬ ಬಲಿಷ್ಠ ಕೋಟೆಯೊಂದಿಗೆ ನಡೆಯುವ ಅವನ ಘರ್ಷಣೆಗಳು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನಲ್ಲೊಂದು ಕೋಲಾಹಲವನ್ನೆಬ್ಬಿಸುತ್ತವೆ. ಪ್ರೀತಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವ ಇಚ್ಛೆಗಾಗಿ, ಸ್ವಾಭಿಮಾನಕ್ಕಾಗಿ ತುಡಿಯುವ ಅವನ ರೀತಿ ನಮ್ಮದೂ ಆಗಿಹೋಗುತ್ತದೆ.ಮೊದಲೆಲ್ಲೋ ಪೇಲವ ಎನಿಸುತ್ತಿದ್ದ ಅವನ ವ್ಯಕ್ತಿತ್ವ ನಾಟಕ ಮುಗಿಯುವ ಹೊತ್ತಿಗೆ ಪೂರ್ಣ ಪಾತ್ರವಾಗಿ ನಾಟುತ್ತದೆ. 
ಸಂಜೀವಶಿವನೊಡನೆ ಸೆಣಸುವ, ಪೆಟ್ಟಿಗೆ ಪ್ರತಿ ಪೆಟ್ಟು ನೀಡುವ, ಪದೇ ಪದೇ ಅವನ ಸಂಕಲ್ಪಕ್ಕೆ ಕಲ್ಲೆಸೆಯುವ ಶಕ್ತಿ ಮಹಾಮಾಯಿ! ಆ ಮಾಯೆ ಸಾವೋ, ನಮ್ಮೊಳಗಿನ ಅಂಧಕಾರವೋ, ಒಳಗೆ ಸುಪ್ತವಾಗಿರುವ ಅಹಂಕಾರವೋ ಅಥವಾ ನಮ್ಮೊಳಗಿನ ಸಾಮರ್ಥ್ಯವನ್ನು ಹೊರತರುವ ಸಲುವಾಗಿ ಕಣ್ಣೆದುರು ನಿಲ್ಲುವ ಪ್ರಬಲ ರೂಪವೋ ಎಂಬ ಗೊಂದಲ ಈ ಕ್ಷಣಕ್ಕೂ ಉಳಿದುಹೋಗಿದೆ. ಅವಳ ಭೀಕರ ರೂಪ, ಭಾವನೆಯೇ ಇಲ್ಲದಂತೆ ವರ್ತಿಸುವ , ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಅವಳದೇ ಅಂಶ , ಎಲ್ಲದರಾಚೆಗೆ ತಾಯಿಯೆಂಬ ಮಮತೆಯನ್ನು ಎದೆಯಾಳದಲ್ಲಿ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗಿಸುವ ಮಹಾಮಾಯಿ ನಾಟಕ ಮುಗಿದ ಎಷ್ಟೋ ಹೊತ್ತಿನ ನಂತರ ಒಳಗಿನ ಯಾವುದೋ ಬಾಗಿಲು ದಾಟಿ ಹೊರನಡೆಯುತ್ತಾಳೆ. ಅವಳು ಹೊರನಡೆದ ಮೇಲೆಯೇ ಒಳಗಿದ್ದದ್ದು ಬರಿದೆ ಮಾಯೆ ಎಂಬ ಸತ್ಯ ಗೋಚರವಾಗುತ್ತದೆ. 
ಈ ಸಂಘರ್ಷಗಳ ನಡುವೆ ನಡೆಯುವ ಬದುಕ ಅಷ್ಟೇನೂ ಕಷ್ಟವಲ್ಲ ಎಂಬುದಕ್ಕೆ ಸುತ್ತಲಿನ ಪಾತ್ರಗಳು ಮೂಡಿಸುವ ಹಾಸ್ಯದ ತೆಳು ಅಲೆಯೇ ಸಾಕ್ಷಿ. ಪ್ರತಿ ಪಾತ್ರವೂ ಬದುಕ ಒಂದೊಂದು ಹಂತವನ್ನು ಪ್ರತಿಬಿಂಬಿಸುವಲ್ಲಿ ಗೆಲ್ಲುತ್ತದೆ ಹಾಗೂ ತನ್ಮೂಲಕ ನಾಟಕವನ್ನೂ ಗೆಲ್ಲಿಸುತ್ತದೆ. ಆ ನೆರಳು ಬೆಳಕಿನಾಟ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬದಲಾಗೋ ಬಣ್ಣಬಣ್ಣದ ಚಿತ್ರಣ,ರಂಗತಂತ್ರ,ಪಾತ್ರಕ್ಕೆ ತಕ್ಕಂತೆ ಭೀಕರ, ಸಾತ್ವಿಕ, ಸಮಾಧಾನವೆನಿಸೋ ವಸ್ತ್ರ ಹಾಗೂ ಪ್ರಸಾಧನ ಪರಿಪೂರ್ಣತೆಯ ಹಾದಿಯಲ್ಲಿ ನಾಟಕವನ್ನು ಕೊಂಡೊಯ್ಯುತ್ತದೆ. ಪಾತ್ರಗಳು ಹಾಗೂ ಪಾತ್ರಧಾರಿಗಳು ನೋಡುಗರನ್ನು ರಂಗಲೋಕಕ್ಕೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ.
ಒಟ್ಟಾರೆಯಾಗಿ ’ಮಹಾಮಾಯಿ’ ತಂಡ ಒಂದು ಅದ್ಭುತ ರಂಗಸಂಜೆಯನ್ನು, ರಂಗಾನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ :) 

ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ..

'ಅಮ್ಮಾ, ನಾ ಸಾಹಿತ್ಯ - ಚರಿತ್ರೆ ಓದ್ಕೊಂಡು ಉಪನ್ಯಾಸಕಿ ಆಗ್ಲಾ ಮುಂದ್ಯಾವತ್ತಾದರೂ ?' ಬಟ್ಟಲು ಕಂಗಳಲ್ಲಿ ಬಿಂಬಿಸಲು ಸಾಧ್ಯವಾಗದಿರೋ ಆಸೆಗಳ ಹೊತ್ತು ನಾ ಹೇಳ್ತಿದ್ರೆ ಅಮ್ಮ ಅಷ್ಟೇ ಆಸ್ಥೆಯಿಂದ ಕೇಳ್ತಾಳೆ..,  ಚರಿತ್ರೆಯ ಹೆಸರು ಕೇಳ್ದಾಗ್ಲೆಲ್ಲಾ ಮೈಯೊಮ್ಮೆ ಕಂಪಿಸೋದುಂಟು ನಂಗೆ! ಹಸಿರು-ಕಾಡು ಎಲ್ಲವೂ ಇಷ್ಟವೇ ಆದ್ರೂ ಪುರಾತನತೆ ಹೆಚ್ಚು ಆಪ್ತ.. ನಾ ಹಿಂದಿನ ಜನ್ಮದಲ್ಲಿ ಈ ಜಾಗದಲ್ಲೆಲ್ಲಾದ್ರೂ ನಡೆದಾಡಿದ್ನಾ ಎಂಬಷ್ಟರ ಮಟ್ಟಿಗೆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕೋ ಹುಚ್ಚುತನ! ಪಳಿಯುಳಿಕೆಗಳು, ಶಿಲಾಶಾಸನಗಳು, ಭಿನ್ನವಾದ ವಿಗ್ರಹಗಳು ಸೆಳೆಯೋದೇ ಹೆಚ್ಚು.. ಇವತ್ತಿಗೂ ಯಗಚಿಯ ಹಿನ್ನೀರ ತೀರಕ್ಕಿಂತ, ಲಕ್ಯದ ಸೇತುವೆಗಿಂತ, ಕಡೆಗೆ ಗಿರಿಯ ನೀರವತೆಗಿಂತ ಬೇಲೂರಲ್ಲಿ ಸುಮ್ಮನೇ ಬಿದ್ದಿರೋ ಆ ಕಂಬಗಳ ಸಾಲೇ ಕಾಡತ್ತೆ ನನ್ನ.. 'ಈ ಕಂಬಗಳನ್ನೆಲ್ಲಾ ಕೊಡ್ತಾರಾ ಕೇಳಣ ಕಣೇ.. ನಮ್ಮನೆಗ್ ತಗೊಂಡು ಹೋಗ್ಬೇಕು ಅನ್ನಿಸ್ತಿದೆ ನಂಗೆ ' ಅಂತ ಏನೇನೋ ಮಾತಾಡಿ ಗೆಳತಿಯ ಹತ್ತಿರ ಬೈಸಿಕೊಂಡಿದ್ದಿದೆ.. ಅದ್ಯಾವುದೋ ಚಿತ್ರವನ್ನ ಕೇವಲ ಆ ನಟನಲ್ಲಿದ್ದ  ಪುರಾತನವಾದ ಕಂಬಗಳ ಬಗೆಗಿನ ಕನಸಿಗೇ ಹತ್ತಕ್ಕೂ ಹೆಚ್ಚು ಬಾರಿ ನೋಡಿದ್ದಿದೆ.. 
ನಾಗರೀಕತೆಗಳ ಬಗ್ಗೆ, ನದಿಯೊಂದು ದೇಶವ ಕಟ್ಟೋದರ ಬಗ್ಗೆ, ಧಾರ್ಮಿಕ ಆಚರಣೆಗಳ ಬಗ್ಗೆ ಓದಿದಷ್ಟೂ ಮುಗಿಯದ ಕುತೂಹಲ ನನ್ನಲ್ಲಿ! ಉತ್ಕಟತೆಯ ಕಡೆಯ ಹಂತವೇನೋ ಎಂಬುವಷ್ಟರ ಮಟ್ಟಿಗೆ ಸೆಳೆತ.. ಹಂಪಿ, ದುರ್ಗ, ಬೇಲೂರು, ಹಳೇಬೀಡು, ಕಾರ್ಕಳ, ಕೆಳದಿ, ಇಕ್ಕೇರಿ, ಮೈಸೂರು, ಶ್ರವಣಬೆಳಗೊಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗುಲಬರ್ಗಾ.. ಎಲ್ಲವೂ ನನ್ನೊಳಗೊಂದು ಕೌತುಕವ ಮೂಡಿಸಿ ,ಇವತ್ತಿಗೂ ಕಾಡಿಸಿ, ಹೋದಾಗಲೆಲ್ಲಾ ಕಣ್ಣಂಚು ಒದ್ದೆಯಾಗಿಸೋ ಸ್ಥಳಗಳೇ! ಭಾರತದ ಮೂಲೆ ಮೂಲೆ ಸುತ್ತೋ ಆಸೆಯ ಜೊತೆಗೇ ಪರ ರಾಷ್ಟ್ರಗಳಿಗೂ ಹೋಗಿ ಅಲ್ಲಿಯದೊಂದಿಷ್ಟು ಕಾಡುವ ಭಾವಗಳ ನನ್ನದಾಗಿಸಿಕೊಳ್ಳಬೇಕೆಂಬ ಹಪಾಹಪಿ ಇಂದು ನಿನ್ನೆಯದಲ್ಲ.. ಸಾಂಸ್ಕ್ರತಿಕತೆಗಳು, ಸಂಪ್ರದಾಯಗಳು, ಮನಸ್ಥಿತಿಗಳು, ಜೀವನಪದ್ಧತಿಗಳ ಬಗ್ಗೆ ಅಧ್ಯಯನ ಮಾಡೋ ಹಂಬಲ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ! ಇರಲಿ ಮುಂದ್ಯಾವತ್ತಾದರೂ ಈ ಕಂಗಳಲ್ಲೊಂದಿಷ್ಟು ಬೆರಗು ಹುಟ್ಟಿಸಿಕೊಂಡು ಅದ ನೋಡೋ ಸೌಭಾಗ್ಯ ನಂದಾಗಲಿ.. 
ಇವತ್ತು ನಾನಿಲ್ಲಿ ಹೇಳಲಿಕ್ಕೆ ಬಂದಿರೋ ಸಂಗತಿ ಇದಕ್ಕೆಲ್ಲಾ ಹತ್ತಿರದ್ದೇ.. ಭವ್ಯ ಭಾರತದ ಜೊತೆ ದಿವ್ಯ ಯೂರೋಪ್ ಸಹ ಅಷ್ಟೇ ಕದಲಿಸಿದ್ದಿದೆ ನನ್ನ! ವಿಶ್ವ ಪರ್ಯಟನೆಯ ಮೊದಲ ಭಾಗ ಯೂರೋಪೇ ಆದರೂ ಆಶ್ಚರ್ಯವೇನಿಲ್ಲ.. ಆಧುನಿಕತೆಯೇ ಆವರಿಸಿಕೊಂಡಿರುವ ಅಮೆರಿಕಾದಂತಹ ರಾಷ್ಟ್ರಗಳಿಗಿಂತ ತನ್ನೊಳಗೆ ಸಹಸ್ರ ಸಹಸ್ರ ಗೌಪ್ಯಗಳ ಇಂದಿಗೂ ಕಾಪಿಟ್ಟುಕೊಂಡು ಬಂದಿರೋ ಯೂರೋಪ್ ಅಚ್ಚರಿಯೆನಿಸುತ್ತೆ..  ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಏಷ್ಯಾದಿಂದ ವಿಭಿನ್ನವಾಗಿರೋ ಈ ದ್ವೀಪಕಲ್ಪ  ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ.. ಯೂರೋಪಿನ ಮುಖ್ಯ ಆಕರ್ಷಣೆಯೇ ಇಟಲಿಯೆಂದರೆ ತಪ್ಪಲ್ಲವೇನೋ! ರೋಮ್, ಫ್ಲಾರೆನ್ಸ್, ವೆನೀಸ್.. ಆಹ್!! ಕಣ್ಮುಂದೆಯೊಮ್ಮೆ ಸ್ವರ್ಗ ಹಾದು ಹೋದಷ್ಟು ಖುಷಿ.. ಎತ್ತರೆತ್ತರದ ಕಟ್ಟಡಗಳು, ನಿರ್ಮಾನುಶವೆನಿಸುವ ಬೀದಿಗಳು, ಆಕಾಶಕ್ಕೆ ಎರಡೇ ಹೆಜ್ಜೆ ಎಂದನಿಸೋ ಫ್ಲಾರೆನ್ಸ್ ನ ಎತ್ತರದ ದಿಬ್ಬ, ಮದಿರೆಯ ಅಮಲೇರಿಸೋ ಕ್ಷಣಗಳು.. ಸಾಗುತ್ತಲೇ ಹೋಗುತ್ತದೆ ಮೋಹಕತೆಯ ಪಟ್ಟಿ :) ಕ್ಯಾಥೋಲಿಕ್ ಚರ್ಚ್ ನ ಒಳಗೊಮ್ಮೆ ಕೂತು ಮೌನ ರಾಗವ ಧೇನಿಸೋ ಆನಂದವನ್ನ ಪದಗಳಲ್ಲಿ ವಿವರಿಸೋಕೆ ಸಾಧ್ಯವಾ? ನೀರೊಳಗರ್ಧ ಮುಳುಗಿರೋ ಮನೆಗಳಂತಹ ಕಟ್ಟಡಗಳ ನಡುವೆ ಹಾಯಿದೋಣಿಯಲ್ಲಿ ಹಾದುಹೋಗುವ ಅನುಭವವ ಜೊತೆಯಲ್ಲಿರುವವರಿಗೆ ವಿವರಿಸೋದಾದರೂ ಹೇಗೆ? ಅಲ್ಲೆಲ್ಲೋ ನಡುವೆ ಹಾದಿ ತಪ್ಪಿಸಿಕೊಂಡು ಒಮ್ಮೆ ಗೊಂದಲಕ್ಕೆ ಬಿದ್ದು ಮತ್ತೆ ಹುಡುಕಾಡಿ ಗಮ್ಯ ಸೇರೋವಾಗಿನ ರೋಮಾಂಚನವೆಲ್ಲಾ ಹರವಿಡಲಾರದ ಘಳಿಗೆಗಳೇ ಹೊರತು ಮತ್ತೇನಲ್ಲ.. ವಾಲಿದ ಗೋಪುರಕ್ಕೇನು ಕಮ್ಮಿ ಸೆಳೆಯೋ ಶಕ್ತಿಯಿದೆಯಾ? ಆ ವಾಸ್ತುಗಳನ್ನ ನೋಡುತ್ತಿದ್ದರೇ ಸಾಕು, ಮೈ ಮನವೆಲ್ಲಾ ಗರಿಗೆದರಲಾರಂಭಿಸುತ್ತದೆ.. ಗುರುತ್ವಾಕರ್ಷಣಾ ಶಕ್ತಿಯ ಅಳೆದು ತೂಗಿ ಹಾಗಿದ್ದೊಂದು ಗೋಪುರವ ಕಟ್ಟಬೇಕಾದರೆ ಅದೆಷ್ಟು ಆಲೋಚನಾ ಸರಪಳಿಗಳು ಸುತ್ತಿಕೊಂಡಿವೆಯೋ ಏನೋ ಎಂಬ ಯೋಚನೆಯೇ ಜುಮ್ಮೆನಿಸುತ್ತದೆ.. ಇನ್ನು ರೋಮ್ ಬಗ್ಗೆ ಮಾತನಾಡೋ ಅವಶ್ಯಕತೆಯೇ ಇಲ್ಲ! ಪದಕೋಶಗಳ ಮೀರಿ ಭಾವಭಿತ್ತಿಯೊಳಗೆ ನೆನಪುಗಳ ಮಹಾ ಸಾಗರವ ನಿರ್ಮಿಸೋ ಅದ್ಭುತ ನಗರ.. ಅಲ್ಲಿನ ಚೂಪು ಚೂಪು ಕಲಾಕೃತಿಗಳ ನೋಡುವಾಗೆಲ್ಲಾ ನನ್ನೂರಿನ ಗೋಲಾಕಾರದ ಕಮಾನಿನಂತಹ ರಚನೆಗಳು ನೆನಪಾಗುತ್ತವೆ! ಯಾಕೋ ಏನೋ ತಿಳಿದಿಲ್ಲ ನಂಗೆ.. ರೋಮ್ ಬಗ್ಗೆ ಬರೆಯಲು ಕುಳಿತರೆ ಪುಟಗಳು ಸಾಲದೇ ಹೋಗಬಹುದು ಅಥವಾ ಶಬ್ದಗಳು ಕರಗಿ ಹೋಗಬಹುದು.. 
ಜೀವನಶೈಲಿಯ ಬಗ್ಗೆ ಹೇಳುವುದಾದರೆ ತೀರಾ ವಿಚಿತ್ರವಲ್ಲದಿದ್ದರೂ ನಮಗೆ ಸಹ್ಯವಾಗುವಂತಹದ್ದಲ್ಲವೇನೋ! ಆಹಾರ ಪದ್ಧತಿಯಲ್ಲಿನ ನಿಸ್ಸಾರಗಳು ಒಂಥರಾ ಜಿಗುಪ್ಸೆ ಮೂಡಿಸುತ್ತವೆ.. 'ಅತಿಥಿ ದೇವೋ ಭವ' ಅನ್ನೋ ವಿಚಾರ ಸರಣಿಗಳ ನಡುವೆ ಬೆಳೆದ ಭಾರತೀಯರಾದ ನಮಗೆ ವಾಸ್ತವಕ್ಕೆ ಹತ್ತಿರವಾಗಿ ಬದುಕೋ, ವಿಶೇಷವೆನಿಸೋ ಆದರಾತಿಥ್ಯಗಳ ತೋರದಿರೋ ಆ ನೆಲ ಕಸಿವಿಸಿಯ ಛಾಯೆಯನ್ನೊಮ್ಮೆ ಮೂಡಿಸಿಹೋಗುತ್ತದೆ.. ಇದೆಲ್ಲದರ ಹೊರತಾಗಿಯೂ ಯೂರೋಪಿಯನ್ನರ ಬದುಕು ನಮ್ಮನ್ನೊಮ್ಮೆ ಕಲುಕಿ ಹೋಗದಿರೋ ಸಾಧ್ಯತೆಗಳೇ ಕಮ್ಮಿ! ಜನರ ಭಾವಗಳ ತೀರಾ ಹತ್ತಿರದಿಂದ ನೋಡೋ ನಂಗೆ ಮಾತ್ರ ಈ ತರದ ಅನುಭವವಾ ಗೊತ್ತಿಲ್ಲ ನಂಗೆ..!! ಕಡೆಗೂ ಇಟಲಿ ಭ್ರಮ ನಿರಸನವಾಗದಂತೆ ಮತ್ತೆ ತನ್ನೆಡೆಗೆ ಬರುವಂತೆಯೇ ಮಾಡುತ್ತದೆಯೇ ಹೊರತು ಆಕರ್ಷಣೆಯ ಪ್ರಮಾಣ ಎಳ್ಳಷ್ಟೂ ಕಮ್ಮಿಯಾಗುವುದಿಲ್ಲ.. 
ಇಟಲಿಯೆಂಬ ಮಹಾನಗರ ಅದರೊಳಗೆ ನನ್ನ ಸೆಳೆದುಕೊಂಡ ಪರಿಯಿದು! ಅಪ್ಪ ಆಗಾಗ ಹೇಳ್ತಿದ್ದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದೆ.. 'ಯಾವುದೇ ಜಾಗ, ಅನುಭವಗಳು ನಮ್ಮದಾಗಬೇಕಾದರೆ ನಾವೇ ಅಲ್ಲಿಗೆ ಹೋಗಬೇಕೆನ್ನೋ ಅಗತ್ಯವಿಲ್ಲ.. ಅನುಭವದ ಕಥೆಗಳನ್ನ ಮನಸ್ಸಿಟ್ಟು ಕೇಳಿದರೆ ಸಾಕು ' ಎಂದು.. ಹೌದಲ್ಲವಾ? ಗೆಳೆಯ ಇಟಲಿಗೆ ಹೊರಟಾಗ ಸಂಭ್ರಮ ಮಗ್ಗುಲಾಗಿ ನನ್ನೆಡೆಗೆ ಹೊರಳಿತ್ತು! ಈ ಹೊತ್ತಿಗೆ ಅವನ ಅನುಭವಗಳ ಕಥೆಗಳು ಮನಃ ಪಟದಲ್ಲಿ ಎಂದೂ ಕಾಣದ ಇಟಲಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿವೆ! ಫೋಟೋ, ವೀಡಿಯೋಗಳ ಜೊತೆಗೆ ಅವನಲ್ಲಿನ ಭಾವ ಬದಲಾವಣೆಯೂ ನನ್ನನ್ನಿಷ್ಟು ಬರೆಯೋ ಹಾಗೆ ಮಾಡ್ತು ಎಂದರೆ ಅತಿಶಯೋಕ್ತಿಯೇನಲ್ಲ! ಮಹಾನಗರಕ್ಕೆ ಪ್ರದಕ್ಷಿಣೆ ಹಾಕೋ ಸುಸಮಯ ಬೇಗನೇ ಬರಲಿ ನಂಗೆ ಅನ್ನೋದೇ ದಿನ ನಿತ್ಯದ ಪ್ರಾರ್ಥನೆಯಾಗಿ ಹೋಗಿದೆ.. 
ನಿಜವಾಗಿ ಆ ದೇಶವನ್ನ  ಕಣ್ತುಂಬಿಕೊಳ್ಳಬೇಕೆನ್ನೋ ತುಡಿತ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ ನನ್ನೊಳಗೇ.. ಕಾಲಮಾನದ ಅಂತರ ಮೂರೂವರೆ ಗಂಟೆಯಾದರೂ ನನ್ನೂರಿಗೂ ಅಲ್ಲಿಗೂ ಇರೋ ವ್ಯತ್ಯಾಸ ಅಜಗಜಾಂತರ.. ಗೆಳೆಯನೇ ಆ ದೂರದೂರಿನಿಂದ ತಂದಿರೋ ಪ್ರಾಚೀನತೆಯ ಪ್ರತೀಕವಾಗಿರೋ ಗಡಿಯಾರ ಟಿಕ್ ಟಿಕ್ ಅಂತಿದ್ರೆ ಎದೆಗೂಡಿಗೂ ಆ ಉಡುಗೊರೆಗೂ ಬೆಸೆದಿರೋ ನಂಟು ಮತ್ತೆ ಮತ್ತೆ ನನ್ನಲ್ಲಿಷ್ಟು ಜೀವ ಸಂವೇದನೆಗಳ ಉಂಟು ಮಾಡಿ ಹೋಗ್ತಿದೆ! ಮುಂದೆ ಇಟಲಿಗೆ ಹೋದಾಗ ಆ ನವಿಲು ಮೈಯ ಗಡಿಯಾರ ಸಮಯ ತೋರಿಸುತ್ತೆ ನಂಗೆ ಅನ್ನೋ ಕಂಪನದೊಂದಿಗೆ ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ.. :)

ಸೋಮವಾರ, ಮಾರ್ಚ್ 7, 2016

ಮಹಾದೇವನೊಳಗೊಬ್ಬ ಮಾನವ.. :)

ಮನುಷ್ಯರಲ್ಲಿ ದೈವವ ಹುಡುಕೋದಕ್ಕಿಂತ ದೇವರಲ್ಲಿ ಮಾನುಷ ಛಾಯೆಯ ಹುಡುಕೋದೆ ಜಾಸ್ತಿ ನಾನು! ದೇವರಿಗೂ ಮನಸ್ಸಿದ್ದೀತಲ್ವಾ, ಶಾಪ-ವರಗಳ ಹೊರತಾಗಿಯೂ ಭಗವಂತನಿಗೊಂದು ಬದುಕಿದ್ದೀತಲ್ವಾ ಅಂತೆಲ್ಲಾ ಯೋಚಿಸುವಾಗ ವಿಷ್ಣು ವಾಸ್ತವಕ್ಕೆ ದೂರ ಎನ್ನಿಸಿ ಶಿವ ಆಪ್ತನೆನಿಸುತ್ತಾನೆ. ಬೇಸರವೆನಿಸೋ ಸಂಜೆಗಳಲ್ಲೆಲ್ಲಾ ರಾಗವೊಂದನ್ನು ಹುಡುಕಿ ಮೋಹಕತೆಯೊಂದಿಗೆ ಬಳಿ ಬರೋ ಗೆಳೆಯ ಕೃಷ್ಣನಾಗುತ್ತಾನೆ ; ಸದಾ ಜೊತೆಗಿದ್ದು ಕಷ್ಟಕ್ಕೆ ಹೆಗಲು ಕೊಡೋ ಬಂಧು ಶಂಕರನಾಗುತ್ತಾನೆ :) 

ಹರನೆಂದರೆ ನನ್ನ ಪಾಲಿಗೆ ಕೋಪಿಷ್ಠ ತಂದೆ , ಪತ್ನಿಯನ್ನು ಅತಿಯಾಗಿ ಪ್ರೀತಿಸೋ ಆದರ್ಶ ಪತಿ , ಪ್ರಿಯತಮೆಯನ್ನು ತಲೆಯ ಮೇಲೆ ಹೊತ್ತು ತಿರುಗುವ ಭಾವುಕ ಪ್ರೇಮಿ,  ತನ್ನ ಬಂಧು-ಬಾಂಧವರ ಒಳಿತಿಗಾಗಿ ವಿಷವನ್ನೂ ಲೆಕ್ಕಿಸದೆ ಕುಡಿದ ಅದ್ಭುತ ಮನಸ್ಸಿನ ವ್ಯಕ್ತಿ , ಕಲ್ಮಶ ಬೆರೆಸದೆ ಕೇಳಿದ ಪ್ರತೀ ಆಸೆಯನ್ನೂ ನಿಮಿಷಾರ್ಧದಲ್ಲಿ ಪೂರೈಸೋ ಭೋಳೇಶಂಕರ <3 ಕಣ್ಣುಗಳಲ್ಲಿ ಕಮಲದ ಹೊಂಬೆಳಕ ಬದಲಾಗಿ ಬೆಂಕಿಯ ಕಿರಣಗಳಿವೆ ಆದ್ದರಿಂದಲೇ ಇವನು ಫಾಲನೇತ್ರ.. ತಲೆಗೊಂದು ಕಿರೀಟ, ಕೈಗೊಂದು ತೋಳಬಂಧಿ, ಸೊಂಟಕ್ಕೊಂದು ಪಟ್ಟಿ , ಬಣ್ಣ ಬಣ್ಣದ ಜರತಾರಿ , ರೇಷಿಮೆ ಪಂಚೆ; ಊಹೂಂ.. ಇದ್ಯಾವುದೂ ಸಲ್ಲ ಇವನಿಗೆ! ಬೇಕಾದಹಾಗೆ ಕೂದಲು ಬಿಟ್ಟು, ಅರ್ಧ ಚಂದ್ರನನ್ನು ಸಿಗಿಸಿಕೊಂಡು, ಇಷ್ಟವಾದ ಹಾಗೆ ಬದುಕೋ ಇವನು ಜಟಾಜೂಟಾಧಾರಿ.. ರಾಜವೈಭೋಗಗಳು ಬೇಕಿಲ್ಲದ, ಅರಮನೆಯ ಅಗತ್ಯವಿಲ್ಲದ ಇವನು ಸ್ಮಶಾನವಾಸಿ.. ಅದೆಷ್ಟು ಸರಳ ಶಿವನ ಬದುಕು :) ಪ್ರೀತಿಯ ಮಡದಿ, ಮುತ್ತಿನಂಥಾ ಮಕ್ಕಳು, ಹೆಗಲಿಗೆ ಹೆಗಲು ನೀಡೋ ನಂದಿ-ಭೃಂಗಿಯಂಥಾ ಸ್ನೇಹಿತರು! 'ನಮ್ಮ ಸಂಸಾರ- ಆನಂದ ಸಾಗರ' ಅನ್ನೋ ಸಾಲುಗಳು ಗಿರಿಜಾವಲ್ಲಭನನ್ನು ನೋಡಿಯೇ ಬರೆದಿರಬೇಕು ಅನ್ನೋ ಅನುಮಾನ ಆಗಾಗ ಸುಳಿದುಹೋಗಿದ್ದಿದೆ ನನ್ನಲ್ಲಿ.. 

ಅದೆಂತಹ ಅನುರೂಪದ ದಾಂಪತ್ಯ ದಾಕ್ಷಾಯಿಣಿ ಹಾಗೂ ಶಂಕರನದ್ದು! ತುಂಬು ಗರ್ಭಿಣಿಯನ್ನು ಯಾರದೋ ಮಾತು ಕೇಳಿ ಕಾಡಿಗಟ್ಟಿದ ರಾಮನಿಗಿಂತ, ಸತಿಯ ವಿರಹ ತಾಳಲಾರದೆ ಅಖಂಡ ತಪಸ್ಸಿಗೆ ಕುಳಿತ ಶಿವ ಇಷ್ಟವಾಗುತ್ತಾನೆ. ಬದುಕಲ್ಲಿ ಕಷ್ಟ- ಸುಖಗಳನ್ನು ಹಂಚಿಕೊಳ್ಳುವುದು ಎಲ್ಲರಿಗೂ ತಿಳಿದ ವಿಷಯವೇ ಆದರೆ ದೇಹದಲ್ಲೂ ಅರ್ಧಪಾಲನ್ನು ನೀಡಿ ಅರ್ಧನಾರೀಶ್ವರನಾದ ಉಮಾಪತಿ ಸೋಜಿಗವೆನಿಸುತ್ತಾನೆ. ಕೋಪದ ಪರಾಕಾಷ್ಠೆಯ ತಲುಪಿ ರುದ್ರನರ್ತನ ಮಾಡೋ ಕಾಲಭೈರವ, ಪ್ರೀತಿ-ಭಕ್ತಿಗೆ ಕರಗಿ ಸೌಮ್ಯ ಸ್ವರೂಪಿಯಾಗೋ ನಟರಾಜ ನಮ್ಮನೆಯೊಳಗೊಬ್ಬನೆನಿಸುತ್ತಾನೆ. ಅವನ ಗಾಂಭೀರ್ಯ, ಮಕ್ಕಳೊಡಗೂಡಿ ಆಡುವ ವಾತ್ಸಲ್ಯ, ಮುಂಗೋಪದಿಂದೊಮ್ಮೆ ಬೈದು ಮತ್ತೊಮ್ಮೆ ಸಮಾಧಾನಿಸೋ ಪರಿ  ತ್ರಿಶೂಲಧಾರಿಯೊಳಗಿನ ತಂದೆಯ  ಮುಗ್ಧತೆಯನ್ನು ಅನಾವರಣಗೊಳಿಸುತ್ತದೆ. ಭಂಗಿ ಸೇದುತ್ತಾ ಗಣಗಳ ಜೊತೆಗೆ ಊರೂರು ತಿರುಗಬೇಕಾದರೆ ಸ್ನೇಹಮಯ ನಾಯಕನಾಗಿ ಗೋಚರವಾಗುತ್ತಾನೆ. ಭಾವನೆಗಳ ಅಸಮತೋಲನೆಗೆ ಸಾಕ್ಷಿಯಾಗಿ ಮತ್ತೆ ಸ್ಥಿತಪ್ರಜ್ಞತೆಗೆ ಮರಳಿ ಬದುಕಿನ ಗತಿಯನ್ನು ಕಾಪಾಡಿಕೊಳ್ಳುವುದರಿಂದಲೇ ಲಯಕರ್ತನೆನಿಸುತ್ತಾನೆ. ಮಾನವ ಸಹಜ ಗುಣಗಳ ಪ್ರತಿರೂಪದಂತೆ ಕಾಣುವುದರಿಂದಲೇ ದಿಗಂಬರನಾದ ಈಶನು ನಮ್ಮೊಳಗೆ ಇಳಿದುಹೋಗುತ್ತಾನೆ. ಹೀಗೆಲ್ಲಾ ಸಾಮಾನ್ಯರ ಕೈಗೆಟುಕುವುದರಿಂದಲೇ ಏನೋ ಜಿ.ಎಸ್.ಎಸ್ ರವರು 
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ |
ದೀನ ಅನಾಥರ ದುಖಿಃ ದರಿದ್ರರ 
ಮುರುಕು ಗುಡಿಸಿಲಲಿ ಉಪವಾಸಿ || 
ಎಂದಿದ್ದಾರೆ..  

ಶಿವರಾತ್ರಿಯೆಂಬುದು ದಕ್ಷನನ್ನು ದಹಿಸಿ ವೀರಭದ್ರನಾಗಿದ್ದಕ್ಕೋ, ಹಾಲಾಹಲವನ್ನು ಕುಡಿದು ನೀಲಕಂಠನಾಗಿದ್ದಕ್ಕೋ, ಶಿವೆಯ ಜೊತೆಗೂಡಿ ತಾಂಡವ ನೃತ್ಯವಾಡಿದ್ದಕ್ಕೋ ; ಕಾರಣಗಳು ನೂರಿರಬಹುದು.. ಎಲ್ಲವನ್ನು ಮೀರಿ ಲೋಕಪಾಲನಾದ, ಆದರ್ಶಪ್ರಾಯನಾದ ಶ್ರೀಕಂಠ ನೆನಪಾಗುತ್ತಾನೆ :) ಎಲ್ಲರೊಳಗೆ ಸರ್ವವ್ಯಾಪಿಯಾದ, ಸರ್ವೇಶ್ವರನಾದ , ಸರ್ವಜ್ಞಾನಿಯಾದ ಸದಾಶಿವ ಆವಿರ್ಭಾವಗೊಳ್ಳಲಿ.. ತನ್ಮೂಲಕ ಉತ್ಕೃಷ್ಟ ಜೀವನದ ಅನುಭವವಾಗಲಿ ಎಂಬ ಶುಭಹಾರೈಕೆಗಳೊಂದಿಗೆ ಶಿವರಾತ್ರಿಯ ಶುಭಾಶಯಗಳು.. :) :) :)

ಶುಕ್ರವಾರ, ನವೆಂಬರ್ 13, 2015

ಭ್ರಾತೃ ಬಿದಿಗೆ

ಭ್ರಾತೃ ಬಿದಿಗೆ :
     ಭ್ರಾತೃ ಬಿದಿಗೆಯಂತೆ ಇಂದು!! ಯಮ ಧರ್ಮರಾಜ ತನ್ನ ತಂಗಿಯ ಮನೆಗೆ ಹೋಗಿ ಸಕಲಾದರಗಳನ್ನು ಸ್ವೀಕರಿಸಿ , ಹರಸಿ ಹಾರೈಸಿ ಬರುತ್ತಾನಂತೆ. ಅದೆಷ್ಟು ಚಂದವಲ್ಲವಾ ಸಂಪ್ರದಾಯಗಳು, ಹಬ್ಬಗಳು, ಅವುಗಳ ಹಿಂದಿನ ಕಥೆಗಳು :) ದೇವರಲ್ಲಿಯೂ ಮನುಷ್ಯತ್ವದ ಎಳೆ ಹುಡುಕಿ, ಅವರಲ್ಲಿನ ಸಂಬಂಧಗಳಿಗೂ ಬೆಲೆ ಕೊಟ್ಟು ಅದರ ಸುತ್ತೊಂದು ಕಥಾ ಹಂದರವ ಹೆಣೆದು ಸಂಸ್ಕೃತಿಯ ನೆಪದಲ್ಲಿ ನಮ್ಮೆದುರಿಡುವುದು ಅದ್ಭುತವೇ ಸೈ. ಧನುರ್ಧಾರಿ ದಾಶರಥಿಗಿಂತ ಸಂಸಾರಸಮೇತನಾಗಿ ನಿಂತ ಪ್ರೇಮಮೂರ್ತಿ ಶ್ರೀರಾಮಚಂದ್ರನೇ ಹೆಚ್ಚು ಆಪ್ತವಾಗುತ್ತಾನೆ ಎಂಬ ಹೆಚ್.ಎಸ್ ವೆಂಕಟೇಶಮೂರ್ತಿಯವರ ಮಾತುಗಳು ನೆನಪಾಗುತ್ತದೆ. ಯಮ ಇದ್ದಾನೋ ಇಲ್ಲವೋ ಎಂಬುದೇ ಗೊಂದಲವಾಗಿರುವಾಗ, ಆ ಯಮನಿಗೊಬ್ಬಳು ತಂಗಿ ಬೇರೆ!! ಪ್ರತೀ ಹಬ್ಬಕ್ಕೂ ತನ್ನದೇ ವೈಶಿಷ್ಟ್ಯ, ವಿಭಿನ್ನತೆ. ಆದರೆ ಅದರ ಹಿಂದಿರುವ ಹೂರಣವ ಗಮನಿಸಹೋದರೆ ಅಚ್ಚರಿಯಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ನಾಡಲ್ಲಿ ಕಾರ್ತಿಕವೆಂದರೆ ಒಂಥರಾ ವಿರಾಮದ ಸಮಯ. ಸುಗ್ಗಿಯಲ್ಲಿನ ಮೈಮುರಿಯುವ ಕೆಲಸವೆಲ್ಲಾ ಮುಗಿದು, ಅಡಿಕೆ ಕೊಯ್ಲಿಗೂ ಮುನ್ನ ಒಂದಿಷ್ಟು ವಿಶ್ರಾಂತಿ ಪಡೆಯೋ ಹೊತ್ತು. ಅಣ್ಣ ಎನಿಸಿಕೊಂಡವನಿಗೂ ಮದುವೆಯಾಗಿ ಗಂಡನ ಮನೆಯಲ್ಲಿರೋ ತಂಗಿಯ ನೆನಪಾಗುವುದರಲ್ಲಿ ತಪ್ಪೇನಿಲ್ಲ! ಇತ್ತ ತಂಗಿಯೂ ಬೇಗ ಕತ್ತಲಾಗೋ ನೆಪದಲ್ಲಿ ಮನೆಯ ಕೈಂಕರ್ಯಗಳನ್ನೆಲ್ಲಾ ಸರಸರನೆ ಮುಗಿಸಿ ತಂಪು ಸಂಜೆಯಲ್ಲಿ ತವರ ಕನವರಿಸೋ ಸಂದರ್ಭ. ದೀಪಾವಳಿಯ ಸಂಭ್ರಮ ಸಡಗರಗಳ ಜೊತೆಗೆ ತವರೂರಿಂದ ಅಣ್ಣನೂ ಬಂದರೆ ಖುಷಿಯ ಕಡೆಯ ಹಂತ ಅವಳಿಗೆ. ಅಮ್ಮನೋ-ಹೆಂಡತಿಯೋ ಬಲಿಪಾಡ್ಯಮಿಗೆಂದು ತಯಾರಿಸಿದ ಬಗೆ ಬಗೆಯ ಸಿಹಿ ತಿನಿಸುಗಳನ್ನೆಲ್ಲಾ ಕಟ್ಟಿಕೊಂಡು ತಂಗಿಯ ಮನೆಗೆ ಹೋಗುವ ಆನಂದ ಅಣ್ಣನಿಗೆ. ತಂಗಿಯ ಮನೆಯ ಸೌಭಾಗ್ಯವ ಅಣ್ಣ ಕಣ್ತುಂಬಿಕೊಳ್ಳಬೇಕು, ಅವಳ ನೋವುಗಳಿಗೊಂದಿಷ್ಟು ಸಾಂತ್ವನ ಹೇಳಬೇಕು ಜೊತೆ ಜೊತೆಗೇ ತಂಗಿಯ ಬೆಂಬಲಕ್ಕೆ ನಾವಿದ್ದೇವೆ ಎಂಬ ಸೂಕ್ಷ್ಮವ ಬೀಗರಿಗೆ ರವಾನಿಸಬೇಕು.. ಇತ್ತ ತಂಗಿಯೂ ಒಂದಿಷ್ಟು ಭಾವ ಕಳವಳಗಳ ಹೊರಹಾಕಬೇಕು, ತಾನು ಸುಖದಲ್ಲಿದ್ದೇನೆ ಎಂಬ ವಿಷಯವ ಅಣ್ಣನ ಮೂಲಕ ಅಪ್ಪ-ಅಮ್ಮನಿಗೆ ತಲುಪಿಸಬೇಕು ಹಾಗೆಯೇ ಗಂಡನ ಮನೆಯವರ ಮುಂದೆ ತನ್ನ ತವರಿನ ಸಿರಿಯ ಕೊಂಡಾಡಬೇಕು. ಅಣ್ಣನಿಗೆ ಏನಿಷ್ಟವೋ ಅದನ್ನೆಲ್ಲಾ ಕೈಯ್ಯಾರೆ ಮಾಡಿ ತನಗೆ ತೃಪ್ತಿಯಾಗುವವರೆಗೆ ಬಡಿಸಿ ಕೈತುಂಬಾ ದಕ್ಷಿಣೆ ನೀಡಿ ಸಂಭ್ರಮಿಸಬೇಕು. ಊಟದ ಮಧ್ಯ ತವರಿನ ಕಥೆಗಳ ಕೇಳಿ ಖುಶಿಸಬೇಕು! ಲಂಗ ದಾವಣಿಯುಟ್ಟು ತನ್ನ ಮುಂದೆಯೇ ಕುಣಿಯುತ್ತಿದ್ದ, ಮಾತು ಮಾತಿಗೂ ಮೂತಿ ದೊಡ್ಡ ಮಾಡಿ ಅಳುತ್ತಿದ್ದ ಹುಡುಗಿ ಸಂಸಾರದ ಭಾರವ ನಿಭಾಯಿಸುವ ಪರಿ ನೋಡಿ ಅಣ್ಣನಿಗೆ ಅಚ್ಚರಿಯಾದರೆ ; ಜಡೆ ಎಳೆದು ಕಾಟ ಕೊಡುತ್ತಿದ್ದ, ಸದಾ ಕಿತ್ತಾಡುತ್ತಿದ್ದ ಅಣ್ಣ ಜವಾಬ್ದಾರಿಯುತ ವ್ಯಕ್ತಿಯಾದ ಬಗೆಗಿಷ್ಟು ಬೆರಗು ತಂಗಿಯಲ್ಲಿ. ಕಡೆಗೆ ಮರಳುವಾಗ, ಅಣ್ಣ 'ಬೆಳೆದ ಮನೆಗೂ ಸೇರಿದ ಮನೆಗೂ ದೀಪವಾಗು ತಾಯಿ' ಎಂದು ಹರಸಿ ಹಾರೈಸುವಾಗ ಕಣ್ತುಂಬಿಕೊಳ್ಳುವ ಕ್ಷಣವನ್ನ ಪದಗಳಲ್ಲಿ ಹಿಡಿದಿಡಲು ಸಾಧ್ಯವಾ? ನಾಗರ ಪಂಚಮಿಗೆ ಭಂಡಾರ ಒಡೆಯಲು ಬಂದು ಹೋದ ಅಣ್ಣ ಮತ್ತೆ ಭ್ರಾತೃ ಬಿದಿಗೆಗೇ ಬರುವುದು. ಒಂದೊಂದು ಮಾಸಕ್ಕೆ ಒಂದೊಂದು ಕಾರಣ ಹುಡುಕಿ ತವರು ಮನೆಯ ಹಾದಿ ಕಾಯೋ ಹೆಣ್ಣಿನ ತಳಮಳಗಳು ಅವಳಿಗೆ ಮಾತ್ರ ಅರ್ಥವಾಗೋ ಸಂಗತಿ.
      ಆಧುನಿಕತೆಯೇ ಮೈತಳೆದಂತಿರೋ ಈ ಘಳಿಗೆಯಲ್ಲಿ ವಾಟ್ಸಾಪ್ನಲ್ಲೋ, ಫೇಸ್ಬುಕ್ನಲ್ಲೋ  'ಹ್ಯಾಪಿ ಭ್ರಾತೃ ಬಿದಿಗೆ' ಅಂತಲೋ, 'ಮಿಸ್ಸಿಂಗ್ ಯೂ' ಅಂತಲೋ ಒಂದು ಪೋಸ್ಟ್ ಬರೆದು ಸುಮ್ಮನಾಗೋ ಜನಗಳ ಅಂತರಂಗವ ಹೊಕ್ಕು ನೋಡಬೇಕಿದೆ ಆ ಪ್ರೀತಿಯ ಭಾವ ಅರಿಯಲು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡೋ ಈ ಯುಗದಲ್ಲಿ ಇಷ್ಟಾದರೂ ಮಾಡುತ್ತಾರಲ್ಲಾ ಎಂದು ಸಂಭ್ರಮಿಸಬೇಕೋ ಅಥವಾ ಬಂಧ-ಬಾಂಧವ್ಯಗಳ ಹುಡುಕುತ್ತಾ ಕೊರಗಬೇಕೋ ಎಂಬುದರ ನಡುವಿನ ಗೊಂದಲ ನನ್ನದು. ಕಾರಣಗಳೇನೇ ಇರಲಿ ಭ್ರಾತೃ ಬಿದಿಗೆಯಂದು ನಂಗಿಲ್ಲದ ಅಣ್ಣ ನೆನಪಾಗುತ್ತನೆಂಬುದಂತೂ ಸತ್ಯ. ಅಣ್ಣ-ತಮ್ಮಂದಿರಿಲ್ಲದೇ ಬೆಳೆದ ನಂಗೆ ಈ ಭಾವಗಳೆಲ್ಲಾ ತಿಳಿದಿಲ್ಲವಾದರೂ ಹೀಗಿದ್ದಿರಬಹುದು ಎಂದು ಕಲ್ಪನೆ ಮೂಡುವಂತೆ ಮಾಡಿದ್ದು ಅಣ್ಣ-ತಮ್ಮಂದಿರನ್ನು ಬೆಳಗ್ಗಿನಿಂದಲೂ ಕನವರಿಸುತ್ತಿದ್ದ ನಾನಿರುವ ಪಿ.ಜಿಯ ಮನೆಯೊಡತಿ.. ಅಣ್ಣ ಮಾತ್ರವಲ್ಲ ತಮ್ಮನೂ ಆಗಬಹುದು ಕಣೇ ಎಂದವರಂದರೂ ಯಾಕೋ ನಂಗ್ಯಾವತ್ತೂ ತಮ್ಮ ಇರಬೇಕೆಂಬ ಭಾವ ಕಾಡಿಲ್ಲವಾದ್ದರಿಂದ ಬರಹದ ತುಂಬೆಲ್ಲಾ ಅಣ್ಣನೇ ತುಂಬಿಕೊಳ್ಳುತ್ತಾ ಹೋದ..
      ವಿಪರ್ಯಾಸವೆಂದರೆ ಹೊತ್ತುರಿಯುತ್ತಿರುವ ಘರ್ಷಣೆಗಳ ಪರಿಣಾಮವಾಗಿ ಈ ಬಾರಿಯ ಬಿದಿಗೆಗೆ ಯಮಧರ್ಮರಾಯನಿಗೂ ತಂಗಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲವೇನೋ! ಧರ್ಮದ ದಳ್ಳುರಿಯಲ್ಲಿ ಬೇಯುತ್ತಿರುವ ಮನಸುಗಳಿಗೆಲ್ಲಾ ಬಿದಿಗೆಯ ಚಂದ್ರ ತಂಪು ನೀಡಲಿ. ವ್ಯಕ್ತಿಪೂಜೆಯ ಹೊರತಾಗಿ ವ್ಯಕ್ತಿತ್ವವನ್ನು ಆರಾಧಿಸೋ ವಿವೇಕ ಎಲ್ಲ ಗೌರವಾನ್ವಿತ ಘನತೆವೆತ್ತ ಜನಗಳಿಗೆ ಲಭಿಸಲಿ. ಯಾರ ಭಾವನೆಗಳಿಗೂ ನೋವುಂಟು ಮಾಡದೇ ಉತ್ಸವವಾಗಲೀ, ಜಯಂತಿಯಾಗಲಿ ಆಚರಿಸೋ ಪ್ರಜ್ನೆ ಸರ್ವರಿಗೂ ಮೂಡಲಿ ಎಂಬ ಸದಾಶಯದೊಂದಿಗೆ..
ಪ್ರೀತಿಯಿಂದ
ಲಹರಿ

ಬುಧವಾರ, ಸೆಪ್ಟೆಂಬರ್ 23, 2015

ಕದಡಿಹೋದ ಮನವ ಹಿಡಿದು..

ಸಂದು ಹೋದವಲ್ಲೇ ಗೆಳತೀ.. ಬದುಕಲ್ಲಿಷ್ಟು ದಿನಗಳು! ಸದ್ದು-ಗದ್ದಲವ ಮಾಡದಂತೆ.. 'ನೀ ಮಾತು ಮರೆತು ಮೌನಕ್ಕೆ ಜಾರಿದಾಗೆಲ್ಲಾ ಹುಡುಕಲು ಹೊರಡುತ್ತೇನೆ ನಾ ನಿನ್ನೊಳಗಿನ ಆ ನನ್ನ ವ್ಯಕ್ತಿತ್ವದ ಛಾಯೆಯನ್ನು' ಎಂದು ಬರೆದಿದ್ದೆ ನಾ ಅಂದು, ನಕ್ಕು ಸುಮ್ಮನಾಗಿದ್ದೆ ನೀ! ನನ್ನ ಈ ವ್ಯಕ್ತಿತ್ವ ನಿನ್ನೊಳಗೆ ಇಳಿದಿದ್ದೇ ಸುಳ್ಳಾ ಎಂದೆನಿಸಲಾರಂಭಿಸಿದೆ ಇಂದು. ತಿಂಗಳಾಯ್ತಲ್ಲೆ ಹುಡುಗಿ ನಾವಿಬ್ಬರೂ ಮಾತು ಮರೆತು , ನಮ್ಮಿಬ್ಬರ ಮನಸು ಮುರಿದು.. 'ದೃಷ್ಟಿಯಾಗತ್ತೆ ಕಣೇ ನಿಮ್ಮಿಬ್ಬರ ಗೆಳೆತನಕ್ಕೆ' ಎನ್ನುತ್ತಿದ್ದ ಗೆಳತಿಯೂ ನೀವ್ಯಾಕೆ ದೂರ ಸರಿಯುತ್ತಿದ್ದೀರ ಎಂದು ಬಿಕ್ಕಲಾರಂಭಿಸಿದ್ದಾಳೆ :( ನನ್ನೆಲ್ಲಾ ಕಂಬನಿಗಳೂ ಅರ್ಥವಾಗದಷ್ಟು ಬದುಕಿನಿಂದ ಅಂತರವ ಕಾಯ್ದುಕೊಳ್ಳಲಾರಂಭಿಸಿದ್ದೀಯಾ ನೀನು? ತಿಳಿಯುತ್ತಿಲ್ಲ ಕಣೇ.. ಬಿಡಿಸಿ ಕೇಳಲು ಧೈರ್ಯವೂ ಸಾಲುತ್ತಿಲ್ಲ ನಂಗಿಲ್ಲಿ! ಜೀವದ ಗೆಳತಿ ಎಂಬಷ್ಟು ಆಪ್ತ ಭಾವಗಳ ಸುರಿಸಿ ಯಾವಾಗಲೂ ನನ್ನವಳೇನೋ ಎನಿಸುತ್ತಿದ್ದ ನೀ ಯಾಕೋ ಈಗೀಗ ಹತ್ತಿರವಿದ್ದೂ ದೂರ.. ಆ ಬಿಟ್ಟು ಹೋದ ಗೆಳೆತನದ ಬಗ್ಗೆ ನೆನೆಪಿಸಿಕೊಂಡು ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಅತ್ತಿದ್ದರಿಂದ ಹಿಡಿದು , ಸುಖಾ ಸುಮ್ಮನೆ ಕಂಡಲ್ಲೆಲ್ಲಾ ನಗುತ್ತಿದ್ದ ಆ ವಡಾಪಾವ್ ಅಂಗಡಿ ಹುಡುಗನ ತನಕ ನನ್ನ ಬದುಕಿನ ಪ್ರತೀ ಕ್ಷಣದಲ್ಲೂ ನೀನಿದ್ದೀಯ.. ಫನ್, infatuation, ಮಸ್ತಿಗಳ ಹೊರತಾಗಿಯೂ ಬದುಕಿನ್ನೇನೋ ಬೇರೆಯದಿದೆ ಎಂಬುದ ಅರಿತವರು ನಾವು! ಅರಿತು ,ಬೆರೆತು ಜೊತೆ ನಡೆದ ಹೆಜ್ಜೆಗಳ್ಯಾಕೋ ಅಣಕವಾಡುತ್ತಿವೆ ನನ್ನ ಒಂಟಿತನವ ಕಂಡು..  ತೀರಾ ಆಪ್ತವೆನಿಸುತ್ತಿದ್ದ ಆ ಏಕಾಂತದ ಸಂಜೆಗಳ್ಯಾಕೋ ಈಗೀಗ ಅಸಹನೀಯವಾಗುತ್ತಿವೆ..  ನನ್ನೆಲ್ಲಾ ದುಃಖಕ್ಕೆ , ಕಣ್ಣೀರಿಗೆ ನಿನ್ನ ಸಾಂತ್ವನ, ದೊಡ್ಡ ನಗುವಿನ ಹಿಂದಿರುವ ನಿನ್ನ dialogue, ಪ್ರತೀ ಖುಷಿಯಲ್ಲೂ ಪಾಲು ಬೇಕೆನ್ನುವ ನಿನ್ನ ಹುಚ್ಚುತನ … ಬರೆದು ಮುಗಿಯಲಾದೀತೇನೇ? :)
ನಿನ್ನದೆಲ್ಲಾ ನನ್ನದೆನ್ನುವ ನನ್ನ ಕೆಟ್ಟ ಸ್ವಾರ್ಥ, Hospital ಬೆಡ್ ಮೇಲೆ ಅರೆಕ್ಷಣವೂ ನಿಂಗೆ ರೆಪ್ಪೆ ಮುಚ್ಚಲು ಬಿಡದ ನನ್ನ ಹಠ, ನಿನ್ನ ಅರ್ಥವಾಗದ ಜೋಕುಗಳಿಗೆ ಕಣ್ ಕಣ್ ಬಿಡುವ ನನ್ನ ಪೆದ್ದುತನ… ಎಂದಾದರೂ ಮರೆಯಲಾದೀತೇನೇ?

ಆಡಿದಾಟಗಳೇನೋ ಕಂಡ ಕನಸುಗಳೇನೋ
ಕೊನೆಯುಂಟೆ ಮೊದಲುಂಟೆ ಕನಸೆ ಜೀವ.. <3
ನನ್ನ ಬದುಕಿನ ಕನಸುಗಳನ್ನೆಲ್ಲಾ ನಿನ್ನೆದುರು ಬಿಚ್ಚಿಟ್ಟು ಹೃದಯ ಹಗುರಾಗಿಸಿಕೊಂಡ ಕ್ಷಣಗಳೆಷ್ಟೊ! ನಿನ್ನೆಲ್ಲಾ ಕನಸುಗಳಿಗೆ ಜೀವವಾಗುವ , ಸ್ಪೂರ್ಥಿ ತುಂಬುವ ಮನಸು ಕೊಡು ಭಗವಂತಾ ಎಂದು ಪ್ರಾರ್ಥಿಸಿದ ದಿನಗಳೆಷ್ಟೊ! ಲೆಕ್ಕ ಹಾಕುತ್ತಾ ಕೂತರೆ ಮತ್ತೆರಡು ವರ್ಷ ಬೇಕಾದೀತು.. ನಾ ನನ್ನ ಕಲ್ಪನೆಯ ಕೃಷ್ಣನಿಗೆ ರೂಪ ಕೊಡುತ್ತಾ ಕೂತಿದ್ದರೆ ನೀ ಲೌಕಿಕದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದೆ. ಮಳೆ, ಬಣ್ಣ ಎಂತೆಲ್ಲಾ ಭಾವಗಳ ಪದರಗಳಲ್ಲಿ ನಾ ಮೈ ಮರೆತರೆ , materialistic ಬದುಕ ಮೆರಗಿಗೆ ನೀ ಕಣ್ಣರಳುಸುತ್ತಿದ್ದೆ!! ನನ್ನೆಲ್ಲಾ ಭಾವಗಳಿಗೆ ಕಿವಿಯಾಗುತ್ತಿದ್ದ ನೀನು ನಿನ್ನ ಬೇಸರವ ಅಕ್ಷರಕ್ಕಿಳಿಸುತ್ತೇನೆ ಎಂದಾಗ ಮತ್ರ ಮತ್ತದೇ ನಿರ್ಭಾವುಕ ಮೌನಕ್ಕೆ ಜಾರುತ್ತಿದ್ದೆ.. ಎಲ್ಲಿ ಹೋದವೇ ಆ ದಿನಗಳು? ಬದುಕೆಲ್ಲೋ ಕವಲೊಡೆಯುತ್ತಿರುವ ಭಾವ ನನ್ನಲ್ಲಿ.. ಯಾಕೋ ಈ ಬಿರುಕಿಗೆ ಅವ ಕಾರಣವೆಂದೆನಿಸಿ ಅವನ್ನನೂ ಬೇಡಿಯಾಯ್ತು ನಾನು! ಮರಳಿಸಿ ನಿನ್ನ ನನ್ನೀ ಪ್ರಪಂಚಕ್ಕೆ ಎಂದು.. ಊಹೂಂ! ಅವನಿಗೂ ನಿನ್ನ ಮೌನವನ್ನು ದಾಟಿಸಿಬಿಟ್ಟಿದ್ದೀಯೇನೋ.. ಮಾತನಾಡಲೊಲ್ಲ ಅವ! ಅವನೊಡನೆ ಮಾತನಾಡುವ ತಾಳ್ಮೆಯೂ ನಂಗಿಲ್ಲ ಬಿಡು.. ಹೆಗಲಿಗೆ ಹೆಗಲು ಕೊಟ್ಟು, ಇರಿಸು-ಮುರಿಸುಗಳಿಗೆ ಬೆನ್ನು ಹಾಕಿ , ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಆ ಘಳಿಗೆಗಳು ಬದುಕಲ್ಲಿ ಮರಳಿ ಬೇಕಿದೆ ನಂಗೆ! ಅಸಹಜ ನಗುವ ಪಕ್ಕಕ್ಕೆ ಸರಿಸಿ, ಮುಖವಾಡವ ಕಳಚಿ ನಿನ್ನೊಡನೆ ಜೊತೆಗೂಡಬೇಕಿದೆ ನಂಗೆ.. ಕಹಿಯ ಬಿರುಕು ಮೂಡದಿರಲಿ ನಮ್ಮೀ ಸ್ನೇಹ ಸೇತುವಿನಲ್ಲಿ.. ಬದುಕಿಗಾಗುವಷ್ಟು ಸವಿ ನೆನಪ ಕಟ್ಟಿಕೊಂಡು ಹೊರಟು ಬಿಡುತ್ತೇನೆ ನಾ ನನ್ನೂರಿಗೆ! ಅದ್ಭುತ ಗೆಳೆತನದ ಭಾಗವಾದ ಹೆಮ್ಮೆಯ ಜೊತೆಗೆ , ನಿನ್ನದೊಂದು ಪ್ರೀತಿಯ ಅಪ್ಪುಗೆಯ ಕೊಟ್ಟು ಬೀಳ್ಕೊಡೇ ಹುಡುಗೀ.. ಕದಡಿಹೋದ ಮನವ ಹಿಡಿದು ನಾನಿಲ್ಲಿ ಒಂಟಿಯಾಗಿ ನಿಂತಿದ್ದೇನೆ ಬದುಕ ಬಗೆಗೊಂದು ಕೌತುಕವ ಹೊತ್ತು! ಅದೇ ಮುಗಿಯದ ನಗುವ ಹೊತ್ತು ನಾವು ಹೋಗುತ್ತಿದ್ದ ಆ ಕವಲು ಹಾದಿಯ ತಿರುವಿನಲ್ಲಿ.. ನೀ ಬಂದು ಜೊತೆ ಸೇರುತ್ತೀಯೆಂಬ ನಿರೀಕ್ಷೆಯೊಂದಿಗೆ! 


ಶುಕ್ರವಾರ, ಆಗಸ್ಟ್ 28, 2015

ನೂಲಿನೆಳೆ ಶ್ರೀರಕ್ಷೆಯಾಗಲಿ..:)

'ಅಕ್ಕ ಬೇಕಿರಲಿಲ್ಲ ನಂಗೆ ಅಣ್ಣ ಬೇಕಿತ್ತು' ಅಂತ ಅಮ್ಮನಲ್ಲಿ ಮುಗಿಯದ ಮುನಿಸು ತೋರಿದ್ದಿದೆ.. ಕಿವಿಯೋಲೆಯಿಂದ ಕಾಲ್ಗೆಜ್ಜೆಯ ತನಕ ಎಲ್ಲವೂ ಅಕ್ಕನದ್ದೇ ಹಾಕುವಾಗ ಅಣ್ಣ ಇದ್ದಿದ್ರೆ ಹೊಸತೇ ಸಿಗ್ತಿತ್ತಲ್ವಾ ಎಂದು ಕನವರಿಸಿದ್ದಿದೆ! ಟ್ರಿಪ್, ಎಕ್ಸ್ ಕರ್ಷನ್ ಎಂದೆಲ್ಲಾ ತಿರುಗುವಾಗ ಬೆಳ್ಳಂಬೆಳಗ್ಗೆ ಡ್ರಾಪ್ ಮಾಡೋಕೆ, ರಾತ್ರೋರಾತ್ರಿ ಮನೆಗೆ ಕರೆದುಕೊಂಡು ಬರೋಕಾದ್ರೂ ಅಣ್ಣ ಇರಬೇಕಿತ್ತು ಅಂತ ಹಂಬಲಿಸಿದ್ದಿದೆ.. ಸುಖಾಸುಮ್ಮನೆ ತಂಗಿ ಎಂದು ಕರೆದ ಪಕ್ಕದ ಮನೆಯ ಹುಡುಗನನ್ನು ಅಣ್ಣ ಎಂಬಷ್ಟೇ ಹಚ್ಚಿಕೊಂಡು , ಅವನ ಮುದ್ದಿನ ತಂಗಿಯಾಗಿ, ದೊಡ್ಡ ದೊಡ್ಡ ಚಾಕಲೇಟ್ ಗಳ ಒಬ್ಬಳೇ ಒಡತಿಯಾಗಿ, ಅವನ ಮನೆ ಮಗಳೇ ಆಗಿ ಹೋಗಿದ್ದ ದೊಡ್ಡ ಖುಷಿಯ ಸಂಭ್ರಮದ ಭಾವ ಇನ್ನೂ ಮನದಲ್ಲಿದೆ! ಅದ್ಯಾಕೋ ಅವನ ಜೊತೆಗಿದ್ದ ಭಾವಗಳೆಲ್ಲಾ ಬಂಧನಗಳಾಗಿ ಬದಲಾಗಿ ಕಾರಣವನ್ನೂ ಹೇಳದೇ ಎದ್ದು ಬಂದಂದಿನಿಂದ ಅಣ್ಣನೆಂಬ ಕನಸು ಕನವರಿಕೆ ಕಮರಿಹೋಗಿದ್ದವು..
ವರ್ಷಗಳುರುಳಿ ಸಂಬಂಧಗಳನ್ನೆಲ್ಲಾ ಅಂತೆಯೇ ಬಿಟ್ಟು ಬಂಧನಗಳನಾಗಿಸದೇ ಬದುಕೋ ರೀತಿ ಕಲಿತ ಮೇಲೆ ಜೊತೆಗೂಡಿದವರಿವರು! ನನ್ನದಲ್ಲದ ಊರಲ್ಲಿ ಹೆಜ್ಜೆ ಹೆಜ್ಜೆಗೂ ಹೆದರಿ ಕಂಗಾಲಾಗುತ್ತಿದ್ದ ನಂಗೊಂದಿಷ್ಟು ಆತ್ಮಸ್ಥೈರ್ಯವ ತುಂಬಿ ಬೆಸೆದುಕೊಂಡ ಬಾಂಧವ್ಯಕ್ಕೆ 'ಅಣ್ಣ' ಅನ್ನೋ ಹೆಸರು ನೀಡಿ ಮೊಗದಲ್ಲಿ ನಗುವ ಮೂಡಿಸಿದವರು..
ನಮ್ಮೊಳಗೊಂದಷ್ಟು ಮುಗಿಯದ ತರಲೆಗಳಿವೆ, ತೀರದ ಮಾತುಗಳಿವೆ, ಅರ್ಥವೇ ಆಗದ ಭಾವಗಳಿವೆ, ಇರಿಸು-ಮುರಿಸುಗಳ ಮಹಾಪೂರವಿದೆ, ಶುದ್ಧ ಪ್ರೀತಿಯೊಂದಿಗೆ ಮನಸುಗಳ ಬೆಸೆದಿರೋ ಆತ್ಮೀಯತೆಯಿದೆ.. 'ಅಣ್ಣಾ ಎಂತ ಗೊತ್ತೇನೋ' ಅಂತಲೇ ಶುರುವಾಗೋ ಮಾತುಕಥೆಗಳು ಕಡೆಗೆ ನಿಮ್ಮ ಕಾಲೆಳುಯುವಿಕೆಗೆ ಕೆನ್ನೆಯುಬ್ಬಿಸಿ ಕುಳಿತಾಗ ಸಿಗೋ ಸಿಲ್ಕ್ ಈಗಲೂ ಅದರ ಮಧುರತೆಯನ್ನ ನೆನಪಿಸುತ್ತದೆ! ಕಾಲೇಜಿನ ತುಂಬೆಲ್ಲಾ 'ಅಣ್ಣಾ' ಅನ್ನಬೇಡ್ವೇ, ಎಲ್ಲರೂ ಅಣ್ಣ ಅಂತಾರೆ ಅಂತೇನೋ ಹುಸಿಮುನಿಸು ತೋರಿದ್ದಿದೆ.. ಇಳಿಸಂಜೆಯ ಕೆಂಪು ಕೆಂಪು ಬೆಳಕಲ್ಲಿ ಮುಗಿದುಹೋದ ಮೊದಲ ಪ್ರೀತಿಯನ್ನ ನನ್ನ ಮುಂದೆ ಹರವಿಟ್ಟು ಬಿಕ್ಕಿದ್ದಿದೆ! ಸಾಂತ್ವನಿಸಲು ತಿಳಿಯದೇ ನಾ ಕಂಗಾಲಾದಾಗ ಮುಗುಳ್ನಕ್ಕು ಐಸ್ ಕ್ರೀಮ್ ಕೊಡಿಸಿದ್ದಿದೆ.. ಹೆಚ್ಚೇ ಎನಿಸುವಷ್ಟು ಮಾತನಾಡಿ, ಹುಚ್ಚುಚ್ಚು ತರಲೆ ಮಾಡೋ ನನ್ನೊಮ್ಮೆ ಗದರಿ, ಮತ್ತೊಮ್ಮೆ ದೊಡ್ಡ ನಗು ನಕ್ಕು ಮುದ್ದಿಸೋದಿದೆ.. ಅರ್ಧರಾತ್ರಿಯ ಅವಾಂತರಗಳಿಗೆ ಹೆಗಲು ನೀಡಿ ಸಮಾಧಾನಿಸಿದ್ದಿದೆ! ಕತ್ತಲಲ್ಲೆಲ್ಲೋ ಮಧ್ಯರಸ್ತೆಯಲ್ಲಿ ನಿಂತು ದಾರಿ ತಿಳಿಯದಾದಾಗ ಮನೆ ತಲುಪಿಸಿ 'ಇನ್ಮುಂದೆಯಾದ್ರೂ ಹುಡುಗಿಯ  ತರ ಇರೋದನ್ನ ಕಲಿತುಕೋ' ಎಂದೊಮ್ಮೆ ಗುಡುಗಿ ಹೋದದ್ದಿದೆ.. ಕೆಲಸ ಸಿಕ್ಕ ತಕ್ಷಣ ನಂಗೊಂದು ಕರೆ ಮಾಡಿ ಖುಷಿಯ ಪಾಲು ನೀಡಿದ್ದಿದೆ! ಜೊತೆಗೇ ವಾಟ್ಸಪ್ ಅಲ್ಲೆಲ್ಲಾ ಹಾಕಿ ಜಾತ್ರೆ ಮಾಡ್ಬೇಡ ಅಂತ ಬೈದಿದ್ದಿದೆ.. :D  ಗಿರಿಯ ನೆತ್ತಿಯಲ್ಲಿ ನಿಂತು 'ತಂಗೀ, ಪ್ರೀತಿಸುತ್ತಿದ್ದೇನೆ ಕಣೇ ಅವಳನ್ನ.. ಬದುಕು ಬದಲಾಗುತ್ತಲ್ವಾ' ಎಂದು ಕೇಳಿದ್ದಿದೆ.. ಸೀರೆಯುಟ್ಟು ನಾ ಸಂಭ್ರಮಿಸುವಾಗ ಚಂದ ಕಾಣ್ತೀಯಾ ಆದ್ರೂ ಪುಟ್ತಂಗಿ ಅನಿಸೋಲ್ಲ ಎಂದೇನೋ ನೆಪ ಹೇಳಿ ಮತ್ತೆ ಉದ್ದಲಂಗಕ್ಕೆ ಜೋತುಬೀಳೋ ಹಾಗೆ ಮಾಡಿದ್ದಿದೆ.. ಕಡಲ ತೀರದಂತೆ ಕಾಣೋ ಹಿನ್ನೀರ ತಟದಲ್ಲಿ ನಿಂತು ಹೆಗಲು ತಬ್ಬಿ ' ನಿನ್ನಂಥಾ ಮಗಳು ಬೇಕು ಕಣೇ ಮುದ್ದಮ್ಮಾ' ಎಂದು ನನ್ನನ್ನೊಮ್ಮೆ ಭಾವುಕತೆಯಲ್ಲಿ ತೇಲಿಸಿದ್ದಿದೆ.. ಹಾವುಕವಲಿನ ರಸ್ತೆಗಳಲ್ಲಿ ಹೆಂಗೆಂಗೂ ಬೈಕ್ ಓಡಿಸಿ ಕಡೆಗೊಮ್ಮೆ 'ಗಾಬರಿಯಾಯ್ತೇನೇ ಪುಟ್ಟಿ' ಎಂದು ಕಣ್ಣುಮಿಟುಕಿಸಿದ್ದಿದೆ.. :ಫ್ ಹುಟ್ಟುಹಬ್ಬದ ದಿನ ದೊಡ್ಡದೊಂದು ಟೆಕ್ಸ್ಟ್ ಕಳಿಸಿ, ಚಂದದೊಂದು ಚಿತ್ರ ಬಿಡಿಸಿ , ನಂಗಿಷ್ಟವಾದದ್ದನ್ನೆಲ್ಲಾ ಕೊಡಿಸಿ ರಾಜಕುಮಾರಿಯ ಫೀಲ್ ಮೂಡಿಸಿದ್ದಿದೆ! :) 

ರಾಖಿ ಹಬ್ಬಕ್ಕೆ ದೂರದೂರಿಂದ ಬಂದು ಚಾಕಲೇಟ್ ಗಳ ಮೂಟೆ ಕೊಡಿಸಿ 'ಸಿಹಿಯಿರಲಿ ಕಣೇ ಬದುಕ ತುಂಬೆಲ್ಲಾ' ಎಂದು ಹರಸಿ ಹಾರೈಸಿದ್ದಿದೆ.. 'ಕನಸುಗಳೇಕೋ ಕೈ ತಾಕುತ್ತಿಲ್ಲವೋ ಅಣ್ಣಾ.. ಬೇಸರಿಸಿದೆ ಜಗ' ಎಂದರೆ ಕೈ ಹಿಡಿದೆತ್ತಿ ನಾ ಕಂಡ ಕನಸುಗಳನ್ನೆಲ್ಲಾ ದಕ್ಕಿಸಿಕೊಳ್ಳುವವರೆಗೆ ಜೊತೆ ನಿಂತಿದ್ದೆದೆ.. ತೀರಾ ಅವಲಂಬಿಸುತ್ತಿದ್ದೇನೆ ಅಂತನಿಸಿದಾಗೆಲ್ಲಾ ನನ್ನಿಂದ ದೂರ ನಿಂತು ನನ್ನ ನಾ ಸಂಭಾಳಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಬಂದಾಗಲೇ ಬಳಿ ಬಂದದ್ದಿದೆ! ನೆನಪುಗಳ ರಾಶಿ ಹಾಕಿ ಕುಳಿತರೆ ಮನಸೆಲ್ಲಾ ಒದ್ದೆ ಒದ್ದೆ.. ಮಳೆಯಾದ ಮೇಲಿನ ಲಾಂಗ್ ಡ್ರೈವ್ ಗೆಲ್ಲಾ ನೆನಪಾಗ್ತೀಯಾ ಕಣೇ ಹುಡುಗೀ ಅಂತನ್ನೋ ಗೆಳೆಯನಿಗಿಂತ ಮಳೇಲಿ ಜಾಸ್ತಿ ನೆನಿಬೇಡ ಜ್ವರ ಬರತ್ತೆ ಅನ್ನೋ ಅಣ್ಣಂದಿರೇ ಹೆಚ್ಚು ಇಷ್ಟವಾಗ್ತಾರೆ ನಂಗೀಗ.. ' ನೈಲ್ ಪಾಲಿಶ್ ಕಲರ್ ಚಂದ ಇಲ್ಲ' ಎಂಬುದರಿಂದ ಹಿಡಿದು 'ಪ್ರೀತಿ ಪ್ರೇಮ ಎಲ್ಲಾ ನಿಂಗೆ ಸರಿ ಹೊಂದಲ್ವೇ.. ಇದ್ದುಬಿಡು ಬಾನ ತುಂಬಾ ಹಾರಾಡೋ ಹಕ್ಕಿಯಾಗಿ ' ಎಂಬಲ್ಲಿಯವರೆಗೆ ಬದುಕ ಪ್ರತಿ ನಿರ್ಧಾರದಲ್ಲೂ ಅವರದ್ದೊಂದು ಪ್ರೀತಿಯ ಅಪ್ಪಣೆಯಿದ್ದೇ ಇದೆ.. ಪಿ.ಜಿ ಯಲ್ಲಿನ ಗಲಾಟೆಗಳಿಗೆ ಅತ್ತು ಕಣ್ಣು ಕೆಂಪಾದಾಗೆಲ್ಲಾ ಗಂಟೆಗಟ್ಟಲೆ ಪಕ್ಕ ಕೂತು ಕಡೆಗೊಂದು ಗೋಲ್ ಗಪ್ಪ ಕೊಡಿಸಿ 'ಬದುಕಲ್ಲಿನ್ನೂ ಕಲಿಯಬೇಕಿದ್ದು ಹೆಚ್ಚಿದೆ ನಿಂಗೆ' ಅಂತೆಲ್ಲಾ ಉಪದೇಶ ಕೊಡೋದಿದೆ.. ಕಾಲೇಜ್ ಫಂಕ್ಷನ್ ಅಂತ ಊರೆಲ್ಲಾ ತಿರುಗೋವಾಗೋ ಹೆದರೋ ಅಪ್ಪ-ಅಮ್ಮಂಗೆ ಫೋನ್ ಮಾಡಿ 'ನಾ ನೋಡ್ಕೋತೀನಿ ಅಂಕಲ್ ಆರಾಮಾಗಿರಿ' ಅಂತೆಲ್ಲಾ ಧೈರ್ಯ ತುಂಬಿದ್ದಿದೆ.. ಈಗಲೂ ಅಮ್ಮನಿಗೆ ದೂರು ಹೇಳ ಹೋದರೆ ನಿನ್ನಣ್ಣಂದಿರಿದ್ದಾರಲ್ಲಾ ಸರಿ ಮಾಡೋಕೆ ಎಂತಂದು ನಗೋದಿದೆ! ;) 'ನಿನ್ನಪ್ಪ-ಅಮ್ಮಂಗೆ ಹೇಳಿರೇ.. ನಿನ್ನ ಮದುವೆಗೆ ನಾನೇ ಅರಳು ಹಾಕೋದು' ಅನ್ನೋ ಮಾತು ಕೇಳಿದಾಗೆಲ್ಲಾ ಕಣ್ಣಂಚಲ್ಲಿ ನೀರ ಸೆಲೆ..
'ತಂಗೀ.. ಈ ಸಲದ ರಾಖಿ ಹಬ್ಬಕ್ಕೆ ಎಂತ ಗಿಫ್ಟ್ ಬೇಕೇ' ಅನ್ನೊ ಮೆಸೇಜ್ ನೋಡಿ ನೆನಪಾದ ಭಾವಗಳನ್ನೆಲ್ಲಾ ಗುಡ್ಡೆ ಹಾಕುತ್ತಾ ಹೋದಾಗ ಹಿಂಗೊಂದು ಬರಹವಾಯಿತು! :*  ಮನದ ಜೊತೆಗೇ ಮನೆಯಲ್ಲೂ ನಂಗೊಂದು ಸ್ಥಾನ ನೀಡಿ ಅವರ ಮನೆಗಳಲ್ಲೂ ಮುದ್ದು ಮಗಳಾಗಿಸಿರೋ ಇವರ ಬಗ್ಗೆ ಬದುಕ ಪೂರ್ತಿ ಮುಗಿಯದ ಕೃತಜ್ಞತೆಯಿದೆ.. ಎಲ್ಲ ಅಣ್ಣಂದಿರಿಗೂ ಬ್ಲಾಗ್ ಲೋಕದಿಂದೊಂದು ಶುಭಾಶಯ ಹೇಳಿ ಹೋಗೋ ನೆಪದಲ್ಲಿ ಬಂದವಳು ನಾನಿಲ್ಲಿ! '' ಕಳೆದು ಹೋದ ಖುಷಿಗಳನ್ನು ಮಡಿಲಿಗೆ ತಂದು ಸುರಿದವರು ನೀವು.. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾದವರು ನೀವು.. ನೂಲಿನೆಳೆ ಶ್ರೀರಕ್ಷೆಯಾಗಲಿ..:) ಬಾಂಧವ್ಯ ಭದ್ರವಾಗಲಿ.. ಪ್ರೀತಿ ಚಿರವಾಗಲಿ :*  ರಕ್ಷಾ ಬಂಧನದ ಶುಭಾಶಯಗಳು " 
ಇಂತಿ ಪ್ರೀತಿಯ 
ಲಹರಿ.. 


ಶನಿವಾರ, ಆಗಸ್ಟ್ 1, 2015

ಜುಲೈ 26!!

ಒಂದೈದು ವರ್ಷದ ಮಗು ನಾನಾಗ! ಅಪ್ಪನ ಕೆಲಸದ ನಿಮಿತ್ತ ಅದ್ಯಾವುದೋ ಕುಗ್ರಾಮದಲ್ಲಿ ವಾಸ.. ದೂರದರ್ಶನ, ಪತ್ರಿಕೆಗಳೆಲ್ಲಾ ನಮ್ಮನ್ನು ತಾಕುತ್ತಿದ್ದಿದ್ದು ಅಷ್ಟಕ್ಕಷ್ಟೇ! ಆಕಾಶವಾಣಿ ಮಾತ್ರ ಕೈಗೆಟುಕುತ್ತಿತ್ತು.. ಅಪ್ಪ ಹೇಳೋ ರಾಜ-ರಾಣಿಯರ ಕಥೆ ಕೇಳಿ ಮಲಗುತ್ತಿದ್ದ ದಿನಗಳವು.. ಆ ಕಥೆಗಳಲ್ಲಿ ಬರೋ ಸುಕೋಮಲೆಯರು , ಅವರ ಪ್ರೀತಿಯ ಸಾಲುಗಳು ಅಕ್ಕನಿಗೆ ಇಷ್ಟವಾಗ್ತಿದ್ರೆ ನಂಗೆ ಯುದ್ಧ-ಹೋರಾಟ ಅಂತೆಲ್ಲಾ ಬಂದಾಗ ಮಾತ್ರ ಕಥೆ ಇಂಟೆರೆಸ್ಟಿಂಗ್ ಅನ್ನಿಸ್ತಿತ್ತು.. ಅಭಿಮನ್ಯು ಅಂದ್ರೆ ಪಂಚಪ್ರಾಣ! ತನ್ನ ಸ್ಥಾನಕ್ಕಾಗಿ ತಪಸ್ಸು ಮಾಡೋ ಧೃವ, ಅರ್ಜುನನೊಂದಿಗೆ ಸಮಾಸಮ ಯುದ್ಧ ಮಾಡೋ ಕರ್ಣ.. ಎಷ್ಟೋ ದಿನ ಅಪ್ಪನಲ್ಲಿ ಹೇಳಿದ್ದೇ ಕಥೆ ಹೇಳಿಸಿ ಮಲಗಿದ್ದುಂಟು!
ಇನ್ನೂ ಮಳೆಗಾಲ ಶುರುವಾಗಿ ಹೆಚ್ಚು ದಿನಗಳಾಗಿರಲಿಲ್ಲ.. ಅಪ್ಪ ಯಾಕೋ ಆತಂಕದಲ್ಲಿದ್ದ ಹಾಗಿತ್ತು.. ಕಾರಣ ಕೇಳೋವಷ್ಟು ಧೈರ್ಯ ಇರಲಿಲ್ಲವಾದ್ದರಿಂದ ನಾನೂ ಸುಮ್ಮನಾಗಿದ್ದೆ. ಅವತ್ತು ಕಥೆ ಹೇಳೋಕೆ ಬಂದಿದ್ದ ಅಪ್ಪ ಕಣ್ಣಂಚಲ್ಲಿ ನೀರು ತುಂಬಿಕೊಂಡು ನಿಜವಾದ ಯುದ್ಧದ ಕಥೆ ಹೇಳ್ತೀನಿ ಅಂತಂದಿದ್ದರು! ನಂಗೋ ಹಿಡಿಸಲಾಗದ ಆಶ್ಚರ್ಯ.. ನಿಜಕ್ಕೂ ಯುದ್ಧ ಮಾಡ್ತಾರ ಅಂತ ಬೆರಗುಗಣ್ಣಿಂದ ಕೇಳಿದ್ದೆ.. ಆಮೇಲೆಲ್ಲಾ ಅಪ್ಪ ಆಕಾಶವಾಣಿಗೆ ಕಿವಿಗೊಟ್ಟು ಕೇಳೋದು ರಾತ್ರಿ ಅದೇ ಕಥೆಗಳನ್ನ ನಂಗೆ ಹೇಳೋದು ಇದೇ ನಡೆಯುತ್ತಿತ್ತು! ತೀರಾ ಸನ್ನಿವೇಶಗಳು, ಅಂಕಿಅಂಶಗಳು ನೆನಪಿಲ್ಲವಾದರೂ ಇಂದಿಗೂ ಆ ಹೆಸರುಗಳು , ಜಾಗಗಳು ಅಚ್ಚೊತ್ತಿದೆ ಮನದಲ್ಲಿ :) ಅಮ್ಮನ ಬಳಿ ಇಂಥದೇ ಕಥೆಗಳನ್ನ ನನ್ನ ಬಾಲ ಭಾಷೆಯಲ್ಲಿ ವಿವರಿಸೋವಾಗ ಅವಳ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.. ದೇವರ ಮುಂದೊಂದು ದೀಪ ಹಚ್ಚಿ ಕುಕ್ಕರುಗಾಲಿನಲ್ಲಿ ಕೂತು   ಅವರನ್ನೆಲ್ಲಾ ಕಾಪಾಡಪ್ಪಾ ಭಗವಂತಾ ಎಂದು ಪ್ರಾರ್ಥಿಸಿಯೇ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದುದು ಅಮ್ಮ! 
      ಬುದ್ಧಿ ಬೆಳೆದ ಮೇಲೇಯೇ ಕಾರ್ಗಿಲ್ ಯುದ್ಧದ ತೀವ್ರತೆಗಳು ಅರ್ಥವಾಗಿದ್ದು! ಬದುಕಲ್ಲೊಮ್ಮೆ ಅವರ ಕಂಡು ಕೈ ಮುಗಿಯಬೇಕೆಂಬ ಉತ್ಕಟತೆ ಆರಂಭವಾಗಿತ್ತು.. :) ಇಂದಿನವರೆಗೂ ಸಿಕ್ಕ ಯೋಧರಿಗೆಲ್ಲಾ ಕಣ್ಣ ಹನಿಯೊಂದಿಗಿನ ಸಮರ್ಪಣಾ ಭಾವದ ಧನ್ಯವಾದವನ್ನ ತಿಳಿಸಿದ್ದೇನೆ! ನಮ್ಮ ಕ್ಷೇಮಕ್ಕೆ ಸಕಲವನ್ನೂ ಧಾರೆಯೆರೆವ ಅವರೆಡೆಗೆ ಬದುಕ ಪೂರ್ತಿ ಮುಗಿಯದ ಆರಾಧನೆ ನನ್ನಲ್ಲಿ.. ಸೈನಿಕರ ಮರಣದ ಕಥೆ ಕೇಳುವಾಗೆಲ್ಲಾ ಅಪ್ಪನಲ್ಲಿ ಗೊಂದಲವ ಹರವಿಡುತ್ತಿದ್ದೆ! ಅವರ ಮಕ್ಕಳೆಲ್ಲಾ ಮುಂದೇನು ಮಾಡ್ತಾರೆ ಅಂತ.. ನಿನ್ನ ಹಾಗೇ ಅವರೆಲ್ಲಾ ಧೈರ್ಯವಂತರು ಅಪ್ಪನ ಬದುಕನ್ನೇ ಮಾದರಿಯನ್ನಾಗಿಟ್ಟುಕೊಂಡು ಬದುಕುತ್ತಾರೆ ಅಂತೇನೋ ಅಪ್ಪ ಹೇಳಿ ಸಮಾಧಾನಿಸಿದ್ದ ನೆನಪು.. ನಾನೂ ಯೋಧನ ಮಗಳಾಗಬಾರದಿತ್ತಾ ಎಂದೆನಿಸಿತ್ತು ಆಕ್ಷಣಕ್ಕೆ.. !! ತದನಂತರದ್ದೆಲ್ಲಾ ಮಾಮೂಲಿ ಹುಡುಗಿಯ ಬದುಕೇ ನಂದೂ.. ಅದೇ ಬಣ್ಣ ಬಣ್ಣದ ಬಟ್ಟೆಯ ಗುಂಗಲ್ಲಿ , ಪ್ರಪಂಚದ ಬೆರಗಲ್ಲಿ ಮುಳುಗಿ ಹೋದವಳೇ ನಾನು! ಕಿಶೋರಾವಸ್ಥೆ ದಾಟಿ ಹರೆಯಕ್ಕೆ ಬಂದಾಗಲೂ ಎಲ್ಲರಂತೆ ಸಿನಿಮಾ ಹೀರೋಗಳ ಗುಂಗಲ್ಲೇ ರಾತ್ರಿ ಪೂರ ನಿದ್ದೆ ಬಿಟ್ಟವಳು.. ಅದ್ಯಾವುದೋ ಪ್ರೇಮ ಚಿತ್ರಗೀತೆಯನ್ನ ಹಗಲೂ ಇರುಳೂ ಕೂತು ಕಂಠ ಪಾಠ ಮಾಡಿದವಳು! ಅಪರೂಪಕ್ಕೊಮ್ಮೆ ದೇಶಭಕ್ತಿ ಉಕ್ಕಿ ಹರಿಯುತ್ತಿದ್ದಾದರೂ ನಾ ಮಾಡಿದ್ದ ಕೆಲಸ ಯೋಧರಿಗೆ ಕೈ ಮುಗಿಯುವುದೊಂದೇ.. ಬಾಲ್ಯದ ಅಭ್ಯಾಸದಂತೆ ಅದೊಂದು ನನ್ನೊಳಗೇ ಬೆಳೆದುಬಂದಿತ್ತು!
                                         'ಅವ' ಸಿಗುವ ತನಕ ನನ್ನದೂ ತೀರಾ ಸಾಮಾನ್ಯ ಬದುಕಾಗಿತ್ತು.. ಬದುಕ ತಿರುವಿನಲ್ಲೆಲ್ಲೋ ಅವ ಕೈ ಹಿಡಿದಿದ್ದ! ಹಳೆಯ ಜನ್ಮದ ನೆನಪ್ಯಾವುದೋ ತಾಕಿ ಹೋದಂತಾಗಿತ್ತು ನನ್ನೊಳಗೆ.. ಅವನಿಗಿದ್ದ ಏಕೈಕ ಗುರಿ ಪರಮವೀರ ಚಕ್ರ! ನನ್ನೊಳಗೆ ಹುದುಗಿಹೋಗಿದ್ದ ಅದೆಷ್ಟೋ ಆಸೆ ಕನಸುಗಳನ್ನ ಅವ ಕೆದಕಿತೆಗೆದಿದ್ದ.. ಅವನ ಕಣ್ಣಲ್ಲಿ ನಕ್ಷತ್ರಗಳ ಮೇಲಿದ್ದ ವಾಂಛೆ ಜಗತ್ತಿನ ಅಷ್ಟೈಶ್ವೈರ್ಯಗಳನ್ನೂ ಕಾಲಕಸ ಮಾಡಿತ್ತು! ಪ್ರೀತಿಯಾಗಿತ್ತು ಅವನ ಮೇಲೆ.. ಒಲವಾಗಿತ್ತು ಅವನ ಕನಸ ಮೇಲೆ! ಪ್ರೀತಿಯ ಭಾವ ವಿನಿಮಯ ಮಾಡಿಕೊಂಡ ಮೇಲೂ ನಮ್ಮೊಳಗೆ ಯಾವುದೇ ರಸಿಕ ಸಂವಾದಗಳಿರಲಿಲ್ಲ.. ತುಂಟತನ, ದೈಹಿಕ ಬಯಕೆಗಳೆಲ್ಲವೂ ದೂರಾತಿದೂರ.. ಅವನ ಕನಸಿಗೆ ಹೆಜ್ಜೆ ಜೋಡಿಸೋ ಆತ್ಮಬಂಧು ನಾನಾಗಿದ್ದೆ! ಅಪ್ಪನ ರಾಜಕುಮಾರಿಯಾಗಿ ಮೆರೆದವಳು ಇವನ ಹೃದಯ ಸಿಂಹಾಸನ ಅಲಂಕರಿಸಹೊರಟಿದ್ದೆ.. 'ಸಿಂಹಾಸನದ ಪಕ್ಮದಲ್ಲೊಂದು ಜಾಗ ಮಾಡಿ ನಾ ನಿನ್ನ ಕೂರಿಸಿಯೇನು ಕಣೇ ಹುಡುಗೀ, ಆ ಸ್ಥಾನವನ್ನಾಗಲೇ ತಾಯಿ ಭಾರತಿಗೆ ಸಮರ್ಪಿಸಿಯಾಗಿದೆ' ಎಂದಿದ್ದ ಅವ.. ಪ್ರೀತಿ ಇಮ್ಮಡಿಯಾಗಿತ್ತು! ಅಲ್ಲಿಂದ ಮುಂದೆ ಹಿಂತಿರುಗಿ ನೋಡಿದ್ದಿಲ್ಲ ನಾವು.. ಪ್ರೀತಿಯ ಪ್ರತಿ ಘಳಿಗೆಯಲ್ಲೂ ದೇಶಪ್ರೇಮ ಸುರಿದಿದ್ದಿದೆ, ಕಂಡ ಕನಸುಗಳಲ್ಲೆಲ್ಲಾ ತಾಯಿ ಭಾರತಿಯ ಕನವರಿಕೆಗಳಿವೆ, ಹಾಕಿಕೊಂಡ ಆಣೆ ಪ್ರಮಾಣಗಳೆಲ್ಲಾ ಅವಳ ಹೆಸರಲ್ಲೇ! ಅವನ ಕನಸ ಹಾದಿಯಲ್ಲಿನ ಹೆಜ್ಜೆಯಲ್ಲಿ ಗೆಜ್ಜೆಯ ದನಿಯಾದ ಸಾರ್ಥಕತೆ ನನ್ನಲ್ಲಿ.. ಇನ್ನೂ ನೆನಪಿದೆ ಅವನ ಮೊದಲ ಎಸ್. ಎಸ್.ಬಿ ಮುಗಿದ ದಿನ ಆಕಾಶಕ್ಕೆ ಕೇಳುವಂತೆ ಖುಷಿಯಲ್ಲಿ ಕುಣಿದಿದ್ದೆ ನಾ.. 
                        ಮತ್ತದೇ ಮಳೆಗಾಲದ ಮೊದಲ ದಿನಗಳು ಈಗ.. ಅವನ ಟ್ರೈನಿಂಗ್ ಮುಗಿದು ಯೋಧಪಡೆ ಸೇರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ..  ನಿನ್ನೆಯ ಬೆಳದಿಂಗಳಲ್ಲಿ ಅವನಿಗೆ ಕೇಳಿದ್ದೆ.. ಕೊನೆಯಾಸೆಯೇನೋ ಎಂದು! 'ತ್ರಿವರ್ಣ ಧ್ವಜದೊಳಗೆ ಸುತ್ತಿ ತರಬೇಕು ನನ್ನ' ಅಂದಾಕ್ಷಣ ಮೈ ರೋಮಗಳೆಲ್ಲಾ ನೆಟ್ಟಗಾಗಿತ್ತು ನಂಗೆ.. ಇವತ್ತು ಜುಲೈ 26!! ಬಾಲ್ಯದಲ್ಲೆಲ್ಲೋ ಅಪ್ಪ ಕಣ್ಣ ಹನಿಯೊಂದಿಗೆ ಸೈನ್ಯದ ಕಥೆ ಹೇಳಲು ಆರಂಭಿಸಿದ ದಿನ.. 'ಕಾರ್ಗಿಲ್ ವಿಜಯ ದಿವಸ್'!! ನನ್ನವನಿಗೊಂದು ದೊಡ್ಡ ಸೆಲ್ಯೂಟ್ ನೊಂದಿಗೆ ಬೀಳ್ಕೊಡುತ್ತಿದ್ದೇನೆ.. ಮರಳಿ ಬರುತ್ತಾನೆಂಬ ನಂಬಿಕೆಯ ಹೊರತಾಗಿ.. :)

ಭಾನುವಾರ, ಜೂನ್ 14, 2015

ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ..

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ! ರಾಧಾ-ಕೃಷ್ಣರು ಎಂದೂ ಸೇರುವುದಿಲ್ಲವೆಂಬ ಸತ್ಯ ತಿಳಿದಿದ್ದರೆ ಅಂದೇ ರುಕ್ಮಿಣಿಯಾಗುತ್ತಿದ್ದೆನೇನೋ… ಪ್ರೀತಿಸುವುದೊಂದೇ ಗೊತ್ತಿತ್ತು ಈ ಹೃದಯಕ್ಕೆ.
ಕಡುನೀಲಿ ಬಣ್ಣದ ಶರ್ಟ್ ತೊಟ್ಟು ಕೈಯಲ್ಲೊಂದು ಸಿಗರೇಟ್ ಹಿಡಿದವನ ನೋಡಿದಾಗ ನನ್ನೊಳಗೊಂದು ಹೂಕಂಪನ ಮೂಡಿತ್ತು.೧೯೯೬ರ ವ್ಯಾಲೆಂಟೈನ್ಸ್ ಡೇ ದಿನ ತುಂಗೆಯ ಕೊನೇ ಮೆಟ್ಟಿಲ ಮೇಲೆ ಕೂತು ನಿನ್ನ ಕಿರುಬೆರಳು ಹಿಡಿದ ಕ್ಷಣ ಆ ಹೂಕಂಪನಕ್ಕೊಂದು ಅರ್ಥ ಮೂಡಿತ್ತು. ಹೀಗೆ ಹದಿನೇಳರ ಹರೆಯದಲ್ಲಿ ಸದ್ದಾಗದೆ ಮೂಡಿದ್ದ ಪ್ರೀತಿಯೊಂದು ಮುಂದಿನ ಆರು ವರ್ಷಗಳ ಕಾಲ ಕನಸಾಗಿತ್ತು,ಕನವರಿಕೆಯಾಗಿತ್ತು,ಬದುಕಾಗಿತ್ತು! ನೀ ನೀನಾಗಿರುವುದಕ್ಕಿಂತ ಹೆಚ್ಚಾಗಿ ನಾನಾಗಿದ್ದೆ,ನಿನ್ನೊಳಗಿನ ನನ್ನನ್ನು ಹುಡುಕುವುದರಲ್ಲಿ ನಾ ಕಳೆದುಹೋಗಿದ್ದೆ.ನಿನ್ನ ಹಣೆಗೊಂದು ಕೊನೆಯ ಮುತ್ತು ನೀಡಿದ ಕ್ಷಣದಿಂದ ಹುಡುಕುತ್ತಿದ್ದೇನೆ , ಈ ಯೂರೋಪ್ ನಗರದಲ್ಲಿ, ಅಮೃತಶಿಲೆಯ ಮಹಲುಗಳಲ್ಲಿ ಎಲ್ಲಾದರೂ ನೀ ಕಾಣುತ್ತೀಯೇನೋ ಎಂದು! ನಿನ್ನೊಳಗಿದ್ದ ನಾ ಕಾಣುತ್ತೀನೇನೋ ಎಂದು…
ಭಾರತೀಬೀದಿಯ ಆ ಕೊನೆಯ ತಿರುವಿನಲ್ಲಿ ಇನ್ನೂ ನಿನ್ನ ಆತ್ಮದ ಚೂರೊಂದು ನನ್ನ ಗೆಜ್ಜೆಯ ದನಿಗಾಗಿ ಕಾಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ ಆಗಾಗ! ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ, ಹುಡುಕಿ ಹುಡುಕಿ ನನಗಷ್ಟೇ ಕೇಳಿಸುತ್ತಿದ್ದ ಅದೊಂದಿಷ್ಟು ಹಾಡುಗಳು, ಮಳೆಗಾಲದಲ್ಲಿ ಮತ್ತೆ ಮತ್ತೆ ಬರುತ್ತಿದ್ದ ಆ ಬೆಚ್ಚಗಿನ ಜ್ವರ.. ’ನೆನಪೆಂದರೆ ಮಳೆಬಿಲ್ಲ ಛಾಯೆ!’ ಸಪ್ತಸಾಗರದಾಚೆಯಿಲ್ಲಿ ಸುಪ್ತ ಮನಸ್ಸೊಂದು ಮುದುಡಿದೆ. ನಿನ್ನಿಂದ ಗಾವುದ ಗಾವುದ ದೂರಕುಳಿತು ಪದಕ್ಕಿಳಿಸುತ್ತಿರುವ ನನ್ಯಾವ ಭಾವಗಳೂ ನಿನ್ನ ತಾಕುವುದಿಲ್ಲವೆಂಬ ಸತ್ಯದ ಅರಿವಿದ್ದೂ ಬರೆಯುತ್ತಿದ್ದೇನೆ! ಅಕ್ಷರಗಳ ಜೊತೆಗಿದ್ದಷ್ಟು ಹೊತ್ತೂ ನಿನ್ನ ಸಾಮೀಪ್ಯದ ಸುಖ ಈ ಮನಸ್ಸಿಗೆ..
      
ಈ ದೇಶದಲ್ಲಿ ಮೊದಲ ಮಳೆಯ ಮಣ್ಣಿನ ಘಮವಿಲ್ಲ, ರಾಧಾ-ಕೃಷ್ಣರ ವಿರಹದ ತಾಪವಿಲ್ಲ! ಸಂಬಂಧಗಳ ಹಪಾಹಪಿಯಿಲ್ಲ, ಬಯಕೆಗಳ ಕಾತರವಿಲ್ಲ, ಎಲ್ಲವೂ ಆಚ್ಛಾದಿತ ಹಿಮದಂತೆ ನಿರ್ಲಿಪ್ತತೆಯಲ್ಲಿ ಮಡುಗಟ್ಟಿದ ಮೌನ. ಹೀಗಿರುವಾಗಲೇ ನೀ ನೆನಪಾಗುತ್ತೀಯ! ಭಾರತೀ ಬೀದಿಯ ಹೆಜ್ಜೆ ಗುರುತುಗಳು, ಉಕ್ಕೇರುತ್ತಿದ್ದ ತುಂಗೆ, ಬೆಟ್ಟದ ದಾರಿಯ ಪಕ್ಕದಲ್ಲಿ ಅರಳುತ್ತಿದ್ದ ಸಂಪಿಗೆ, ಭೋರ್ಗರೆದು ಸುರಿವ ಮಳೆ, ಕಾರಿಡಾರಿನ ತುದಿಯಲ್ಲಿ ಇನ್ಫ಼ರಾಸೊನಿಕ್ ತರಂಗಗಳನ್ನೆಬ್ಬಿಸುತ್ತಿದ್ದ ಆ ಜೇಡ. ಹೀಗೆ ನೆನಪುಗಳ ಜಾತ್ರೆ ಸಾಗುತ್ತದೆ ಮನದ ಪರದೆಯ ಮೇಲೆ!
      
ಹನ್ನೆರಡು ಮಳೆಗಾಲಗಳ ಹಿಂದೆ ನಿನ್ನ ಜೊತೆ ಮಳೆಯ ಹನಿಗಳೊಡನೆ ಆಟವಾಡಿದ್ದು! ಅಲ್ಲಿಂದೀಚೆಗೆ ಮಳೆಯೆಂದರೆ ಕಿಟಕಿಯ ಮೇಲೆ ಬೀಳುವ ನೀರ ಗುಳ್ಳೆಗಳು. ಈ ದ್ವಾದಶ ವರ್ಷಗಳಲ್ಲಿ ಯಾವ ಶನಿವಾದ ಸಂಜೆಯಲ್ಲಿಯೂ ಆಮ್ಲೆಟ್ ತಿಂದಿಲ್ಲ! ಹುಚ್ಚು ಹಿಡಿಸುವ ಹುಡುಗನ ಸ್ಥಾನದಿಂದ ಶಾರುಖ್ ಕೆಳಗಿಳಿದಿದ್ದಾನೆ. ಗಾಜರ್ ಕಾ ಹಲ್ವ ಹಾಗೂ ಪೆಟ್ರೊಲಿನ ವಾಸನೆಯನ್ನು ಪ್ರಯತ್ನ ಪೂರಕವಾಗಿ ದೂರಮಾಡಿದ್ದೇನೆ. ಇವೆಲ್ಲದರ ನಡುವೆಯೂ ಆಗಾಗ ಬರುವ ಬೆಚ್ಚಗಿನ ಜ್ವರ ನಿನ್ನನ್ನು ಇಡಿ ಇಡಿಯಾಗಿ ಮನಃಪಟ್ಲದ ಮೇಲೆ ಮೂಡಿಸಿಬಿಡುತ್ತದೆ. ಹೂಕಂಪನ, ಹೆಣೆದ ಕನಸುಗಳು, ಖಾಲಿಯಾಗದ ವಿರಹ, ಮುಗಿದುಹೋದ ಪ್ರೀತಿ, ಕಂಬನಿ ತುಂಬಿದ ಬದುಕು! ತೀವ್ರಗೊಳ್ಳೂವ ಜ್ವರದೊಂದಿಗೆ ಮತ್ತೆ ಮತ್ತೆ ಆವರಿಸಿಕೊಳ್ಳುತಾ ಹೋಗುತ್ತದೆ ನಿನ್ನತನ ನನ್ನನ್ನು..
          
ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ! ಬದುಕು ರಾಧೆಯ ಪಾತ್ರಕ್ಕೇ ಅಂಟಿಕೊಂಡಂತಿತ್ತು. ಕಡೆಯ ಪಕ್ಷ ಮೀರಳಾಗಿದ್ದರಾದರೂ ನಿನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬಹುದಿತ್ತೇನೋ! ಅವ್ಯಕ್ತತೆಯ ಭಾವವೇ ನೀನಾಗಿ ರೂಪುಗೊಂಡಿದೆ ಈಗ. ಕೃಷ್ಣನ ಹೆಸರೇ ತಿಳಿದಿಲ್ಲದ ಊರಿನಲ್ಲಿ ಅವನ ಕೊಳಲ ದನಿ ಹುಡುಕುವ ರಾಧೆಯಾಗಿದ್ದೇನೆ. ಎಂದಾದರೂ ಬದುಕು ಬದಲಾಗಬಹುದು, ರಾಗಗಳ ಸುಳಿಗಳಲ್ಲಿ ನಾ ಮತ್ತೆ ಕಳೆದು ಹೋಗಬಹದು, ಕವಿತೆಗಳ ಭಾವದಲ್ಲಿ ಕಳೆದು ಹೋದ ನಾನು ಮರಳಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ…                                                        
– ದೇವಯಾನಿ.!

ಬುಧವಾರ, ಆಗಸ್ಟ್ 20, 2014

ಹಾಗೇ ಸುಮ್ಮನೆ ನಿಂಗೊಂದು ಪತ್ರ...

ಹಾಗೇ ಸುಮ್ಮನೆ ನಿಂಗೊಂದು ಪತ್ರ...

ವಿಷಯಗಳೇ ಬೇಕೆಂದಿಲ್ಲವಲ್ಲ ನಿನ್ನೊಂದಿಗೆ ಸಂಭಾಷಣೆ ನಡೆಸಲು!!
ಅದೆಷ್ಟೋ ಸಂಗತಿಗಳು ಪದದ ರೂಪಕ್ಕಿಳಿಯದೇ ಬರಿಯ ಕಂಗಳ ಹನಿಯಲ್ಲೇ ಮುಗಿದುಹೋಗಿವೆ. 
ಅದೆಷ್ಟೋ ದಿನಗಳು ಮಾತು ಸತ್ತು ಹೋಗಿ ಬರಿಯ ಭಾವನೆಗಳಲ್ಲೇ ಬದುಕು ಕಂಡಿದ್ದೇವೆ. 

ಪ್ರೀತಿ ಎಂಬ ಭಾವಕ್ಕೆ ಬಣ್ಣ,ರೂಪ,ಆಕಾರ ಕೊಡುವ ಶಕ್ತಿ ನನಗಿದ್ದಿದ್ದರೆ ನಿನ್ನದೇ ಇನ್ನೊಂದು ಪ್ರತಿಕೃತಿಯನ್ನು ಸೃಷ್ಟಿಸುತ್ತಿದ್ದೆನೇನೋ...;)

ಕಾರಣವಿಲ್ಲದೇ ಇಷ್ಟವಾಗುವ ವ್ಯಕ್ತಿತ್ವ ನಿನ್ನದು. 
ಜಿನುಜಿನುಗಿಸುವ ಮಳೆಯಲ್ಲಿ ಹಾಡಾಗುತ್ತೀಯ, 
ಬೆಳದಿಂಗಳ ಮೌನದಲ್ಲಿ ಮಾತಿಗಿಳಿಯುತ್ತೀಯ, 
ಕಾರ್ಗತ್ತಲ ರಾತ್ರಿಯಲ್ಲೆಲ್ಲೋ ದೀಪದಂತೆ ಕೈ ಹಿಡಿದು ನಡೆಸುತ್ತೀಯ!
ಹೇಗೆಂದು ವಿವರಿಸಲಿ ನಿನ್ನ ಜೊತೆಗಿರುವ ಮಧುರತೆಯ ಸವಿಯನ್ನು? 
ಹಾಗೇ ಸುಮ್ಮನೆ ನಿನ್ನ ಜೊತೆ ಒಂದಷ್ಟು ದೂರ ನಡೆದರೆ ಸಾಕು ದಿವ್ಯ ಸಾಂಗತ್ಯದ ಅನುಭವ.
ನಿನ್ನ ಹೆಗಲಿಗೆ ತಲೆಯಾನಿಸಿಕೊಂಡು ಕೂತಾಗ ಮಾತುಗಳಿಗೆ ಆಸ್ಪದವಿಲ್ಲ.
ಬರಿಯ ಸ್ಪರ್ಶದಲ್ಲೇ 'ಬದುಕು ಕಟ್ಟಿಕೊಡುತ್ತೇನೆ ಹುಡುಗಿ' ಎಂಬ ಭರವಸೆಯನ್ನು  ಅಂತರಾಳಕ್ಕೆ ಅರ್ಥ ಮಾಡಿಸುವ ಮಾಂತ್ರಿಕ ನೀನು. 
ಅದ್ಯಾವ ಮಾಯೆಯಲ್ಲಿ ನನಗೆ ಜೊತೆಯಾದೆಯೋ ಆ ಭಗವಂತನಿಗೇ ಗೊತ್ತು!:) 
ನಮ್ಮಿಬ್ಬರ ಸಂಬಂಧದಲ್ಲಿ ಒಂದಷ್ಟು ಸೊಗಸಿದೆ, 
ಹುಸಿಕೋಪದ ಕಿರುನಗೆಯಿದೆ :*
ನಕ್ಷತ್ರಗಳ ಬೆಳಕಿದೆ ;)
ಅಪೂರ್ವವಾದದ್ದೊಂದು ಸೆಳೆತವಿದೆ :)
ಶುದ್ಧ ಗೆಳೆತನದ ಘಮವಿದೆ ಜೊತೆಗೆ ಹುಚ್ಚುತನಗಳ ಪರಮಾವಧಿಯಿದೆ :ಫ್
ನೀನು ಕೃಷ್ಣನಾದಾಗಲೆಲ್ಲ ನಾನು ರಾಧೆಯಾಯಾಗುತ್ತೇನೆ. ಆ ಸಂಭ್ರಮದಲ್ಲಿ ಮನಸ್ಸು ನವಿಲಾಗಿ ಗರಿಗೆದರುತ್ತದೆ:):):) 
ಇವೆಲ್ಲದರ ನಡುವೆ ನಮ್ಮ ಪ್ರೀತಿ ಮುಂದುವರೆಯುತ್ತದೆ.
ಮಳೆಬಿಲ್ಲ೦ತೆ, ಕಣ್ಣೀರಂತೆ , ಮುದ್ದುಮಗುವ ನಗುವಿನಂತೆ...
ಕಡೆಗೆ ಕತ್ತಲೆಯಂತೆ, ಮತ್ತೆ ದಿವ್ಯ ಮೌನದಂತೆ . . .