ಬುಧವಾರ, ಡಿಸೆಂಬರ್ 6, 2017

ಮಳೆ ಹಾಡಾಗಲಿ.. ಬದುಕಾಗಲಿ..

ಹೊಳೆ ತುಂಬಾ ನೀರು, ಮನೆ ತುಂಬಾ ಖುಷಿ, ಮನಸ್ಸು ತುಂಬಾ ಪ್ರೀತಿ :) ಮಳೆಗಾಲ ಅಂದ್ರೆ ಯಾವತ್ತಿಗೂ ಸಂಭ್ರಮವೇ..  ಆಲಿಕಲ್ಲು, ಮುಳುಗೋ ರಾಮ ಮಂಟಪ, ಕೊಚ್ಚೆ ಕಾಲು ಹಾಗೂ ಮುರಿದುಹೋಗಿರೋ ಕೊಡೆ(ಛತ್ರಿ).. ಮಳೆಯ ಮೇಲೆ ಒಲವಾಗದೇ ಹೋಗುವುದಕ್ಕೆ ಕಾರಣವೇ ಸಿಗುವುದಿಲ್ಲವಾದೀತು.. ಪ್ರತಿ ಊರಿನ ಮಳೆಗೂ ಅದರದ್ದೇ ಆದ ಅಂದ-ಚಂದವಿದೆ, ಘನತೆ-ಗಾಂಭೀರ್ಯವಿದೆ. ತೀರ್ಥಹಳ್ಳಿಯಲ್ಲೊಂದು ಆಪ್ತಭಾವವ ಕಟ್ಟಿಕೊಡೋ ಮಳೆಹನಿಗಳು, ಚಿಕ್ಕಮಗಳೂರಲ್ಲಿ ಹೂಕಂಪನ ಮೂಡಿಸುತ್ತವೆ.. ಬೆಂಗಳೂರಿನ ಮಳೆಯಲ್ಲಿ ಒಂಟಿತನದ್ದೊಂದು ಛಾಪಿದೆ.. ಶಿವಮೊಗ್ಗದಲ್ಲಿ ನಿರ್ಲಿಪ್ತವೆಂತನಿಸೋ ಮಳೆಗಾಲ, ಸಾಗರ-ಶಿರಸಿಯಲ್ಲೆಲ್ಲಾ ಆರ್ಭಟವೆನಿಸಿಬಿಡುತ್ತದೆ. ಕಡಲೂರಿನಲ್ಲಿ ಮಳೆಯ ಲಯವೇ ಬೇರೆ! ಬಯಲುಸೀಮೆಯಲ್ಲಿ ಮಳೆಯೆಂದರೆ ಜೀವಜಲ.
ಮಳೆಗೊಂದು ತಾಳವಿದೆ.. ಧೇನಿಸಿದರೆ ನಮ್ಮದೆನಿಸೋ ರಾಗವಿದೆ.. ಶೃತಿಬದ್ಧವಾಗಿ ಸುರಿಯೋ ಮಳೆಯಲ್ಲೊಂದು ಮೌನವಿದೆ. ಮೌನದಾಚೆಗಿನ ಉಳಿದುಹೋದ ಮಾತುಗಳಿವೆ.. 
ಸುಮ್ಮನೇ ಕುಳಿತರೆ ಸಾಂತ್ವನಿಸೋ ಮಳೆ, ಖುಷಿಸ ಹೊರಟರೆ ಕುಣಿಯಲಾರಂಭಿಸುತ್ತದೆ :) ಮಳೆಯ ಹುಡುಕಿಕೊಂಡು ಊರೂರು ಅಲೆದಿದ್ದಿದೆ.. ಮಳೆಗೋಸ್ಕರವೇ ನಾಲ್ಕು ವರ್ಷದ ಓದನ್ನ ಆ ಊರಲ್ಲಿ ಓದಿದ್ದಿದೆ.. ಜೋರಾಗಿ ಮಳೆ ಬರ್ಲಿ ಅಂತೆಲ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ದೇವರಲ್ಲಿ ಬೇಡಿಕೊಂಡಿದ್ದಿದೆ.. ಮಳೆಯಾಗುವಾಗ ಸಮುದ್ರ ಹೇಗಿರತ್ತೆ? ಕಾಡಲ್ಲಿ ಮಳೆಯಾದ್ರೆ ಎಷ್ಟು ಜೋರಾಗಿ ಕೇಳತ್ತೆ? ಬೆಟ್ಟದ ಮೇಲೆ ನಿಂತಾಗ ಮಳೆಹನಿ ರಭಸ ಹೆಚ್ಚಿರತ್ತಾ? ಅನ್ನೋ ಎಕ್ಸ್ ಪೆರಿಮೆಂಟ್ ನೆಲ್ಲಾ ಅದೆಷ್ಟೋ ಬಾರಿ ಮಾಡಿದ್ದಿದೆ.. ಇವೆಲ್ಲದರ ಆಚೆಗೂ ಮಳೆಯ ಬಗೆಗಿನ ಕುತೂಹಲ ಹಾಗ್ ಹಾಗೆಯೇ ಉಳಿದುಹೋಗಿಬಿಡುತ್ತದೆ. 
ಮಳೆಯಲ್ಲಿ ಮಡಿಯುಟ್ಟು ಕೊಡೆಹಿಡಿದು, ಚಪ್ಪಲಿಯೂ ಹಾಕದೆ, ಕೆಸರು ರಸ್ತೆಯಲ್ಲೇ ದೇವಸ್ಥಾನಕ್ಕೆ ನಡೆದುಹೋಗೋ ಚಿಕ್ಕಪ್ಪ.. ’ಗಾಜನೂರು ಡ್ಯಾಮ್ ಅಲ್ಲಿ ನೀರು ಬಿಟ್ಬಿಟ್ರು ಕಣೇ ಅಕ್ಕಾ.. ಇಲ್ದಿದ್ರೆ ಇವತ್ತಿಗ್ ರಾಮ ಮಂಟಪ ಮುಳುಗಿ ರಜೆ ಸಿಕ್ತಿತ್ತು ನಮ್ಗೆ’ ಅಂತ ಹ್ಯಾಪು ಮೋರೆ ಹಾಕಿ ಕೂತಿರೋ ಪುಟ್ಟ ತಮ್ಮ.. ಮಳೆಗಾಲದಲ್ಲಿ ಶೀತವಾಗದಿರಲಿ ಅಂತ ದೊಡ್ಡಮ್ಮ ಕೊಟ್ಟಿರೋ ಪೆಪ್ಪರುಮೆಂಟಿನ ತರದ ಶುಂಠಿ ಮಾತ್ರೆ.. ಮಳೆಯಂದ್ರೆ ಮನಮುತ್ತೋ ಆಪ್ತ ಭಾವಗಳ ಸಂತೆ :)
ನೀ ಈ ಊರಿಗೆ ಮತ್ತೆ ಬಂದ್ರೆ ಮಳೇಲೊಂದು ಲಾಂಗ್ ಡ್ರೈವ್ ಕರ್ಕೊಂಡು ಹೋಗಿ ಕಡೆಗೊಂದು ಬೆಚ್ಚಗಿನ ಕಾಫೀ ಕೊಡಿಸ್ತೀನಿ ಅನ್ನೊ ಬದುಕ ಗೆಳೆಯ.. ಪೇಪರ್ ದೋಣಿಯ ಜೊತೆಗೆ ಕವನದ ಸಾಲಿರಿಸಿ   ಪೋಸ್ಟ್ ಮಾಡಿರೋ ಗೆಳತಿ.. ಮಳೆಯಾದಾಗೆಲ್ಲಾ ತಿನ್ಬೇಕು ಅನ್ನಿಸೋ ಭಟ್ರಂಗಡಿ ಪಾನಿಪೂರಿ.. ಮಳೆಯಂದ್ರೆ ಮನಕಲುಕೋ ನಿಶ್ಶ್ಯಬ್ಧ ಭಾವಗಳ ಚಡಪಡಿಕೆ :)
ಇವತ್ತಿನ್ನೂ ಆರಿದ್ರೆಯ ಮಳೆ ಮುಗಿದಿದೆ..  ನಾಳೆಯಿಂದ ಧೋ ಸುರಿಯೋ ಪುನರ್ವಸು ನಕ್ಷತ್ರದ ಮಳೆ :) 
ಮನದ ಭಾವಗಳನ್ನೆಲ್ಲಾ ಪ್ರತಿಫಲಿಸೋ ಮಳೆ ಇನ್ನಷ್ಟು ಸುರಿಯಲಿ.. ಮತ್ತಷ್ಟು ಭೋರ್ಗರೆಯಲಿ. ಮಳೆ ಹಾಡಾಗಲಿ.. ಬದುಕಾಗಲಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ