ಬುಧವಾರ, ಡಿಸೆಂಬರ್ 6, 2017

ಹೊಳಪು ಕಂಗಳ ಹುಡುಗಿ

ಹೂ ಎಸಳುಗಳಿಗೆ ರೇಶಿಮೆಯ ಬಣ್ಣ
ಭೂಮಿಗೆ ತಂದವರಾರು ಅಂಗೈಯಲ್ಲಿ ಇಟ್ಟವರಾರು?

ಗಾಳಿ ಬೀಸಿದಂತೆಲ್ಲ ತೆರೆದುಕೊಳ್ಳುವ ರೆಕ್ಕೆ
ನವಿಲ ಗರಿಯ ನೇಯ್ದವರಾರು ಬೆನ್ನಿಗೆ ನವಿರಾಗಿ ಪೋಣಿಸಿದವರಾರು?

ಎದೆನದಿಯಲ್ಲಿ ಸದಾ ಹರಿವ ಪ್ರೀತಿ ಜೇನು
ಅಮೃತದ ಹೊಳೆಗೆ ಅಡ್ಡಗಟ್ಟಿದವರಾರು ಕಲ್ಲಿನ ಅಣೆಕಟ್ಟು ಕಟ್ಟಿದವರಾರು?

ಹುಡುಗಿಯವಳು,,
ಹೂವಂತೆ ಅರಳಿದಳು; ಹಕ್ಕಿಯಂತೆ ಹಾರಿದಳು; ನದಿಯಂತೆ ಹರಿದಳು..

ಹೊಳಪು ಕಂಗಳ ಹುಡುಗಿ ನಕ್ಷತ್ರವಾದಳು
ಆಕಾಶದ ತುಂಬೆಲ್ಲ ಹರಡಿಕೊಂಡಳು!

#Metoo

ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಹೆಚ್ಚೇನೂ ಬೇಡ ದೇಹಕ್ಕೆ!
ದಕ್ಕಿದರೆ ಒಂದಷ್ಟು ಏಕಾಂತ,
ಇಲ್ಲದಿದ್ದರೆ ಸ್ವಲ್ಪ ಕತ್ತಲು,
ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ..
ದಿನಕ್ಕೊಂದು ಬಾರಿ ಬಚ್ಚಲಲ್ಲಿ,
ಮನಸ್ಸಿದ್ದರೆ ಹಾಸಿಗೆಯಲ್ಲಿ! ಪ್ರೇಮವೋ, ಕಾಮವೋ ಕಡೆಗೆ ಬಲಾತ್ಕಾರವೋ
ಮತ್ತೆ ಮತ್ತೆ ಬತ್ತಲಾಗುತ್ತಲೇ ಇರುತ್ತದೆ ಮೈ.


ಮನಸ್ಸಿದೆಯಲ್ಲ ಅದು ಹಾಗಲ್ಲ.
ಅದೊಂದು ಶುದ್ಧ ತಪಸ್ಸಿನಂತೆ.. 
ವರ ಸಿಕ್ಕ ಎಷ್ಟೋ ಹೊತ್ತಿನ ನಂತರವೂ ಇಹದ ಪರಿವೆಯಿರುವುದಿಲ್ಲ!
ಗಾಂಧೀ ಬಜಾರಿನ ಗಲ್ಲಿಯಲ್ಲಿ, ದಾಂಡೇಲಿಯ ಕಾಡಿನಲ್ಲಿ ಅಥವಾ ಮೆಟ್ರೋದ ಕೊನೆಯ ಬಾಗಿಲಿನಲ್ಲಿ.. ಮನಸ್ಸು ಬತ್ತಲಾದಾಗಲೆಲ್ಲಾ ಕಣ್ಣು ತೇವವಾಗುತ್ತದೆ! ಹೃದಯ ಆರ್ದ್ರವಾಗುತ್ತದೆ! ದೇಹ ಕಂಪಿಸುತ್ತದೆ..
ಹಂಗೆಲ್ಲಾ ಸುಖಾಸುಮ್ಮನೆ ಬಯಲಿಗೆ ತೆರೆದುಕೊಳ್ಳುವ ಜಾಯಮಾನದ್ದಲ್ಲ ಅದು.
ಅದಕ್ಕೊಂದು ಸ್ಪರ್ಶ ಬೇಕು, ಆ ಸ್ಪರ್ಶಕ್ಕೆ ಜೇನಿನ ಹಿತವಿರಬೇಕು..
ಅದಕ್ಕೊಂದು ನುಡಿ ಬೇಕು, ಆ ನುಡಿ ಜೀವನವನ್ನೇ ಧಾರೆ ಎರೆದು ಕೊಟ್ಟೇನು ಎಂಬಷ್ಟು ಆಳವಾಗಿರಬೇಕು.


ಹಿಂಗೆಲ್ಲಾ ಸದಾ ಕಿರಿಕಿರಿ ಮಾಡುವ ಮನಸ್ಸಿದೆಯಲ್ಲಾ ಕೆಲವೊಂದು ಬಾರಿ ವಿಚಿತ್ರವಾಗಿಬಿಡುತ್ತದೆ!!
ಯಾವುದೇ ತಲೆಬುಡಗಳಿಲ್ಲದೆ ಭೋರ್ಗರೆದು ಸುರಿಯುವಷ್ಟು ದುಖಃವನ್ನು ದಯಪಾಲಿಸುತ್ತದೆ..
ಸದ್ಯಕ್ಕೆ ಅಂಥದೇ ಒಂದು ದುಃಖ ಕಣ್ಣೆದುರಿಗಿದೆ. ಅದೇ #Metoo

ಏನೇ ಹೇಳಿ;;
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಥೇಟ್ ಅಪ್ಪನ ತರಹದ್ದು!

ನಂಗೊಂದು ಸಾದಾಸೀದಾ ಬದುಕು ಬೇಕು
ಥೇಟ್ ಅಪ್ಪನ ತರಹದ್ದು! 
ಆರಕ್ಕೇರದ ಮೂರಕ್ಕಿಳಿಯದ
ಸಮಸ್ಥಿತಿಯ ಸಮಚಿತ್ತತೆಯ ಬದುಕು..


ಬೇಜಾರಾದಾಗ ಕಾಶಿಗೋ ರಾಮೇಶ್ವರಕ್ಕೋ ಯಾತ್ರೆ ಹೋಗುವ,
ಖರ್ಚು ಹೆಚ್ಚಾಯಿತೆನಿಸಿದಾಗ 'ಈ ಸಲ ಹಬ್ಬಕ್ಕೆ ಬಟ್ಟೆಯಿಲ್ಲ' ಎಂದು ಘೋಷಿಸುವ,
ಇಂಕ್ರಿಮೆಂಟ್ ಬಂದಾಗ ಮನೆಯವರ್ಯಾರಿಗೂ ಹೇಳದೇ 
ಅನಾಥಾಶ್ರಮಕ್ಕೋ, ಶಾಲೆಗೋ ದಾನ ಕೊಟ್ಟುಬಿಡುವ ಅದೇ ಅಪ್ಪನ ಬದುಕು ಬೇಕು ನಂಗೆ..

ಯಾವತ್ತಿಗೂ ಪ್ರೀತಿಯನ್ನು ಬಾಯಿಬಿಟ್ಟು ಹೇಳದೇ ಬರಿದೆ ಕ್ರಿಯೆಯಲ್ಲಿಯೇ ವ್ಯಕ್ತಪಡಿಸುವ,
ಐವತ್ತೈದರ ಹರಯದಲ್ಲಿಯೂ ಸ್ಕೂಟಿ ಕಲಿಯುವಷ್ಟು ಉತ್ಸಾಹವಿರುವ,
ಡಾಕ್ಟರಿಗೇ ಆಶ್ಚರ್ಯವಾಗುವಷ್ಟು ದೇಹಕ್ಕೆ ಒಗ್ಗಿಹೋಗಿರುವ ತಂಬಾಕಿನ ಚಟವನ್ನೇ 
ಜೀವನಪ್ರೀತಿಯೆನ್ನುವ ಹೂಬೇಹೂಬು ಅಪ್ಪನಂಥದ್ದೊಂದು ಬದುಕು ಬೇಕು ನಂಗೆ..

ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!

ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! 
'ಪರದೆ ಎಳೆಯುವ ಮುನ್ನ ಮುಖ ತೋರಿಸಬೇಕಲ್ಲ'
ಹೊರಗಿನಿಂದ ಧ್ವನಿಯೊಂದು ಕೇಳಿಬರುತ್ತದೆ.. ಪಾತ್ರಧಾರಿಯಾಗಿಯೇ ಕಾಣಿಸಿಕೊಳ್ಳಬೇಕೇನು??
ಮರುಪ್ರಶ್ನೆಗೆ ಅಲ್ಲಿ ಉತ್ತರವಿಲ್ಲ..

ಬಣ್ಣ ಅಳಿಸದೆಯೇ, ವೇಷ ಕಳಚದೆಯೇ ಸಭೆಯ ಎದುರಿಗೆ ಬಂದು ನಿಲ್ಲುತ್ತೇನೆ..
ಪಾತ್ರದ ಪರಿಚಯಿಕೆ ಪ್ರಾರಂಭ!
ಅಲ್ಲಿಷ್ಟು ಇಲ್ಲಿಷ್ಟು ಗುಸುಗುಸು ಪಿಸುಪಿಸು..
ನಡು ನಡುವೆಯೊಮ್ಮೆ ಚಪ್ಪಾಳೆ.
ಹೆಸರು ಕರೆದ ತಕ್ಷಣ ಒಂದಡಿ ಹೆಜ್ಜೆ ಮುಂದಿಟ್ಟು, ಕೈ ಜೋಡಿಸಿ ನಮಸ್ಕರಿಸಿ, ಮುಗುಳ್ನಕ್ಕು... ಹಃ!!
'ಬೇಗ ಬೇಗ ಬಟ್ಟೆ ಬದಲಾಯಿಸಿ,, ಹೊತ್ತಾಯಿತು ' ಮತ್ತದೇ ಹೊರಧ್ವನಿ.
ಕೋಣೆಯೊಳಗಿನ ಕನ್ನಡಿ ಇಣುಕುತ್ತದೆ ಕಣ್ಮುಂದೆ.. 
ಸ್ತ್ರೀ ಸಹಜ ಗುಣವದು.. ಬಿಡಲಾದೀತೇ? ಕನ್ನಡಿಯಲ್ಲೊಮ್ಮೆ ಪ್ರತಿರೂಪಕ್ಕಾಗಿ ಹುಡುಕುತ್ತೇನೆ..
ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು..


ಚೂರು ಕೆದರಿದ ಮುಂಗುರುಳು, ಕಣ್ಣೀರಿಳಿದಿದ್ದರಿಂದಲೋ ಏನೋ ಆಚೀಚೆಯಾದ ಕಾಡಿಗೆ,
ಮಾಸಿದ ತುಟಿಯ ರಂಗು,ಅಲ್ಲಲ್ಲಿ ಅಳಿಸಿ ಹೋದ ಮುಖದ ಮೇಕಪ್ಪು, 
ಬಾಡಿಹೋಗಿ ಭಾರವೆನಿಸುತ್ತಿರುವ ಮುಡಿದ ಹೂವು..
ಕನ್ನಡಿ ಪಾತ್ರವನ್ನಷ್ಟೇ ಪ್ರತಿಬಿಂಬಿಸುತ್ತದೆ,,, ಆದರೆ ಕಣ್ಣಿನದ್ದೋ.. ಅದು ಪಾತ್ರದಾಚೆಗಿನ ಹುಡುಕಾಟ!


ಪಾತ್ರದೊಂದಿಗಿನ ಬದುಕೇ ಚಂದವಿತ್ತಲ್ಲವಾ ಎನಿಸುವಷ್ಟರಲ್ಲಿ ವಾಸ್ತವ ಬಾಗಿಲು ದಾಟಿ ಒಳಬರುತ್ತದೆ..
ಇಷ್ಟವಿಲ್ಲದಿದ್ದರೂ ಇದ್ದಂತೆ ನಟಿಸಿ ಸುಮ್ಮನೇ ಹೆಜ್ಜೆ ಹಾಕುತ್ತೇನೆ.
ಮುಂದಿನದ್ದೆಲ್ಲವೂ ಬಣ್ಣ ಹಚ್ಚದೇ ನಟಿಸಬೇಕಾದ ಬದುಕ ಪಾತ್ರ!
ನನ್ನೊಳಗು ತೆರವುಗೊಳ್ಳುವುದು ರಂಗದ ಮೇಲೆಯೇ ಎಂಬುದು ಮತ್ತೆ ಮತ್ತೆ ಅರಿವಾಗುತ್ತದೆ.
ಕಾಯತೊಡಗುತ್ತೇನೆ ನಾನು!
ಬಣ್ಣ ಹಚ್ಚಲು, ವೇಷ ಧರಿಸಲು,,,

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ..

ಅಮೃತವನ್ನೇ ಉಣಿಸಬಹುದಿತ್ತಲ್ಲಾ
ವಿಷದ ಬಟ್ಟಲನ್ನೇಕೆ ತಂದು ಸುರಿದರು?
ಆಕಾಶ ನೋಡುತ್ತಾ ಕೇಳುತ್ತಾಳೆ ಅವಳು..
ಉತ್ತರವಿಲ್ಲದೆ ಸುಮ್ಮನೆ ನಕ್ಷತ್ರ ಎಣಿಸುತ್ತಿರುವಂತೆ ನಟಿಸುತ್ತೇನೆ ನಾನು.

ಅಪರಾತ್ರಿಯ ಸಂವಾದಗಳಿವು ಮೌನದೊಂದಿಗೇ ಘಟಿಸುತ್ತವೆ..
ಅವಳು ಮಾತಿಗಿಳಿಯುವ ಮುಂಚೆಯೇ ಮೂಕಳಾಗುತ್ತೇನೆ! 
ಪ್ರಶ್ನೆಗಳೆಲ್ಲಾ ನೇರ ಎದೆಯ ಕವಾಟಕ್ಕೇ ಗುರಿಯಾಗಿರುತ್ತವೆ.
'ಘಾಸಿಯಾಗುತ್ತದೆ ನನ್ನೆದೆಗೂ'.. ಊಹೂಂ ಆಲಿಸುವಷ್ಟು ಸಹನೆ ಅವಳಿಗಿಲ್ಲ!
 ಅವಳ ಸ್ಥಾನದಲ್ಲಿ ಮತ್ಯಾರಿದ್ದರೂ ಇರುತ್ತಿರಲಿಲ್ಲವೇನೋ..

ಪಾಪದ ಹೆಣ್ಣು ಮಗು.. ಲಾಲಿಸಬೇಕೆನಿಸುತ್ತದೆ,, ಪಾಲಿಸಬೇಕೆನಿಸುತ್ತದೆ,, 
ಬಿಗಿದಪ್ಪಿ ಸಮಾಧಾನಿಸಬೇಕೆನಿಸುತ್ತದೆ..
ಮತ್ತೆ ಮತ್ತೆ ಅಸಹಾಯಕತೆಯ ಕೊಂಡಿಗಳಿಗೆ ನಮ್ಮನ್ನು ನಾವೇ ಬಂಧಿಸಿಕೊಂಡು ನರಳುತ್ತೇವೆ! 
ನಾನಿಲ್ಲಿ, ಅವಳಲ್ಲಿ..


ಸೋತಿದ್ದೇನೆ ನಾನೂ, ಅವಳಂತೆಯೇ
ಬದುಕ ಆಯ್ಕೆಗಳಲ್ಲಿ,, ಇಟ್ಟ ನಂಬಿಕೆಯಲ್ಲಿ
ಕುಸಿದಿದ್ದೇನೆ ನಾನೂ, ಅವಳಂತೆಯೇ
ಮುರಿದುಬಿದ್ದ ಪ್ರೀತಿಯಲ್ಲಿ,, ಛಿದ್ರಗೊಂಡ ಕನಸುಗಳಲ್ಲಿ..

ಅವಳ ವಿಷದ ಬಟ್ಟಲಲ್ಲಿ ನಾನೂ ಪಾಲು ಪಡೆದಿದ್ದೇನೆ ಈಗ.. 
ತುಂಬುವುದಾದರೆ ಇಬ್ಬರ ಮಡಿಲಿಗೂ ವಿಷವನ್ನೇ ತುಂಬಿಬಿಡಲಿ!
ಸಾಧ್ಯವಾದರೆ ವಿಷದ ಬಟ್ಟಲಿಗೂ ಪ್ರೀತಿಯನ್ನು ಸುರಿಯುತ್ತೇವೆ.. 
ಇಲ್ಲವಾದರೆ ವಿಷವನ್ನೇ ಅನುದಿನವೂ ಗುಟುಕಿಸುತ್ತಾ, ಅದನ್ನೇ ಅಮೃತವೆಂಬಂತೆ ಭಾವಿಸುತ್ತಾ ಬದುಕಿಬಿಡುತ್ತೇವೆ..

’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’

ಪದ್ಯವಾಗಿಸಲು ಹೋದ ಪದಗಳೆಲ್ಲಾ ಗದ್ಯಗಳಾಗಿಬಿಡುತ್ತವೆ
ಅದೇಕೋ ಕವಿತೆ ಮುನಿಸು ತೋರಿ ದೂರ ನಿಂತುಬಿಟ್ಟಿದೆ ನನ್ನಿಂದ
ಕಾವ್ಯವೆಲ್ಲಾ ಕಥೆಗಳಾಗಿಬಿಟ್ಟಿವೆ!
ಪ್ರಾಸ. ಲಯ-ಲವಲವಿಕೆ ಯಾವುದೂ ಘಟಿಸುತ್ತಲೇ ಇಲ್ಲ..
ಗರಿಗಳಷ್ಟು ಹಗುರವಾಗಿಮಂಜಿನಷ್ಟು ಬಿಳುಪಾಗಿ ಕವಿತೆ ಹೊಮ್ಮಬೇಕಿತ್ತು.
ಹೊಗೆಯಷ್ಟು ದಟ್ಟವಾಗಿಬೆಳಕಿನಷ್ಟು ತೀವ್ರವಾಗಿ ಕಥನ ಹಬ್ಬುತ್ತದೆ!
ಉಸಿರಾದಲು ಕಷ್ಟವಾಗುವಷ್ಟು ಗಟ್ಟಿಯಾಗಿಬಿಡಿಸಿಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿಕವಿತೆ ಒಮ್ಮೆ ತಬ್ಬಿಬಿಡಬೇಕು ನನ್ನ:)
            ಕವಿತೆಗಳ ಮೇಲೆ ಹೀಗೊಂದು ತೀವ್ರತರವಾದ ಪ್ರೀತಿ ಉಕ್ಕುವಂತೆ ಮಾಡಿದ್ದು ಕೃಷ್ಣರವರ ಕವಿತೆಗಳು.  ಮತ್ತೆ ಮತ್ತೆ ಹುಟ್ಟುತ್ತೇನೆಚಿತ್ರವಾಗಿ ಕಾಡುತ್ತೇನೆ ಎನುತ್ತಲೇ ಸಾಲುಗಳು ನಮ್ಮನಾವರಿಸಿಕೊಂಡುಬಿಡುತ್ತವೆ ಹಾಗೂ ಕಾಡುತ್ತಲೇ ಹೋಗುತ್ತವೆ. ಹೂ ಹುಡುಗಿಯೆಂಬ ಸಂಭೋದನೆಯೇ ಇನ್ನಷ್ಟು ಮತ್ತಷ್ಟು ಆಪ್ತವಾಗಿಸುತ್ತವೆ. ಚಿತ್ರಗಳ ನಂತರ ಪದಗಳು ಮೂಡುತ್ತವೆಯೋಪದಗಳ ಜೊತೆಜೊತೆಗೇ ರೇಖೆಗಳು ರೂಪು ತಳೆಯುತ್ತವೆಯೋ ಎಂಬುದೊಂದು ಅನುಮಾನ ನನ್ನೊಳಗೆ. ಒಮ್ಮೆ ಕನ್ನಡಿಯೊಳಗೆ ಹೂ ಬಿಟ್ಟ ಕನಸ ಮರಮತ್ತೊಮ್ಮೆ ಒಲೆಯುರಿಯ ನಿಗಿನಿಗಿ ಕೆಂಡದಂಥಾ ವಾಸ್ತವಮಗದೊಮ್ಮೆ ಬಾಚಿತಬ್ಬಿಬಿಡೋಣ ಎನ್ನುವಂಥಾ ಮೃದುಲ ಭಾವಗಳು. ಕೃಷ್ಣರ ಚಿತ್ರಕಾವ್ಯದ ಕಡಲಿನ ಪ್ರತಿಹನಿಯೂ ಎದೆಯ ಚಿಪ್ಪಿನಲ್ಲಿ ಮುತ್ತಾಗುವಂಥವುಗಳೇ.. :)
            ಕೃಷ್ಣರ ವ್ಯಕ್ತಿತ್ವ ಆಕರ್ಷಿಸಿದಷ್ಟೇ ಕವಿತೆಗಳು ಸೂಜಿಗಲ್ಲಿನಂತೆ ಸೆಳೆದಿವೆ ನನ್ನನ್ನು. ಮನದ ಆಕಾಶದಲ್ಲಿ ಅಗಾಧ ಮೌನವನ್ನುಅನಂತ ಪ್ರೇಮವನ್ನೂಅವ್ಯಕ್ತ ನೋವುಗಳನ್ನೂ ಸೃಷ್ಟಿಸುವ ಶಕ್ತಿ ಈ ನಕ್ಷತ್ರದ ಹೊಳಪಿರುವ ಕವಿತೆಗಳಿಗಿದೆ. ಕಾವ್ಯ ಪ್ರಪಂಚಕ್ಕಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ತನ್ನೆಡೆಗೆ ಎಳೆದುಕೊಂಡು,ಅದ್ಭುತವೆನಿಸೋ ಪದಗಲನ್ನು ಪೋಣಿಸಿ ನಮ್ಮೆದುರಿಟ್ಟು ’ಇದು ಹೇಗಿದೆ ಹೇಳಿ..’ ಎನ್ನುವ ಕೃಷ್ಣರ ದನಿಯಲ್ಲಿ ಆಳವಾದ ಜೀವನಪ್ರೀತಿ ಮತ್ತು ನನ್ನ ಕಂಗಳಲ್ಲಿ ಮುಗಿಯದ ಬೆರಗು. ಕಟ್ಟುಪಾಡು ಎಂತನಿಸುವ ಎಲ್ಲದರಿಂದಲೂ ದೂರವೇ ಉಳಿಯುವುದರಿಂದಲೇ ಏನೋ ಬೇಲಿಯಾಚೆಗಿನ ಭಾವಗಳೆಲ್ಲಾ ಚುಕ್ಕಿಗಳಾಗಿ, ಚಿತ್ರಗಳಾಗಿ,ಪದ್ಯಗಳಾಗಿ ಕೃಷ್ಣರಿಗೆ ದಕ್ಕಿಬಿಡುತ್ತವೆ.
            ಅರಮನೆಯೊಳಗಿನ ಜೋಳಿಗೆಯಲ್ಲಿ ಬುದ್ಧನೆಂಬ ಅಗುಲನ್ನು ಹುಡುಕುವಾಗಹೊಸ್ತಿಲ ಬಳಿ ನಿಂತ ಯಶೋಧರೆಯ ಕನವರಿಕೆಗಳು ಕದ ತಟ್ಟುತ್ತವೆ. ಅವ್ವನ ಬುತ್ತಿಗಂಟಿನೊಂದಿಗೆ ಲಂಕೇಶರನ್ನು ನೆನೆವ ಹೊತ್ತಿಗೆ ಕಿಟಕಿಯಾಚೆಗಿನ ವಿಸ್ಮಯ ಲೋಕದ ಬಾಗಿಲು ತೆರೆದು ತೇಜಸ್ವಿ ಒಳಬಂದಿರುತ್ತಾರೆ. ’ಹೂ ಬಿಟ್ಟ ಮರ.. ಎದೆಯ ತುಂಬ ಚಿಟ್ಟೆ ಸಾಲು’ ಎನ್ನುವಲ್ಲಿ ಮೂಡುವ ನವಿರು ಭಾವ’ಮನ ತುಂಬಿದಳು ಹಾರಿಬಿಟ್ಟೆ.. ರೇಖೆಗಳಂತೆ ಹರಡಿಬಿಟ್ಟೆ’ ಎನ್ನುವಷ್ಟರಲ್ಲಿ ಪ್ರೀತಿಯಾಗಿ ಹಬ್ಬಿನಿಲ್ಲುತ್ತದೆ. ’ಹಕ್ಕಿಗಳಿಗೆ ಬೇಕಂತೆ ಸೂರು.. ಕೊಟ್ಟು ಬಿಡೋಣ ಈ ಬೆಂಗಳೂರು’ ಇಂಥಾ ಸಾಲುಗಳು ಮನ ಕಲುಕುವ ರೀತಿಯನ್ನುಅವು ಮೂಡಿಸುವ ಕಂಪನಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ನನ್ನಿಂದ ಅಸಾಧ್ಯ.
            ಚುಕ್ಕೆಹಾಡು ಅಂತೆಲ್ಲ ಅನಿಸಿದ್ದ ಇವರ ಚಿತ್ರಕಾವ್ಯಲೋಕ ಈಗ ಶಬ್ಧದಾಚೆಯ ಕನವರಿಕೆಗಳು.. ಭಾವಕೋಶದ ಭಿತ್ತಿಯ ಮೇಲೆ ಸಹಸ್ರ ವರ್ಣಗಳು..

'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ

ಇದ್ದಕ್ಕಿದ್ದಂತೇ ಗೆಳೆಯ ಕರೆ ಮಾಡಿ 'ನಾಳೆ ಕೆಲಸನೆಲ್ಲಾ ಬದಿಗಿಟ್ಟು ಫ್ರೀ ಆಗಿರೇ.. ಎಲ್ಲಿಗೋ ಹೋಗಲಿಕ್ಕಿದೆ' ಎಂದಿದ್ದ. 'ಎಲ್ಲಿಗೆ', 'ಯಾಕೆ', 'ಎಷ್ಟೊತ್ತಿಗೆ', 'ಹೇಗೆ',  'ಯಾರ್ಯಾರು' ಹೀಗೆ ನೂರೆಂಟಿದ್ದ ನನ್ನ ಪ್ರಶ್ನೆಗಳಲ್ಲಿ ಯಾವುದಕ್ಕೂ ಉತ್ತರಿಸದೆ ನಾಪತ್ತೆಯಾಗಿದ್ದ. ತಲೆಯೊಳಗೆ ಹುಳ ಬಿಟ್ಟುಕೊಂಡು ಇಡೀ ದಿನ ಬೆಕ್ಕಿನಂತೆ ಶತಪಥ ತಿರುಗಿದ್ದೆ ನಾ. ಅದೆಷ್ಟು ಗೋಗರೆದರೂ ಸ್ಥಳ ಯಾವುದೆಂದು ಸುಳಿಹೂ ಕೊಡಲಿಲ್ಲ ಆ ಪುಣ್ಯಾತ್ಮ. ಫೋಟೋಗ್ರಫಿಯ ನೆಪದಲ್ಲಿ ಅವನು ಊರು ಸುತ್ತುತ್ತಿದ್ದರೆ, ಬೆನ್ನು ಹತ್ತಿದ ಬೇತಾಳದಂತೆ ನಾನೂ ಅವನ ಬಾಲ ಹಿಡಿದು ಹೋಗುತ್ತಿದ್ದೆ! 'ಇರ್ರಿಟೇಟ್ ಮಾಡ್ಬೇಡ ನಂಗೆ.. ನಿನ್ನ ಎಲ್ಲಾ ಕಡೆನೂ ಕರ್ಕೊಂಡ್ ಹೋಗೋಕೆ ಸಾಧ್ಯ ಆಗಲ್ಲ' ಎಂದು ಬೈದು ನನ್ನ ಬಿಟ್ಟು ಹೋಗುತ್ತಿದ್ದುದೇ ಹೆಚ್ಚು. ಇವತ್ಯಾಕೋ ಅವನೇ ಸಿದ್ಧನಾಗಿರು ಎಂದಿದ್ದು ಚಕಿತಳನ್ನಾಗಿ ಮಾಡಿತ್ತು ನನ್ನ. ಯಾವ ಸ್ಥಳ ಎಂಬ ಸುಳಿವೇ ಇಲ್ಲದೆ ಸುಮ್ಮನೆ ತಯಾರಾಗಿ ನಿಂತಿದ್ದೆ ನಾ. ಮತ್ತೆ ಪಯಣ ಸಾಗಿದ್ದು ಮೂಡಿಗೆರೆಯ ರಸ್ತೆಯಲ್ಲಿ. 'ದೇವರಮನೆಗಾ!!??' ಎಂಬ ಉದ್ಗಾರ ಹೊಮ್ಮಿತ್ತು ನನ್ನಿಂದ.
      ವರ್ಷದ ಹಿಂದೆ ಮೂಡಿದ್ದ ಕನಸು "ದೇವರಮನೆ".  ಹೆಸರೇ ಎಲ್ಲಕ್ಕಿಂತಲೂ ಹೆಚ್ಚು ಆಕರ್ಷಿಸಿತ್ತು. ಜಾನಪದ ಕಥೆಯೊಂದರ ಪ್ರಕಾರ ಶಿವ ತನ್ನ ಬಸವನನ್ನು ಭೂಲೋಕದ ಜನರ ಯೋಗಕ್ಷೇಮ ವಿಚಾರಿಸಲು ಕಳುಹುತ್ತಾನೆ. ಜನರು ಸಂಕಷ್ಟದಿಂದ ನರಳುತ್ತಿದ್ದರೂ ಬಸವ ಎಲ್ಲರೂ ಸುಕ್ಷೇಮದಿಂದಿದ್ದಾರೆ ಎಂಬುದಾಗಿ ಸುಳ್ಳು ಹೇಳುತ್ತದೆ. ಸತ್ಯಾಂಶ ತಿಳಿದ ಪರಶಿವನು ನೀನು ಜನಗಳ ಸೇವೆ ಮಾಡುತ್ತಾ ಅವರ ಬಡತನವನ್ನು ನಿವಾರಿಸು ಎಂದು ಶಾಪವನ್ನು ನೀಡುತ್ತಾನೆ. ಹೀಗೆ ಭೂಮಿಗೆ ಬಂದ ಬಸವನ ಹಿಂದೆ ಭಗವಂತನೂ ಕಾಲಭೈರವನಾಗಿ ಬಂದು 'ದೇವರಮನೆ'ಯಲ್ಲಿ ನೆಲೆ ನಿಲ್ಲುತ್ತಾನೆ. ಹೀಗೆ ಕಥೆಯ ಗುಂಗು ಹಿಡಿದು, ಜೊತೆಗೆ ಅಲ್ಲಿಷ್ಟು ಕಾಡಿದೆ ಎಂಬ ವಿಷಯ ತಿಳಿದು ದೇವರಮನೆಗೆ ಹೋಗುವ ಇರಾದೆಯನ್ನು ವ್ಯಕ್ತಪಡಿಸಿದ್ದೆ. ಪ್ರಾಜೆಕ್ಟ್, ಪೇಪರ್ ಪ್ರೆಸೆಂಟೇಶನ್ ಎಂಬ ಹುಚ್ಚು ಹಿಡಿದು ತಲೆ ರೋಷ ಹಿಡಿಸಿಕೊಂಡಿದ್ದ ನನ್ನ ಅಲ್ಲಿಗೆ ಕರೆದೊಯ್ಯುವ ಮನಸು ಮಾಡಿದ್ದ ಗೆಳೆಯ! ಮೂಡಿಗೆರೆಯಿಂದ ಕಳಸದ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುಗಿದರೆ ದೇವರಮನೆಗೆ ಸುಮಾರು 20ಕಿ.ಮೀ ನ ಹಾದಿ. ಹಾವು ಕವಲಿನ ದಾರಿಯಾದರೂ , ಗುಂಡಿ-ಹಳ್ಳಗಳಿಲ್ಲವಾದ್ದರಿಂದ ಪ್ರಯಾಣ ಆಯಾಸವೆನಿಸುವುದಿಲ್ಲ. ದಾರಿಯ ಇಕ್ಕೆಲಗಳಲ್ಲಿ ಕಾಫಿ ಎಸ್ಟೇಟ್, ಕಿ.ಮೀ ಗಟ್ಟಲೆ ದೂರವಿರೋ ಮನೆಗಳು, ಮಧ್ಯೆ-ಮಧ್ಯೆ ತಲೆದೋರೋ ಜಾನವಾರುಗಳು. ದಾರಿಯೊಂದಿಷ್ಟು ಗೊಂದಲವಾಗಿ 'ದೇವರಮನೆ' ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರಾಗಿತ್ತು.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಂಗೊಳಿಸೋ ಪರ್ವತಗಳ ಶ್ರೇಣಿ. ಸುತ್ತ ತಲೆಯೆತ್ತಿ ನಿಂತಿರೋ ಗಿರಿಗಳ ನಡುವೆ ಸುಶೋಭಿಸುತ್ತಿದ್ದಾನೆ ಕಾಲಭೈರವನಾದ ಗಿರಿಜಾವಲ್ಲಭ. ಕಲ್ಲು ಕಡೆದು ನಿರ್ಮಿಸಿರೋ ಶಿವನ ಆಲಯ ಹೆಚ್ಚೇನೂ ಅಲಂಕಾರವಿಲ್ಲದೇ, ನಿರಾಭರಣ ಸುಂದರಿಯಂತೆ ಆಕರ್ಷಿಸುತ್ತದೆ. ದೇವಸ್ಥಾನದ ಎದುರಿನಲ್ಲಿಯೇ ದೊಡ್ಡದೊಂದು ಕೆರೆ. ಕೆರೆಯ ಮಧ್ಯಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿರೋ ಕಲ್ಯಾಣಿ. ಅಭಿಷೇಕ ಪ್ರಿಯನಾದ ಈಶ್ವರನಿಗೆ ಈ ಕಲ್ಯಾಣಿಯಿಂದಲೇ ನಿತ್ಯ ಜಲ ಪೂರೈಕೆ. ದೇವಾಲಯದ ಹಿಂಭಾಗದಲ್ಲಿ ಬಿಮ್ಮನೆ ಹರಡಿರೋ ಬೆಟ್ಟ-ಗುಡ್ಡಗಳ ಸಾಲು.
    ಏರುತ್ತಾ ಹೋದಂತೆಲ್ಲಾ ಏರಿಸಿಕೊಳ್ಳುತ್ತಾ ಹೋಗುತ್ತವೆ ಈ ಬೆಟ್ಟಗಳು. ವಿದ್ಯುತ್ ತಂತಿಗಳು ಹಾಯ್ದುಹೋಗಿರುವ ಕಡೆ ನಡೆದರೆ ಕಿವಿಯೊಳಗೆ ಗುಯ್ ಗುಟ್ಟುವ ಸದ್ದು ಮಾರ್ದನಿಸುತ್ತದೆ. ಮೋಡಗಳು ಮುತ್ತಿಡುವಷ್ಟು ಹತ್ತಿರವಲ್ಲದಿದ್ದರೂ; ಕೈ ತಾಕುವಷ್ಟು ಸನಿಹ :)  ಈ ಬೆಟ್ಟದಿಂದ ಆ ಬೆಟ್ಟಕ್ಕೆ, ಅದರಿಂದ ಮತ್ತೊಂದಕ್ಕೆ ಕುಣಿದುಕೊಂಡು ಸಾಗಬಹುದು. ತುತ್ತತುದಿಯಲ್ಲಿ ದೊರಕುವ ನೀರವತೆ, ನಿರ್ಲಿಪ್ತತೆ ವಿವರಣೆಗೆ ನಿಲುಕದ್ದು. ಆ ಮೌನ ಅದಮ್ಯ ಹಾಗೂ ಅಗೋಚರ! ಈ ಬೆಟ್ಟಗಳಲ್ಲೆಲ್ಲೂ ಧೀಮಂತವೆನಿಸೋ ಮರಗಳಿಲ್ಲ. ತೇಗ, ಬೀಟೆ, ಸಾಗುವಾನಿ ಯಾವುದರ ಸುಳಿವೂ ಇಲ್ಲ! ಕುರುಚಲು ಪೊದೆ, ಕೈ-ಕಾಲಿಗೆ ಅಡರೋ ಮುಳ್ಳುಗಳ ಹೊರತು ಮತ್ತೇನೂ ಕಾಣ ಸಿಗದು. ಸರ್ವವ್ಯಾಪಿ ಶಂಕರನ ಪ್ರತಿರೂಪವಾದಂತೆ ಕಂಡವು ಈ ಬೆಟ್ಟಗಳು. ಬೆಟ್ಟವಾದರೇನು, ಬಯಲಾದರೇನು; ಪ್ರೀತಿ ಹಬ್ಬಿ ನಕ್ಕರಾಯಿತು ಎಂದು ಇಳಿದುಬಂದಿದ್ದೆ.
        ಈ ಸ್ಥಳದ ಸುತ್ತ ಹೆಚ್ಚೆಂದರೆ ನಾಲ್ಕೈದು ಮನೆಗಳಷ್ಟೇ ಇರುವುದು. ಸ್ಥಳೀಯರ ಪ್ರಕಾರ ಹೊಯ್ಸಳರ ರಾಜ ಈ ದೇವಸ್ಥಾನವನ್ನು ನಿರ್ಮಿಸಿದನಂತೆ.  1200 ವರ್ಷಗಳ ಇತಿಹಾಸವಿರೋ ದೇವರಮನೆ ಒಮ್ಮೊಮ್ಮೆ ವಿಸ್ಮಯವೆನಿಸಿದರೆ ಮತ್ತೊಮ್ಮೆ ನಿರ್ಲಿಪ್ತವೆನಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ದಿನಕ್ಕೆ ಸರಿಸುಮಾರು 30 ರಿಂದ 35 ಜನರು 'ದೇವರಮನೆ'ಗೆ ಭೇಟಿ ನೀಡುತ್ತಾರೆ. ಹಲವಾರು ಧಾರಾವಾಹಿಗಳು ಮತ್ತು ಸಿನಿಮಾಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. 'ಅದ್ಯಾವುದೋ ಸಿನಿಮಾದೋರು ಇಲ್ಲಿ ಜಾತ್ರೆ ಮಾಡಿದ್ರು ಸಾರ್.. ಅವ್ರು ಹಚ್ಚಿರೋ ಬಣ್ಣ ಎಲ್ಲಾ ಹಂಗೇ ಇದೆ ನೋಡಿ ಸಾರ್.. ಎಲ್ಲಾ ಕ್ಲೀನ್ ಮಾಡಿ ಅಂದ್ರೂ ಬಿಟ್ಟೋಗಿದಾರೆ ' ಎನ್ನುತ್ತಿದ್ದ ಸ್ಥಳೀಯನ ಮಾತಿನಲ್ಲಿ ನೋವಿನ ಛಾಯೆ ಎದ್ದು ಕಾಣುತ್ತಿತ್ತು. ಅದ್ಯಾಕೋ ಬೆಟ್ಟದ ಮೇಲೆ ಕಂಡ ಬೀರ್ ಬಾಟಲ್ ಗಳು , ಸಿಗರೇಟ್ ತುಂಡುಗಳು ಫಕ್ಕನೆ ನೆನಪಾದವು. ಕಾಲಭೈರವನೇ ಇವರಿಗೆಲ್ಲಾ ಬುದ್ಧಿ ದಯಪಾಲಿಸು ಎಂಬುದೊಂದು ಪ್ರಾರ್ಥನೆಯ ಸಲ್ಲಿಸಿ ಗೋಧೂಳಿ ಮುಹೂರ್ತದಲ್ಲಿ ಮರಳಿ ಹೊರಟ ನಮ್ಮನ್ನು ದಾರಿಯುದ್ದಕ್ಕೂ ಅಸ್ತಂಗತನಾಗುತ್ತಿದ್ದ ಸೂರ್ಯ ಕಾಡುತ್ತಿದ್ದ. 'ದೇವರಮನೆ' ಎಂಬ ಊರು ನನ್ನೊಳಗೆ ಇಳಿದು ಹೋದ ಕಥೆ ಮನದಲ್ಲಿ ರೂಪುಗೊಳ್ಳುತ್ತಿತ್ತು.. :) 

ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು..



ಮೂರೂವರೆ ವರ್ಷದ ಹಿಂದೆ ಶುರುವಾದ ಪಯಣವಿದು.. ಇಂಜಿನಿಯರಿಂಗ್ ಎಂಬ ನೆಪದಲ್ಲಿ ಚಿಕ್ಕಮಗಳೂರಿನ ಹಾದಿ ಹಿಡಿದಿದ್ದೆ! ಇದೇ ಊರ ಆಯ್ಕೆ ಮಾಡಿಕೊಂಡ ಕಾರಣ  ವರ್ಷ ಪೂರ್ತಿ ಮಳೆ ಸುರಿಯತ್ತೆ ಎಂಬ ಖುಷಿಗೋ, ಸೆಖೆಗಾಲವೇ ಇರುವುದಿಲ್ಲ ಎಂಬ ಸಂತಸಕ್ಕೋ ತಿಳಿದಿಲ್ಲ.. ಬಂದ ಒಂದೆರಡು ತಿಂಗಳು ಸ್ವಲ್ಪ ಜಾಸ್ತಿಯೇ ಕಷ್ಟವಾದರೂ ವರ್ಷವೆರಡು ಕಳೆಯುವಷ್ಟರಲ್ಲಿ ಇಡೀ ಊರು ನನ್ನದಾಗಿಹೋಗಿದ್ದು, ಬಿಟ್ಟು ಬರಲು ಮನಸೇ ಬಾರದಷ್ಟು ನಾ ಈ ನೆಲವ ಹಚ್ಚಿಕೊಂಡಿದ್ದು ಈಗ ಇತಿಹಾಸ.. ಮೊದಲೇ ಊರೂರು ಸುತ್ತೋ ಹುಚ್ಚಿರೋ ನಂಗೆ ಚಿಕ್ಕಮಗಳೂರು ಆಪ್ತವಾಗಿದ್ದು ದೊಡ್ಡ ವಿಷಯವಲ್ಲದಿದ್ದರೂ ಅಂಥದೇ ಮನಃಸ್ಥಿತಿಯ ಗೆಳೆಯರು ಸಿಕ್ಕಿದ್ದು ವಿಶೇಷ. 'ನಮ್ಮ ಚಿಕ್ಕಮಗಳೂರು' ಎಂಬ ನೆಪದಲ್ಲಿ ಪೂರ್ತಿ ಊರನ್ನು ಸುತ್ತಲು ಪ್ರಾರಂಭಿಸಿ ವರ್ಷ ಎರಡಾಯಿತು.. 
ಹೇಳಿ-ಕೇಳಿ ನಮ್ಮೂರು ಹುಲಿ-ಚಿರತೆಗಳಿಗೆ ಪ್ರಸಿದ್ಧವಾದದ್ದು. ಎಸ್ಟೇಟ್ ನ ದಾರಿಯಲ್ಲೆಲ್ಲಾದರೂ ಹುಲಿ ಎದುರಾದರೂ, ಶಾಲೆಯೊಳಗೆ ಚಿರತೆ ಬಂದು ಕೂತು ಪಾಠ ಕೇಳಿದರೂ ಅಚ್ಚರಿಯೇನಿಲ್ಲ :ಫ್ ಹಿಂಗೇ ಯಾವಾಗಲೋ ಊರೊಳಗೆ ಬಂದ ಚಿರತೆಯನ್ನ ನೋಡಿಕೊಂಡು ಬರುವ ಎಂದು ಹೊರಟಾಗ  ಮಾರ್ಗ ಮಧ್ಯದಲ್ಲಿ ಹುಟ್ಟಿಕೊಂಡ ಕನಸು 'ಮುತ್ತೋಡಿ'. 'ಮುತ್ತೋಡಿಯ ಕಾಡು ಅದೆಷ್ಟು ಚಂದವಿದೆ ಗೊತ್ತಾ' ಎಂಬ ಒಂದು ಮಾತು ಸಾಕಿತ್ತು ನಮಗೆ!! ಹಿಂದೆ ಮುಂದೆ ನೋಡದೆ ಮುಂದಿನ ವಾರ ಮುತ್ತೋಡಿಗೆ ಹೋಗುವ ಎಂಬ ಪ್ಲಾನ್ ಸಿದ್ಧವಾಗಿತ್ತು. ಅದ್ಯಾಕೋ ಕಾಲೇಜಿನ ಗಡಿಬಿಡಿಯ ಕೆಲಸಗಳ ನಡುವೆ ಆ ಮುಂದಿನ ವಾರ ತಿಂಗಳುಗಳು ಕಳೆದರೂ ಬಂದಿರಲೇ ಇಲ್ಲ.. ಪರೀಕ್ಷೆಗಳೆಲ್ಲ ಮುಗಿದ ಸಂಭ್ರಮಾಚರಣೆಗೆ ಮತ್ತೆ ಮುತ್ತೋಡಿ ನೆನಪಾಗಿತ್ತು. 
ತೀರ್ಥಹಳ್ಳಿ, ಶೃಂಗೇರಿ, ಶಿವಮೊಗ್ಗ ಹೀಗೆ ತುಂಗೆಯ ಮಡಿಲಲ್ಲೇ ಬೆಳೆದ ನಂಗೆ ಭದ್ರೆಯೆಂದರೆ ಅದೇನೋ ಸೆಳೆತ. ಸಮಾಸಮ ಬಳುಕಿ ತಣ್ಣಗೆ ಹರಿಯೋ ತುಂಗೆ ಪ್ರೀತಿಯ ಸೆಲೆಯಂತೆ ಕಂಡರೆ ರಭಸದಿ ಭೋರ್ಗರೆಯೋ ಭದ್ರಾ ಆಕರ್ಷಣೆಯ ತುತ್ತತುದಿ. ಭದ್ರೆಯ ತಟದ ಕಾಡು ಎಂಬ ಅಂಶ ಮತ್ತೂ ಸೆಳೆದಿತ್ತು ಆ ದಟ್ಟಡವಿಯೆಡೆಗೆ. ಪರೀಕ್ಷೆ ಮುಗಿದ ಮರುದಿನವೇ ಊರಿನ ಕಡೆ ಮುಖ ಮಾಡುವುದ ಬಿಟ್ಟು ಅರಣ್ಯ ಪರ್ವ ಶುರುವಾಗಿತ್ತು. 'ಬೆಳಗ್ಗೆಯೊಂದು ಸಂಜೆಯೊಂದರ ಹಾಗೆ ಎರಡು ಟ್ರಿಪ್ ಇರುತ್ತೆ, ಎಷ್ಟೊತ್ತಿಗ್ ಹೋಗ್ತೀರಾ ?' ಎಂದು ಕೇಳಿದ್ದ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರಿಗೆ ಬೆಳಗ್ಗೆಯೇ ಆಗ್ಬೋದು ಎಂಬ ಉತ್ತರ ನೀಡಿಯಾಗಿತ್ತು. ಹೀಗೆ ವರ್ಷದ ಕಡೆಯ ದಿನಕ್ಕೆ ಕಾಡೊಂದರ ನಡುವೆ ವಿದಾಯ ನೀಡೋ ಸಡಗರ ನಮ್ಮೊಡಗೂಡಿತ್ತು :) 
     ಬೆಳ್ಳಂಬೆಳಿಗ್ಗೆ 3-45 ನಿಂದಲೇ ದಡಬಡಿಸಿ ಎದ್ದು, ಜೊತೆಯಲ್ಲಿ ಉಳಿದವರಿಗೂ ಒಂದಷ್ಟು ಇರ್ರಿಟೇಟ್ ಮಾಡಿ ಎಬ್ಬಿಸಿ , ಮತ್ತಷ್ಟು ಬೈಸಿಕೊಂಡು ಚಿಕ್ಕಮಗಳೂರು ಬಿಡುವ ಹೊತ್ತಿಗೆ ಗಂಟೆ ಐದಾಗಿತ್ತು! ಮಲ್ಲಂದೂರು ರಸ್ತೆಯಲ್ಲಿ ಸುಮಾರು 40-45 ಕಿ.ಮೀ ಹಾವು ಕವಲಿನ ಹಾದಿ ಸಾಗಿದರೆ ಮುತ್ತೋಡಿಯ ಕಾಡು ಸ್ವಾಗತಿಸುತ್ತದೆ. ಗವ್ವೆನ್ನುವ ಕತ್ತಲು, ಒಂದೆಡೆ ಕಾಫಿ-ಟೀ  ಎಸ್ಟೇಟ್; ಮತ್ತೊಂದು ಬದಿ ಸಾವಿರಾರು ಅಡಿಯ ಪ್ರಪಾತ. ಆಗೊಮ್ಮೆ ಈಗೊಮ್ಮೆ ಘಮ್ಮೆನ್ನುವ ಕಾಫಿಯ ತಿರುಳ ಸುಗಂಧ( ನಮ್ಮೂರ ಕಾಫಿ ರುಚಿ ಬಲ್ಲವರಿಗಷ್ಟೇ ಇದು ಸುಗಂಧವಾಗಿರುತ್ತದೆ :ಫ್ ) , ಚಂದ್ರ ಇಲ್ಲದೇ ಸೂರ್ಯ ಮೂಡದೇ ಬರೀ ಚುಕ್ಕಿಗಳಿಂದಲೇ ಕೂಡಿದ್ದ ನೀಲಾಕಾಶ, ಕಾಡಿನ ಬಗೆಗಿಷ್ಟು ನನ್ನದೇ ರಮ್ಯ ಊಹಾಲೋಕ ಜೊತೆಗಿಷ್ಟು ಗೆಳೆಯರ ಮಾತುಕಥೆ! ಮುಂಜಾನೆಯೊಂದು ಇದಕ್ಕಿಂತ ಚಂದವಿರಲಾರದು ಅನ್ನೋ ಭಾವ ನನ್ನೊಳಗೆ.. 
    ದಿನಮಣಿ ಕಣ್ತೆರವ ಹೊತ್ತಿಗೆ ನಾವೈವರು ಭದ್ರಾ ಅಭಯಾರಣ್ಯದ ಮಡಿಲಲ್ಲಿ ಹಕ್ಕಿಗಳ ಕಲರವ ಆಲಿಸುತ್ತಿದ್ದೆವು. ಸುಮಾರು ಹತ್ತು ವರ್ಷಗಳ ಹಿಂದೆ ನಿಟ್ಟೂರಿನ ನೇಚರ್ ಕ್ಯಾಂಪ್ ನಲ್ಲಿ ತಟಸ್ಥವಾಗಿ ಕುಳಿತು ಪಕ್ಷಿಗಳ ಚಿಲಿಪಿಲಿ ಕೇಳಲು ಕಲಿತಿದ್ದ ಅಭ್ಯಾಸ ಇಂದ್ಯಾಕೋ ನಿರಾಯಾಸವಾಗಿ ನನ್ನೊಳಗೆ ಅರಳಿ ನಿಂತಿತ್ತು. ನೀಲಿ ಪುಕ್ಕ, ಕಪ್ಪು ಬಾಲ, ಕೆಂಪು ಕಣ್ಣು, ಚೀಂವ್ ಚೀಂವ್ ಸದ್ದು ಪ್ರತಿ ಪ್ರಕೃತಿ ಪ್ರೇಮಿಯ ಹೃದಯದಲ್ಲಿ ಅವರ್ಣನೀಯ ಆನಂದವ ಮೂಡಿಸುವುದಂತೂ ಸುಳ್ಳಲ್ಲ. ಪೂರ್ತಿ ಬೆಳಕಾಗಿ ಸೂರ್ಯ ರಶ್ಮಿ ಮೈ ತಾಕುವ ಮುಂಚೆಯೇ ತೆರೆದ ಜೀಪಿನಲ್ಲಿ ಸಫಾರಿ ಹೊರಡಲು ತುದಿಗಾಲಲ್ಲಿ ನಿಂತಿದ್ದೆವು ನಾವು!:) 6-45 ರಿಂದ ಮತ್ತೆರಡು ಘಂಟೆ ಈ ಯಾಂತ್ರಿಕ ಯುಗದಿಂದ ದೂರಾಗಿ ಕಾಡೊಳಗೆ ನಾವು ಕಳೆದುಹೋಗಿದ್ದೆವೋ; ನಮ್ಮಳಗೆ ಕಾಡು ಇಳಿದು ಹೋಗಿತ್ತೋ ನಾ ಕಾಣೆ!!  ಕೈ-ಕಾಲೆಲ್ಲಾ ಮರಗಟ್ಟಿ ಹೋಗುವಂಥ ತಣ್ಣನೆ ಕುಳಿರ್ಗಾಳಿ, ದಟ್ಟಾರಣ್ಯದ ನಡುವೆ ಅಪರೂಪಕ್ಕೊಮ್ಮೆ ಚುಂಬಿಸಿ ಹೋಗೋ ದಿನಕರನ ಕಿರಣಗಳು, ಜುಳು ಜುಳನೆ ಸದ್ದು ಮಾಡಿಕೊಂಡು ಹರಿಯೋ ನನ್ನಿಷ್ಟದ ಭದ್ರೆ.. "ಅನುಭವಿಸಿದವರಿಗೇ ಗೊತ್ತು ಅನುಭವದ ಮರ್ಮ!!" ದುರಾದೃಷ್ಟವಶಾತ್ ಪ್ರಾಣಿಗಳಾವುವೂ ಕಣ್ಣಿಗೆ ಬೀಳದಿದ್ದರೂ ಬೇಸರವಾಗದ ರೀತಿಯಲ್ಲಿ ಕಾಡಿನ ಮೋಡಿ ನಮ್ಮನ್ನು ಆವರಿಸಿತ್ತು. 'ಕ್ಯಾಮರಾ ತಂದಿದ್ದೂ ವ್ಯರ್ಥ.. ಒಂದಾದ್ರೂ ಹುಲಿ ಕಾಣ್ಬಾರ್ದಿತ್ತ ಮಾರಾಯ್ತಿ' ಎಂದು ಗೆಳೆಯ ಬೇಸರಿಸುತ್ತಿದ್ದರೆ, ಹುಲಿ ಕಂಡಿದ್ದರೆ ಕಾಡಿನ ಮನಮೋಹಕತೆಯೆಲ್ಲಾ ಹುಲಿಯ ನೆಪದಲ್ಲಿ ಕಳೆದುಹೋಗಿಬಿಡುತ್ತಿತ್ತೇನೋ ಎಂಬ ಭಯ ನನ್ನಾವರಿಸಿ 'ಕಾಣದಿದ್ದಿದ್ದೇ ಒಳ್ಳೆಯದಾಯ್ತು ಬಿಡು..' ಎಂದಿದ್ದ ನನ್ನ ಕೊಂದೇ ಬಿಡುವಷ್ಟು ಕೋಪದಲ್ಲಿ ನೋಡಿ ಮತ್ಯಾವುದೋ ಮರದ ಫೋಟೋ ಕ್ಲಿಕ್ಕಿಸಲು ದಾಪುಗಾಲಿಟ್ಟು ನಡೆದುಬಿಟ್ಟಿದ್ದ ಅವ. ಮರಳಿ ಬರುವ ಹಾದಿಯಲ್ಲಿ ಸೊಂಟ ಬಳುಕಿಸಿ, ಗಾಂಭೀರ್ಯದಿಂದ ನಡೆದು ಬರುತ್ತಿದ್ದ ನೂರು ಗರಿಯ ನವಿಲೊಂದೇ ನಮಗೆ ಕಂಡ ವನ್ಯಜೀವಿ. ಜೀಪಿಳಿಯುವ ಸಮಯಕ್ಕೆ ಡ್ರೈವರ್ ನ ಅದೆ ಹಳೆಯ ಡೈಲಾಗ್ ' ನನ್ನ ಸರ್ವಿಸ್ ನಲ್ಲೇ ಇದೇ ಮೊದಲು ಸಾರ್ ಒಂದೂ ಪ್ರಾಣಿ ಕಾಣಿಸದೇ ಇರೋದು.. ಛೇ ಹೀಗಾಗ್ಬಾರ್ದಾಗಿತ್ತು'!! ಕಿಸಕ್ಕೆಂದು ನಕ್ಕ ಗೆಳತಿಯ ಬಾಯಿ ಮುಚ್ಚಿಸಿ ಎಲ್ಲದಕ್ಕೂ ಅದೃಷ್ಟ ಬೇಕು ಬಿಡಿ ಎಂದು ಅವನ ಮುಂದುವರಿಯುವ 'ವಾರದ ಹಿಂದೆ ಹುಲಿ ಕಂಡಿತ್ತು ಗೊತ್ತಾ'  ಕಥೆಗೆ ಬ್ರೇಕ್ ಹಾಕುವಲ್ಲಿ ನಾವು ಯಶಸ್ವಿಯಾಗಿದ್ದೆವು. ಏನೇ ಆದರೂ ಕಾಡಿನೊಳಗೆ ಐದು ಜನ ಹಿಡಿದು ನಿಲ್ಲುವಷ್ಟು ದೊಡ್ಡದಾದ, ಮುನ್ನೂರು ವರ್ಷಗಳ ಇತಿಹಾಸವಿರೋ ತೇಗದ ಮರದ ಚಿತ್ರ ಈ ಕ್ಷಣಕ್ಕೂ ಕಣ್ಣಲ್ಲೇ ನಿಂತಿದೆ.  
           ಎಲ್ಲ ಅನುಭವಗಳನ್ನೂ ಮತ್ತೆ ಅಮ್ಮನೊಂದಿಗೆ ಹಂಚಿಕೊಳ್ಳುವಾಗ ಚಿಕ್ಕಮಗಳೂರ್ಯಾಕೋ ಇನ್ನೂ ಆಪ್ತವಾದಂತೆ ಭಾಸವಾಗಿತ್ತು. ಮುತ್ತೋಡಿಯ ಕಾಡಿಗೆ ಸಂಜೆಯೂ ಒಮ್ಮೆ ಹೋಗಿ ನೋಡ್ಬೇಕು ಅನ್ನೋ ಆಸೆ ಮನದೊಳಗೆ ಮೂಡಿಯಾಗಿದೆ. ಸೂರ್ಯಾಸ್ತದ ಕೆಂಪು ಕೆಂಪು ರಂಗಲ್ಲಿ ಕಾಡು ಇದರ ನಾಲ್ಕು ಪಟ್ಟು ಸೆಳೆಯಬಹುದೇನೋ ಎಂಬ ಕುತೂಹಲ ನನ್ನಲ್ಲಿ. ಈ ಊರಿನ ಮೋಹಕತೆಗಳೆಲ್ಲಾ ಅಂತೆಯೇ ಉಳಿದುಬಿಡಲಿ.
    " ಅಲ್ಲೆ ಇವೆ ಕಾಜಾಣ ಕೋಗಿಲೆ
           ಏನೆ ಗಿಳಿ ಕಮಕಳ್ಳಿಯೂ.. 
       ಕಂಪೆರೆವ ಸೀತಾಳೆ ಕೇದಗೆ 
          ಬಕುಳ ಮಲ್ಲಿಗೆ ಬಳ್ಳಿಯೂ.. 
       ನೀಲಿ ಬಾನಲಿ ಹಸಿರು ನೆಲದಲಿ 
           ಕಂಗಳೆರಡವೆ ಬಲ್ಲವು.. 
       ಅಲ್ಲಿ ಸಗ್ಗವೆ ಸೂರೆಗೊಂಡಿದೆ
            ನಂದನವೆ ನಾಡೆಲ್ಲವೂ.. "
ಮುತ್ತೋಡಿಯ ಕಾಡೆಂದರೆ ಮತ್ತೆ ಮತ್ತೆ ನೆನಪಾಗೋ ಕುವೆಂಪುರ ಸಾಲುಗಳ ಜೊತೆಗೆ ಕಾಡಿನ ಕಂಪೂ ಚಿರವಾಗಲಿ ಎದೆಯೊಳಗೆ..

ಮಳೆ ಹಾಡಾಗಲಿ.. ಬದುಕಾಗಲಿ..

ಹೊಳೆ ತುಂಬಾ ನೀರು, ಮನೆ ತುಂಬಾ ಖುಷಿ, ಮನಸ್ಸು ತುಂಬಾ ಪ್ರೀತಿ :) ಮಳೆಗಾಲ ಅಂದ್ರೆ ಯಾವತ್ತಿಗೂ ಸಂಭ್ರಮವೇ..  ಆಲಿಕಲ್ಲು, ಮುಳುಗೋ ರಾಮ ಮಂಟಪ, ಕೊಚ್ಚೆ ಕಾಲು ಹಾಗೂ ಮುರಿದುಹೋಗಿರೋ ಕೊಡೆ(ಛತ್ರಿ).. ಮಳೆಯ ಮೇಲೆ ಒಲವಾಗದೇ ಹೋಗುವುದಕ್ಕೆ ಕಾರಣವೇ ಸಿಗುವುದಿಲ್ಲವಾದೀತು.. ಪ್ರತಿ ಊರಿನ ಮಳೆಗೂ ಅದರದ್ದೇ ಆದ ಅಂದ-ಚಂದವಿದೆ, ಘನತೆ-ಗಾಂಭೀರ್ಯವಿದೆ. ತೀರ್ಥಹಳ್ಳಿಯಲ್ಲೊಂದು ಆಪ್ತಭಾವವ ಕಟ್ಟಿಕೊಡೋ ಮಳೆಹನಿಗಳು, ಚಿಕ್ಕಮಗಳೂರಲ್ಲಿ ಹೂಕಂಪನ ಮೂಡಿಸುತ್ತವೆ.. ಬೆಂಗಳೂರಿನ ಮಳೆಯಲ್ಲಿ ಒಂಟಿತನದ್ದೊಂದು ಛಾಪಿದೆ.. ಶಿವಮೊಗ್ಗದಲ್ಲಿ ನಿರ್ಲಿಪ್ತವೆಂತನಿಸೋ ಮಳೆಗಾಲ, ಸಾಗರ-ಶಿರಸಿಯಲ್ಲೆಲ್ಲಾ ಆರ್ಭಟವೆನಿಸಿಬಿಡುತ್ತದೆ. ಕಡಲೂರಿನಲ್ಲಿ ಮಳೆಯ ಲಯವೇ ಬೇರೆ! ಬಯಲುಸೀಮೆಯಲ್ಲಿ ಮಳೆಯೆಂದರೆ ಜೀವಜಲ.
ಮಳೆಗೊಂದು ತಾಳವಿದೆ.. ಧೇನಿಸಿದರೆ ನಮ್ಮದೆನಿಸೋ ರಾಗವಿದೆ.. ಶೃತಿಬದ್ಧವಾಗಿ ಸುರಿಯೋ ಮಳೆಯಲ್ಲೊಂದು ಮೌನವಿದೆ. ಮೌನದಾಚೆಗಿನ ಉಳಿದುಹೋದ ಮಾತುಗಳಿವೆ.. 
ಸುಮ್ಮನೇ ಕುಳಿತರೆ ಸಾಂತ್ವನಿಸೋ ಮಳೆ, ಖುಷಿಸ ಹೊರಟರೆ ಕುಣಿಯಲಾರಂಭಿಸುತ್ತದೆ :) ಮಳೆಯ ಹುಡುಕಿಕೊಂಡು ಊರೂರು ಅಲೆದಿದ್ದಿದೆ.. ಮಳೆಗೋಸ್ಕರವೇ ನಾಲ್ಕು ವರ್ಷದ ಓದನ್ನ ಆ ಊರಲ್ಲಿ ಓದಿದ್ದಿದೆ.. ಜೋರಾಗಿ ಮಳೆ ಬರ್ಲಿ ಅಂತೆಲ್ಲಾ ಕಣ್ಣಲ್ಲಿ ನೀರು ತುಂಬಿಕೊಂಡು ದೇವರಲ್ಲಿ ಬೇಡಿಕೊಂಡಿದ್ದಿದೆ.. ಮಳೆಯಾಗುವಾಗ ಸಮುದ್ರ ಹೇಗಿರತ್ತೆ? ಕಾಡಲ್ಲಿ ಮಳೆಯಾದ್ರೆ ಎಷ್ಟು ಜೋರಾಗಿ ಕೇಳತ್ತೆ? ಬೆಟ್ಟದ ಮೇಲೆ ನಿಂತಾಗ ಮಳೆಹನಿ ರಭಸ ಹೆಚ್ಚಿರತ್ತಾ? ಅನ್ನೋ ಎಕ್ಸ್ ಪೆರಿಮೆಂಟ್ ನೆಲ್ಲಾ ಅದೆಷ್ಟೋ ಬಾರಿ ಮಾಡಿದ್ದಿದೆ.. ಇವೆಲ್ಲದರ ಆಚೆಗೂ ಮಳೆಯ ಬಗೆಗಿನ ಕುತೂಹಲ ಹಾಗ್ ಹಾಗೆಯೇ ಉಳಿದುಹೋಗಿಬಿಡುತ್ತದೆ. 
ಮಳೆಯಲ್ಲಿ ಮಡಿಯುಟ್ಟು ಕೊಡೆಹಿಡಿದು, ಚಪ್ಪಲಿಯೂ ಹಾಕದೆ, ಕೆಸರು ರಸ್ತೆಯಲ್ಲೇ ದೇವಸ್ಥಾನಕ್ಕೆ ನಡೆದುಹೋಗೋ ಚಿಕ್ಕಪ್ಪ.. ’ಗಾಜನೂರು ಡ್ಯಾಮ್ ಅಲ್ಲಿ ನೀರು ಬಿಟ್ಬಿಟ್ರು ಕಣೇ ಅಕ್ಕಾ.. ಇಲ್ದಿದ್ರೆ ಇವತ್ತಿಗ್ ರಾಮ ಮಂಟಪ ಮುಳುಗಿ ರಜೆ ಸಿಕ್ತಿತ್ತು ನಮ್ಗೆ’ ಅಂತ ಹ್ಯಾಪು ಮೋರೆ ಹಾಕಿ ಕೂತಿರೋ ಪುಟ್ಟ ತಮ್ಮ.. ಮಳೆಗಾಲದಲ್ಲಿ ಶೀತವಾಗದಿರಲಿ ಅಂತ ದೊಡ್ಡಮ್ಮ ಕೊಟ್ಟಿರೋ ಪೆಪ್ಪರುಮೆಂಟಿನ ತರದ ಶುಂಠಿ ಮಾತ್ರೆ.. ಮಳೆಯಂದ್ರೆ ಮನಮುತ್ತೋ ಆಪ್ತ ಭಾವಗಳ ಸಂತೆ :)
ನೀ ಈ ಊರಿಗೆ ಮತ್ತೆ ಬಂದ್ರೆ ಮಳೇಲೊಂದು ಲಾಂಗ್ ಡ್ರೈವ್ ಕರ್ಕೊಂಡು ಹೋಗಿ ಕಡೆಗೊಂದು ಬೆಚ್ಚಗಿನ ಕಾಫೀ ಕೊಡಿಸ್ತೀನಿ ಅನ್ನೊ ಬದುಕ ಗೆಳೆಯ.. ಪೇಪರ್ ದೋಣಿಯ ಜೊತೆಗೆ ಕವನದ ಸಾಲಿರಿಸಿ   ಪೋಸ್ಟ್ ಮಾಡಿರೋ ಗೆಳತಿ.. ಮಳೆಯಾದಾಗೆಲ್ಲಾ ತಿನ್ಬೇಕು ಅನ್ನಿಸೋ ಭಟ್ರಂಗಡಿ ಪಾನಿಪೂರಿ.. ಮಳೆಯಂದ್ರೆ ಮನಕಲುಕೋ ನಿಶ್ಶ್ಯಬ್ಧ ಭಾವಗಳ ಚಡಪಡಿಕೆ :)
ಇವತ್ತಿನ್ನೂ ಆರಿದ್ರೆಯ ಮಳೆ ಮುಗಿದಿದೆ..  ನಾಳೆಯಿಂದ ಧೋ ಸುರಿಯೋ ಪುನರ್ವಸು ನಕ್ಷತ್ರದ ಮಳೆ :) 
ಮನದ ಭಾವಗಳನ್ನೆಲ್ಲಾ ಪ್ರತಿಫಲಿಸೋ ಮಳೆ ಇನ್ನಷ್ಟು ಸುರಿಯಲಿ.. ಮತ್ತಷ್ಟು ಭೋರ್ಗರೆಯಲಿ. ಮಳೆ ಹಾಡಾಗಲಿ.. ಬದುಕಾಗಲಿ. 

ಅನಾಹತ..

ಅದೊಂದು ಬದುಕ ತುಂಬಾ ಪ್ರೀತಿಯನ್ನೇ ಹುಡುಕುತ್ತಾ ಹೋದವರ ಕಥೆ! ಪ್ರೀತಿಯೆಂಬ ಯುದ್ಧದಲ್ಲಿ ಗೆಲ್ಲುತ್ತಲೇ ಸೋತವರ ಕಥೆ.. ಜಗತ್ತು ತೊಡಿಸಿದ ಮಹಾಪತೀವ್ರತೆಯರೆಂಬ ಹಣೆಪಟ್ಟಿಯ ಭಾರ ಹೊರಲಾರದೇ ನಲುಗಿದವರ ಕಥೆ..
ಅಲ್ಲಿದ್ದವರೈವರು.. ಸ್ವರ್ಗದ ವಸಂತೋತ್ಸವದ ಸಂಭ್ರಮಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾ ಗತಕ್ಕೆ ಜಾರುತ್ತಾರೆ ಈ ನಾರೆಯರು..
ರಾಮಾಯಣದುದ್ದಕ್ಕೂ ಕಾಡುವ ಊರ್ಮಿಳೆ ತನ್ನ ವೇದನೆಗಳ ನಿವೇದಿಸುವ ಪರಿ ಆತ್ಮೀಯವೆನಿಸಿದರೂ ನಮ್ಮದಾಗುವುದಿಲ್ಲ! ಪಾತ್ರಧಾರಿಗಳೆನಿಸುತ್ತಾರೆಯೇ ಹೊರತು ರಂಗದ ಮೇಲಿದ್ದವರು ಊರ್ಮಿಳೆಯೆನಿಸುವುದಿಲ್ಲ.. ಆದರೂ ಊರ್ಮಿಳೆ ಮನ ಮುಟ್ಟುತ್ತಾಳೆ! ಮಾತುಗಳ ಮೂಲಕ, ಭಾವಗಳ ಮೂಲಕ ಅವಳ ಮೂಕ ಸಂವೇದನೆಗಳು ನೋಡುಗರನ್ನು ತಲುಪುತ್ತವೆ.. ಲಕ್ಷ್ಮಣ, ರಾಮನ ತಮ್ಮನಾಗಿ ಮಾತ್ರವಲ್ಲದೆ, ಊರ್ಮಿಳೆಯ ಗಂಡನೂ ಆಗಿದ್ದ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹದಿನಾಲ್ಕು ವರ್ಷ ಪ್ರೀತಿಸುವ ಪತಿಯನ್ನು ಅಗಲಿ ಅರಮನೆಯಲ್ಲಿ ವನವಾಸ ಅನುಭವಿಸುವ ಹದಿನಾರರ ತುಂಬು ಹರೆಯದ ಹುಡುಗಿ ಊರ್ಮಿಳೆ. ದೇಹದ ಬಯಕೆಗಳ ಮೆಟ್ಟಿ ಪ್ರೀತಿಗೆ ಹಾತೊರೆಯುತ್ತಾ ಹಪಾಹಪಿಸುವ ಅವಳಿಗೆ ವನವಾಸದ ನಂತರವೂ ಗಂಡನಾಗಿ ಲಕ್ಷ್ಮಣ ದೊರೆಯುವುದೇ ಇಲ್ಲ! ಚರಿತ್ರೆಯ ಪುಟಗಳಲ್ಲಿ ದಾಖಲಾಗುವ ರಾಮಾಯಣದ ಪಾತ್ರಗಳಲ್ಲಿ ಊರ್ಮಿಳೆ ಕಾಣುವುದೇ ಇಲ್ಲ... 'ನೀನು ಲಕ್ಷ್ಮಣನ ಜೊತೆಗೆ ಕಾಡಿಗೆ ಹೋಗಿದ್ದರೆ, ಅಲ್ಲಿ ಮಾಯಾಜಿಂಕೆಯ ಬೇಟೆಯ ಸಮಯದಲ್ಲಿ ಸೀತೆಯ ಜೊತೆಯಿದ್ದಿದ್ದರೆ.. ರಾವಣನ ಬಲೆಯಲ್ಲಿ ಸೀತೆ ಬೀಳದೇ ಹೋಗುತ್ತಿದ್ದಳಾ?' ಎಂಬ ಮಂಡೋದರಿಯ ಪ್ರಶ್ನೆ ರಾಮಾಯಣವನ್ನು ನೋಡಬಹುದಾದ ಮತ್ತೊಂದು ಆಯಾಮವನ್ನು ತೋರಿಸುತ್ತದೆ..
ಪ್ರಶ್ನೆಗಳಲ್ಲಿಯೇ ಮುಳುಗೇಳುವ ಊರ್ಮಿಳೆಯ ನಂತರ ಉತ್ತರವಾಗಿ ಆವರಿಸಿಕೊಳ್ಳುವವಳು ಅಹಲ್ಯೆ! ತಾಯಿಯಿಲ್ಲದೆ ಆಶ್ರಮದಲ್ಲಿ ಬೆಳೆದ ಮಗು ಆಕೆ. ಆಶ್ರಮದ ಕಟ್ಟುಪಾಡಿಗೆ ಹೊಂದಲಾಗದೇ ಬಿಡುಗಡೆಗೆಂದು ಕಾಯುತ್ತಿರುವ ದಿನದಂದೇ ಜೀವನಪರ್ಯಂತದ ಬಂಧನಕ್ಕೆ ಒಳಗಾದವಳು. ಮೋಹಿಸದೇ ವರಿಸಿದ ಪತಿಯನ್ನು ಒಪ್ಪಲಾಗದೇ ಪ್ರತಿ ರಾತ್ರಿ ತನ್ನನ್ನು ತಾನೇ ದಹಿಸಿಕೊಂಡವಳು. ಗೌತಮರ ಸನ್ಯಾಸತ್ವದ ಜೀವನವನ್ನು ಸಹಿಸಲಾರದೇ ಎದೆ ತುಂಬಾ ಪ್ರೀತಿ ನೀಡುವ ಜೀವಕ್ಕಾಗಿ ಕಾದ ನೆಲದಂತೆ ಕಾದವಳು! ಆಗ ಬಂದಿದ್ದ ಇಂದ್ರ.. ಅವನ ಪ್ರೀತಿಗೆ, ಎದೆಯ ಹರವಿಗೆ, ತೋಳ ಬಿಸುಪಿಗೆ ಇಡಿ ಇಡಿಯಾಗಿ ತನ್ನನ್ನು ಅರ್ಪಿಸಿಕೊಂಡ ಅಹಲ್ಯೆಗೆ ಕಡೆಗೂ ಸಿಕ್ಕಿದ್ದು ಏಕಾಂತವೆಂಬ ಬಂಧನವಿಲ್ಲದ ಬಯಲು. ಇಂದ್ರನನ್ನು ಮೋಹಿಸಿದ್ದು ಹೌದು, ಅವನೊಡನೆ ಭೋಗಿಸಿದ್ದು ಹೌದು, ಇಂದ್ರನೆಂದು ತಿಳಿದೇ ಅವನೊಡನೆ ಪ್ರೀತಿಗೆ ಬಿದ್ದಿದ್ದು ಎಂಬುದನ್ನು ಇನಿತೂ ಅಂಜಿಕೆಯಿಲ್ಲದೆ ಹೇಳಿ ಉಳಿದದ್ದೆಲ್ಲವನ್ನೂ  ಕಟ್ಟುಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿ ಬಿಡುವ ಅಹಲ್ಯೆಯನ್ನು ಬಾಚಿ ತಬ್ಬಿಕೊಂಡುಬಿಡುವ ಮನಸ್ಸಾಗುತ್ತದೆ. ಗಂಡನ ನಿರಾಕರಣೆಗೆ ಒಳಗಾದ ಹೆಣ್ಣು ಪ್ರೀತಿಗಾಗಿ ಹಂಬಲಿಸಿದರೆ, ಕೈ ಚಾಚಿದರೆ ತಪ್ಪು ಎನ್ನುವ ಸ್ವಯಂಘೋಷಿತ ಬುದ್ಧಿಜೀವಿಗಳೆದುರಿಗೆ 'ಅನಾಹತ' ಬೇರೆಯದೆ ರೀತಿಯಾಗಿ ಎದ್ದುನಿಲ್ಲುತ್ತದೆ..
ಕಡೆಗೆ ಬರುವವಳು ರಾಧೆ! ಅದೇ ನಡುಮಧ್ಯಾಹ್ನದ ಕನಸಲ್ಲಿ ಬಂದು ಕೃಷ್ಣನ ಬಗ್ಗೆ ಕುತೂಹಲವ ಕೆರಳಿಸುವ ರಾಧೆ.. ಮುರುಳಿಯ ಕೊಳಲ ನಾದಕ್ಕೆ ಮಾರುಹೋದವಳು, ಅವನ ಬೆಚ್ಚಗಿನ ಸ್ಪರ್ಶಕ್ಕೆ ಮಾರುಹೋದವಳು, ನವಿರು ಪ್ರೀತಿಗೆ ಮನಸೋತವಳು.. ರಾಧೆ ಹೇಳುವ ಕಥೆ ಕಲುಕುತ್ತದೆ! ಕೊಳಲ ಬಿಸುಟು ಹೊರಟ ಕೃಷ್ಣನನ್ನು ಒಮ್ಮೆ ತಡೆದು ನಿಲ್ಲಿಸುವ ಮನಸ್ಸಾಗುತ್ತದೆ.. 'ಮಥುರೆಗೆ ಹೋಗಬೇಡವೋ ಮಾಧವಾ.. ರಾಧೆ ನೋಯುತ್ತಾಳೆ' ಎಂದು ಕೂಗಿ ಹೇಳುವ ಎಂದೆನಿಸುತ್ತದೆ. ಕಡಲು ಸೇರುವ ಮೊದಲೇ ನದಿ ಬತ್ತಿದಂತೆ  ಪ್ರೀತಿಯನ್ನು ಪೂರ್ಣವಾಗಿ ತನ್ನದಾಗಿಸಿಕೊಳ್ಳುವ ಮೊದಲೇ ರಾಧೆ ಏಕಾಂಗಿಯಾಗುತ್ತಾಳೆ.. ಕೊಳಲನೂದುವ ಉಸಿರಲ್ಲಿ ಬೆಂಕೆಯಿತ್ತೇ ಎಂಬುವಷ್ಟು ವಿರಹದಲ್ಲಿ ಬೇಯುತ್ತಾಳೆ! 'ಯಾಕಾಗಿ ಬಂದೆ ನೀನು ಕೇಶವ.. ಏನಾಗಿ ಹೋದೆ ನೀನು ಕೇಶವ..' ರಾಧೆ ಕಾಡುತ್ತಾಳೆ, ಕದಲಿಸುತ್ತಾಳೆ.. ಕೃಷ್ಣ ಕರಗುತ್ತಾನೆ, ಕಣ್ಣೀರಾಗಿಸುತ್ತಾನೆ.
ಮಂಡೋದರಿ, ಗಾಂಧಾರಿಯರು ತಮ್ಮ ಕಥೆಗಳನ್ನು ವಿಸ್ತರಿಸದಿದ್ದರೂ ನೋವಿನ ಮಜಲುಗಳನ್ನು ಉಂಡ ಕುರುಹಾಗಿ ನಾಟಕದುದ್ದಕ್ಕೂ ಆಗಾಗ ಸುಳಿದಾಡುತ್ತಿರುತ್ತಾರೆ..
ಪುರಾಣದ ಸ್ತ್ರೀ ಪಾತ್ರಗಳ ಭಾವಕ್ಕೆ, ನೋವಿಗೆ ದನಿಯಾಗುವಲ್ಲಿ, ಹೊಸದೊಂದು ಆಯಾಮವನ್ನೇ ಕಟ್ಟಿಕೊಡುತ್ತಾ ಆಲೋಚನಾ ಲಹರಿಯನ್ನು ಸೆಳೆಯುವಲ್ಲಿ ನಾಟಕ ರಚನಕಾರರು ಗೆದ್ದಿದ್ದಾರೆ. ಪಾತ್ರಗಳಿಗೆ ಇನ್ನಷ್ಟು ಜೀವ ತುಂಬಬೇಕಿತ್ತು, ಮತ್ತಷ್ಟು ಅನುಭವಿಸಬೇಕಿತ್ತು ಎಂಬ ಆಕ್ಷೇಪಣೆಯ ಹೊರತಾಗಿಯೂ ನಾಟಕ ಗೆಲ್ಲುತ್ತದೆ. ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಎಲ್ಲವೂ ಅಚ್ಚುಕಟ್ಟು. ಒಟ್ಟಾರೆಯಾಗಿ 'ಅನಾಹತ' ಅವ್ಯಾಹತವಾಗಿ ಮನಸ್ಸನ್ನು ತುಂಬಿಕೊಳ್ಳುತ್ತದೆ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆ

ಬದುಕ ಒಂದು ದಡದಲ್ಲಿ ನಿಂತು ನೋಡಿದರೆ ಸಾವೆಂಬುದು ಒಮ್ಮೆ ಆಚೆ ದಡದಲ್ಲಿ ನಿಂತು ಕೈಬೀಸುವ ಅಪರಿಚಿತ, ಮತ್ತೊಮ್ಮೆ ಬಗಲಿನಲ್ಲಿಯೇ ಮಾತಿಗೆ ಕೂರುವಷ್ಟು ಆತ್ಮೀಯ. ಒಮ್ಮೆ ಕಂಡವರಾರೂ ತಿರುಗಿ ಬಂದು ವಿವರಿಸುವ ಸಾಹಸ ಮಾಡಿಲ್ಲವಾದ್ದರಿಂದ, ಸಾವೆಂಬುದು ಬದುಕಿರುವ ಎಲ್ಲ ಜೀವಿಗಳಿಗೂ  ಕಣ್ಣೆದುರಿಗಿದ್ದೇ ಕಾಣದಂತಿರುವ ಅತ್ಯದ್ಭುತ ವಿಸ್ಮಯ.  

ಬದುಕೆಂಬ ಮಾಯೆಯ ಸುತ್ತ ಸಾವು ಕಟ್ಟುವ ಕಥೆಯನ್ನು ರಂಗರೂಪವಾಗಿಸಿದರೆ ’ಮಹಾಮಾಯಿ’ ಪ್ರತ್ಯಕ್ಷಳಾಗುತ್ತಾಳೆ. ಊರಿನ ಜನರು ಅವಳಿಗಿಟ್ಟ ಹೆಸರು ’ಶೆಟವಿ ದೇವಿ’. ಸಾವಿನ ಅಧಿದೇವತೆ ಅವಳು.. ಸಂಜೀವಶಿವನೆಂಬ ಸಾಕು ಮಗ, ಗಿರಿಮಲ್ಲಿಗೆಯೆಂಬ ಸಹಾಯಕಿ. ಸಾವಿನ ತಾಯಿಯ ಮಗ ಜೀವ ಉಳಿಸುವ ವೈದ್ಯ! ಈ ವಿರೋಧಾಭಾಸವೇ ನಾಟಕದ ಮೂಲಧಾತು. ಸಂಜೀವಶಿವ ಒಮ್ಮೆ ನಾಡಿ ನೋಡಿದನೆಂದರೆ ಖಾಯಿಲೆ ಗುಣಮುಖವಾದಂತೆಯೇ ಲೆಕ್ಕ.. ಆದರೆ ಅವನು ನಾಡಿ ನೋಡುವುದಕ್ಕೆ ತಾಯಿಯ ಅಪ್ಪಣೆಯಾಗಬೇಕು. ಈ ಅಪ್ಪಣೆ ದೊರೆತ ನಂತರವೇ ವೈದ್ಯ ಮಾಡುವ ಪ್ರಕಿಯೆ ಸಂಜೀವಶಿವನಿಗೆ ವರವೂ ಹೌದು ಅಂತೆಯೇ ಸಂಕೋಲೆಯೇ ಹೌದು.. ಸ್ವಾತಂತ್ರ್ಯವೆಂಬ ಬದುಕನ್ನು, ಸಾವೆಂಬ ಸಂಕೋಲೆ ಇಂಚಿಂಚಾಗಿ ಆವರಿಸುವಾಗ ಚಡಪಡಿಸುವ ಸಂಜೀವಶಿವನ ಮನಸ್ಸು ಚಿನ್ನದ ಪಂಜರದೊಳಗಿನ ಹಸಿರು ಗಿಳಿ.. 
’ಬಂದೇ ಬರುತ್ತದೆಂದು ಗೊತ್ತಿರುವ ಸಾವನ್ನು ಕಾಯುವ ಶಿಕ್ಷೆ ಯಾರಿಗೂ ಬರಕೂಡದು’ ಎಂಬ ಪುಷ್ಪಗಂಧಿಯ ಆಳದ ಮಾತುಗಳು ಬದುಕಿನ ಕಟ್ಟಕಡೆಯ ತೀರದಲ್ಲಿ ನಿಂತಿರುವ ರಾಜಕುಮಾರಿ ಇರುವಂತಿಗೆಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಜೀವನಪ್ರೀತಿಯನ್ನೆಲ್ಲಾ ತನ್ನೆದೆಗೇ ಬಸಿದುಕೊಂಡು , ಬದುಕಬೇಕೆಂಬ ತೀವ್ರ ಹಂಬಲವಿದ್ದಾಗಿಯೂ ; ಸಾವಿನ ನಾವೆಯನ್ನೇರುವ ಪಾರಿಜಾತದಂಥಾ ಹುಡುಗಿ ರಾಜಕುಮಾರಿ ಇರುವಂತಿಗೆ.  ಯಾವುದೋ ಮುಗ್ಧತೆಯ ಸೆಳವಿಗೆ ಒಳಗಾಗಿ ಸಾವಿನ ಗುಹೆಯೊಳಗೆ ನಡೆದುಬಿಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವೈದ್ಯ ಸಂಜೀವಶಿವನನ್ನು ಎದುರುಗೊಳ್ಳುತ್ತಾಳೆ. ಅದು ಬಿಡುಗಡೆಯ ಮೊದಲ ಹಂತ. ತಾಯಿಯ ಅಪ್ಪಣೆಗೆ ವಿರುದ್ಢವಾಗಿ ಇರುವಂತಿಗೆಯ ನಾಡಿ ಮಿಡಿತಕ್ಕೆ ಸ್ಪಂದಿಸುವ ಸಂಜೀವಶಿವ ಹಾಗೂ ಜೀವನೋತ್ಸಾಹವನ್ನು ಮರಳಿಪಡೆದು ಪ್ರೀತಿಯ ಮಾಯೆಗೆ ಸಿಲುಕುವ ರಾಜಕುಮಾರಿ. 
  ನಂತರದ್ದೆಲ್ಲಾ ಪ್ರೀತಿಯನ್ನು ಉಳಿಸಿಕೊಳ್ಳಲು ಸಾವಿನ ವಿರುದ್ಧ ಸೆಣಸಾಟಕ್ಕೆ ನಿಲ್ಲುವ ಸಂಜೀವಶಿವನ ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯ ವಿವರ ಸಂಕಲನ. ಸಂಜೀವಶಿವ ನಮ್ಮೆಲ್ಲರ ಪ್ರತಿರೂಪವಾಗಿ ಕಣ್ಣೆದುರಿಗೆ ನಿಲ್ಲುತ್ತಾನೆ. ಹೆಜ್ಜೆ ಹೆಜ್ಜೆಗೂ ತಾಯಿಯೆಂಬ ಮೋಹದೊಂದಿಗೆ, ಸಾವೆಂಬ ಮಾಯೆಯೊಂದಿಗೆ, ಅಧಿಕಾರವೆಂಬ ಬಲಿಷ್ಠ ಕೋಟೆಯೊಂದಿಗೆ ನಡೆಯುವ ಅವನ ಘರ್ಷಣೆಗಳು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನಲ್ಲೊಂದು ಕೋಲಾಹಲವನ್ನೆಬ್ಬಿಸುತ್ತವೆ. ಪ್ರೀತಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸ್ವ ಇಚ್ಛೆಗಾಗಿ, ಸ್ವಾಭಿಮಾನಕ್ಕಾಗಿ ತುಡಿಯುವ ಅವನ ರೀತಿ ನಮ್ಮದೂ ಆಗಿಹೋಗುತ್ತದೆ.ಮೊದಲೆಲ್ಲೋ ಪೇಲವ ಎನಿಸುತ್ತಿದ್ದ ಅವನ ವ್ಯಕ್ತಿತ್ವ ನಾಟಕ ಮುಗಿಯುವ ಹೊತ್ತಿಗೆ ಪೂರ್ಣ ಪಾತ್ರವಾಗಿ ನಾಟುತ್ತದೆ. 
ಸಂಜೀವಶಿವನೊಡನೆ ಸೆಣಸುವ, ಪೆಟ್ಟಿಗೆ ಪ್ರತಿ ಪೆಟ್ಟು ನೀಡುವ, ಪದೇ ಪದೇ ಅವನ ಸಂಕಲ್ಪಕ್ಕೆ ಕಲ್ಲೆಸೆಯುವ ಶಕ್ತಿ ಮಹಾಮಾಯಿ! ಆ ಮಾಯೆ ಸಾವೋ, ನಮ್ಮೊಳಗಿನ ಅಂಧಕಾರವೋ, ಒಳಗೆ ಸುಪ್ತವಾಗಿರುವ ಅಹಂಕಾರವೋ ಅಥವಾ ನಮ್ಮೊಳಗಿನ ಸಾಮರ್ಥ್ಯವನ್ನು ಹೊರತರುವ ಸಲುವಾಗಿ ಕಣ್ಣೆದುರು ನಿಲ್ಲುವ ಪ್ರಬಲ ರೂಪವೋ ಎಂಬ ಗೊಂದಲ ಈ ಕ್ಷಣಕ್ಕೂ ಉಳಿದುಹೋಗಿದೆ. ಅವಳ ಭೀಕರ ರೂಪ, ಭಾವನೆಯೇ ಇಲ್ಲದಂತೆ ವರ್ತಿಸುವ , ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಅವಳದೇ ಅಂಶ , ಎಲ್ಲದರಾಚೆಗೆ ತಾಯಿಯೆಂಬ ಮಮತೆಯನ್ನು ಎದೆಯಾಳದಲ್ಲಿ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗಿಸುವ ಮಹಾಮಾಯಿ ನಾಟಕ ಮುಗಿದ ಎಷ್ಟೋ ಹೊತ್ತಿನ ನಂತರ ಒಳಗಿನ ಯಾವುದೋ ಬಾಗಿಲು ದಾಟಿ ಹೊರನಡೆಯುತ್ತಾಳೆ. ಅವಳು ಹೊರನಡೆದ ಮೇಲೆಯೇ ಒಳಗಿದ್ದದ್ದು ಬರಿದೆ ಮಾಯೆ ಎಂಬ ಸತ್ಯ ಗೋಚರವಾಗುತ್ತದೆ. 
ಈ ಸಂಘರ್ಷಗಳ ನಡುವೆ ನಡೆಯುವ ಬದುಕ ಅಷ್ಟೇನೂ ಕಷ್ಟವಲ್ಲ ಎಂಬುದಕ್ಕೆ ಸುತ್ತಲಿನ ಪಾತ್ರಗಳು ಮೂಡಿಸುವ ಹಾಸ್ಯದ ತೆಳು ಅಲೆಯೇ ಸಾಕ್ಷಿ. ಪ್ರತಿ ಪಾತ್ರವೂ ಬದುಕ ಒಂದೊಂದು ಹಂತವನ್ನು ಪ್ರತಿಬಿಂಬಿಸುವಲ್ಲಿ ಗೆಲ್ಲುತ್ತದೆ ಹಾಗೂ ತನ್ಮೂಲಕ ನಾಟಕವನ್ನೂ ಗೆಲ್ಲಿಸುತ್ತದೆ. ಆ ನೆರಳು ಬೆಳಕಿನಾಟ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬದಲಾಗೋ ಬಣ್ಣಬಣ್ಣದ ಚಿತ್ರಣ,ರಂಗತಂತ್ರ,ಪಾತ್ರಕ್ಕೆ ತಕ್ಕಂತೆ ಭೀಕರ, ಸಾತ್ವಿಕ, ಸಮಾಧಾನವೆನಿಸೋ ವಸ್ತ್ರ ಹಾಗೂ ಪ್ರಸಾಧನ ಪರಿಪೂರ್ಣತೆಯ ಹಾದಿಯಲ್ಲಿ ನಾಟಕವನ್ನು ಕೊಂಡೊಯ್ಯುತ್ತದೆ. ಪಾತ್ರಗಳು ಹಾಗೂ ಪಾತ್ರಧಾರಿಗಳು ನೋಡುಗರನ್ನು ರಂಗಲೋಕಕ್ಕೆ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ.
ಒಟ್ಟಾರೆಯಾಗಿ ’ಮಹಾಮಾಯಿ’ ತಂಡ ಒಂದು ಅದ್ಭುತ ರಂಗಸಂಜೆಯನ್ನು, ರಂಗಾನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ :) 

ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ..

'ಅಮ್ಮಾ, ನಾ ಸಾಹಿತ್ಯ - ಚರಿತ್ರೆ ಓದ್ಕೊಂಡು ಉಪನ್ಯಾಸಕಿ ಆಗ್ಲಾ ಮುಂದ್ಯಾವತ್ತಾದರೂ ?' ಬಟ್ಟಲು ಕಂಗಳಲ್ಲಿ ಬಿಂಬಿಸಲು ಸಾಧ್ಯವಾಗದಿರೋ ಆಸೆಗಳ ಹೊತ್ತು ನಾ ಹೇಳ್ತಿದ್ರೆ ಅಮ್ಮ ಅಷ್ಟೇ ಆಸ್ಥೆಯಿಂದ ಕೇಳ್ತಾಳೆ..,  ಚರಿತ್ರೆಯ ಹೆಸರು ಕೇಳ್ದಾಗ್ಲೆಲ್ಲಾ ಮೈಯೊಮ್ಮೆ ಕಂಪಿಸೋದುಂಟು ನಂಗೆ! ಹಸಿರು-ಕಾಡು ಎಲ್ಲವೂ ಇಷ್ಟವೇ ಆದ್ರೂ ಪುರಾತನತೆ ಹೆಚ್ಚು ಆಪ್ತ.. ನಾ ಹಿಂದಿನ ಜನ್ಮದಲ್ಲಿ ಈ ಜಾಗದಲ್ಲೆಲ್ಲಾದ್ರೂ ನಡೆದಾಡಿದ್ನಾ ಎಂಬಷ್ಟರ ಮಟ್ಟಿಗೆ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕೋ ಹುಚ್ಚುತನ! ಪಳಿಯುಳಿಕೆಗಳು, ಶಿಲಾಶಾಸನಗಳು, ಭಿನ್ನವಾದ ವಿಗ್ರಹಗಳು ಸೆಳೆಯೋದೇ ಹೆಚ್ಚು.. ಇವತ್ತಿಗೂ ಯಗಚಿಯ ಹಿನ್ನೀರ ತೀರಕ್ಕಿಂತ, ಲಕ್ಯದ ಸೇತುವೆಗಿಂತ, ಕಡೆಗೆ ಗಿರಿಯ ನೀರವತೆಗಿಂತ ಬೇಲೂರಲ್ಲಿ ಸುಮ್ಮನೇ ಬಿದ್ದಿರೋ ಆ ಕಂಬಗಳ ಸಾಲೇ ಕಾಡತ್ತೆ ನನ್ನ.. 'ಈ ಕಂಬಗಳನ್ನೆಲ್ಲಾ ಕೊಡ್ತಾರಾ ಕೇಳಣ ಕಣೇ.. ನಮ್ಮನೆಗ್ ತಗೊಂಡು ಹೋಗ್ಬೇಕು ಅನ್ನಿಸ್ತಿದೆ ನಂಗೆ ' ಅಂತ ಏನೇನೋ ಮಾತಾಡಿ ಗೆಳತಿಯ ಹತ್ತಿರ ಬೈಸಿಕೊಂಡಿದ್ದಿದೆ.. ಅದ್ಯಾವುದೋ ಚಿತ್ರವನ್ನ ಕೇವಲ ಆ ನಟನಲ್ಲಿದ್ದ  ಪುರಾತನವಾದ ಕಂಬಗಳ ಬಗೆಗಿನ ಕನಸಿಗೇ ಹತ್ತಕ್ಕೂ ಹೆಚ್ಚು ಬಾರಿ ನೋಡಿದ್ದಿದೆ.. 
ನಾಗರೀಕತೆಗಳ ಬಗ್ಗೆ, ನದಿಯೊಂದು ದೇಶವ ಕಟ್ಟೋದರ ಬಗ್ಗೆ, ಧಾರ್ಮಿಕ ಆಚರಣೆಗಳ ಬಗ್ಗೆ ಓದಿದಷ್ಟೂ ಮುಗಿಯದ ಕುತೂಹಲ ನನ್ನಲ್ಲಿ! ಉತ್ಕಟತೆಯ ಕಡೆಯ ಹಂತವೇನೋ ಎಂಬುವಷ್ಟರ ಮಟ್ಟಿಗೆ ಸೆಳೆತ.. ಹಂಪಿ, ದುರ್ಗ, ಬೇಲೂರು, ಹಳೇಬೀಡು, ಕಾರ್ಕಳ, ಕೆಳದಿ, ಇಕ್ಕೇರಿ, ಮೈಸೂರು, ಶ್ರವಣಬೆಳಗೊಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗುಲಬರ್ಗಾ.. ಎಲ್ಲವೂ ನನ್ನೊಳಗೊಂದು ಕೌತುಕವ ಮೂಡಿಸಿ ,ಇವತ್ತಿಗೂ ಕಾಡಿಸಿ, ಹೋದಾಗಲೆಲ್ಲಾ ಕಣ್ಣಂಚು ಒದ್ದೆಯಾಗಿಸೋ ಸ್ಥಳಗಳೇ! ಭಾರತದ ಮೂಲೆ ಮೂಲೆ ಸುತ್ತೋ ಆಸೆಯ ಜೊತೆಗೇ ಪರ ರಾಷ್ಟ್ರಗಳಿಗೂ ಹೋಗಿ ಅಲ್ಲಿಯದೊಂದಿಷ್ಟು ಕಾಡುವ ಭಾವಗಳ ನನ್ನದಾಗಿಸಿಕೊಳ್ಳಬೇಕೆಂಬ ಹಪಾಹಪಿ ಇಂದು ನಿನ್ನೆಯದಲ್ಲ.. ಸಾಂಸ್ಕ್ರತಿಕತೆಗಳು, ಸಂಪ್ರದಾಯಗಳು, ಮನಸ್ಥಿತಿಗಳು, ಜೀವನಪದ್ಧತಿಗಳ ಬಗ್ಗೆ ಅಧ್ಯಯನ ಮಾಡೋ ಹಂಬಲ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ! ಇರಲಿ ಮುಂದ್ಯಾವತ್ತಾದರೂ ಈ ಕಂಗಳಲ್ಲೊಂದಿಷ್ಟು ಬೆರಗು ಹುಟ್ಟಿಸಿಕೊಂಡು ಅದ ನೋಡೋ ಸೌಭಾಗ್ಯ ನಂದಾಗಲಿ.. 
ಇವತ್ತು ನಾನಿಲ್ಲಿ ಹೇಳಲಿಕ್ಕೆ ಬಂದಿರೋ ಸಂಗತಿ ಇದಕ್ಕೆಲ್ಲಾ ಹತ್ತಿರದ್ದೇ.. ಭವ್ಯ ಭಾರತದ ಜೊತೆ ದಿವ್ಯ ಯೂರೋಪ್ ಸಹ ಅಷ್ಟೇ ಕದಲಿಸಿದ್ದಿದೆ ನನ್ನ! ವಿಶ್ವ ಪರ್ಯಟನೆಯ ಮೊದಲ ಭಾಗ ಯೂರೋಪೇ ಆದರೂ ಆಶ್ಚರ್ಯವೇನಿಲ್ಲ.. ಆಧುನಿಕತೆಯೇ ಆವರಿಸಿಕೊಂಡಿರುವ ಅಮೆರಿಕಾದಂತಹ ರಾಷ್ಟ್ರಗಳಿಗಿಂತ ತನ್ನೊಳಗೆ ಸಹಸ್ರ ಸಹಸ್ರ ಗೌಪ್ಯಗಳ ಇಂದಿಗೂ ಕಾಪಿಟ್ಟುಕೊಂಡು ಬಂದಿರೋ ಯೂರೋಪ್ ಅಚ್ಚರಿಯೆನಿಸುತ್ತೆ..  ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಏಷ್ಯಾದಿಂದ ವಿಭಿನ್ನವಾಗಿರೋ ಈ ದ್ವೀಪಕಲ್ಪ  ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತದೆ.. ಯೂರೋಪಿನ ಮುಖ್ಯ ಆಕರ್ಷಣೆಯೇ ಇಟಲಿಯೆಂದರೆ ತಪ್ಪಲ್ಲವೇನೋ! ರೋಮ್, ಫ್ಲಾರೆನ್ಸ್, ವೆನೀಸ್.. ಆಹ್!! ಕಣ್ಮುಂದೆಯೊಮ್ಮೆ ಸ್ವರ್ಗ ಹಾದು ಹೋದಷ್ಟು ಖುಷಿ.. ಎತ್ತರೆತ್ತರದ ಕಟ್ಟಡಗಳು, ನಿರ್ಮಾನುಶವೆನಿಸುವ ಬೀದಿಗಳು, ಆಕಾಶಕ್ಕೆ ಎರಡೇ ಹೆಜ್ಜೆ ಎಂದನಿಸೋ ಫ್ಲಾರೆನ್ಸ್ ನ ಎತ್ತರದ ದಿಬ್ಬ, ಮದಿರೆಯ ಅಮಲೇರಿಸೋ ಕ್ಷಣಗಳು.. ಸಾಗುತ್ತಲೇ ಹೋಗುತ್ತದೆ ಮೋಹಕತೆಯ ಪಟ್ಟಿ :) ಕ್ಯಾಥೋಲಿಕ್ ಚರ್ಚ್ ನ ಒಳಗೊಮ್ಮೆ ಕೂತು ಮೌನ ರಾಗವ ಧೇನಿಸೋ ಆನಂದವನ್ನ ಪದಗಳಲ್ಲಿ ವಿವರಿಸೋಕೆ ಸಾಧ್ಯವಾ? ನೀರೊಳಗರ್ಧ ಮುಳುಗಿರೋ ಮನೆಗಳಂತಹ ಕಟ್ಟಡಗಳ ನಡುವೆ ಹಾಯಿದೋಣಿಯಲ್ಲಿ ಹಾದುಹೋಗುವ ಅನುಭವವ ಜೊತೆಯಲ್ಲಿರುವವರಿಗೆ ವಿವರಿಸೋದಾದರೂ ಹೇಗೆ? ಅಲ್ಲೆಲ್ಲೋ ನಡುವೆ ಹಾದಿ ತಪ್ಪಿಸಿಕೊಂಡು ಒಮ್ಮೆ ಗೊಂದಲಕ್ಕೆ ಬಿದ್ದು ಮತ್ತೆ ಹುಡುಕಾಡಿ ಗಮ್ಯ ಸೇರೋವಾಗಿನ ರೋಮಾಂಚನವೆಲ್ಲಾ ಹರವಿಡಲಾರದ ಘಳಿಗೆಗಳೇ ಹೊರತು ಮತ್ತೇನಲ್ಲ.. ವಾಲಿದ ಗೋಪುರಕ್ಕೇನು ಕಮ್ಮಿ ಸೆಳೆಯೋ ಶಕ್ತಿಯಿದೆಯಾ? ಆ ವಾಸ್ತುಗಳನ್ನ ನೋಡುತ್ತಿದ್ದರೇ ಸಾಕು, ಮೈ ಮನವೆಲ್ಲಾ ಗರಿಗೆದರಲಾರಂಭಿಸುತ್ತದೆ.. ಗುರುತ್ವಾಕರ್ಷಣಾ ಶಕ್ತಿಯ ಅಳೆದು ತೂಗಿ ಹಾಗಿದ್ದೊಂದು ಗೋಪುರವ ಕಟ್ಟಬೇಕಾದರೆ ಅದೆಷ್ಟು ಆಲೋಚನಾ ಸರಪಳಿಗಳು ಸುತ್ತಿಕೊಂಡಿವೆಯೋ ಏನೋ ಎಂಬ ಯೋಚನೆಯೇ ಜುಮ್ಮೆನಿಸುತ್ತದೆ.. ಇನ್ನು ರೋಮ್ ಬಗ್ಗೆ ಮಾತನಾಡೋ ಅವಶ್ಯಕತೆಯೇ ಇಲ್ಲ! ಪದಕೋಶಗಳ ಮೀರಿ ಭಾವಭಿತ್ತಿಯೊಳಗೆ ನೆನಪುಗಳ ಮಹಾ ಸಾಗರವ ನಿರ್ಮಿಸೋ ಅದ್ಭುತ ನಗರ.. ಅಲ್ಲಿನ ಚೂಪು ಚೂಪು ಕಲಾಕೃತಿಗಳ ನೋಡುವಾಗೆಲ್ಲಾ ನನ್ನೂರಿನ ಗೋಲಾಕಾರದ ಕಮಾನಿನಂತಹ ರಚನೆಗಳು ನೆನಪಾಗುತ್ತವೆ! ಯಾಕೋ ಏನೋ ತಿಳಿದಿಲ್ಲ ನಂಗೆ.. ರೋಮ್ ಬಗ್ಗೆ ಬರೆಯಲು ಕುಳಿತರೆ ಪುಟಗಳು ಸಾಲದೇ ಹೋಗಬಹುದು ಅಥವಾ ಶಬ್ದಗಳು ಕರಗಿ ಹೋಗಬಹುದು.. 
ಜೀವನಶೈಲಿಯ ಬಗ್ಗೆ ಹೇಳುವುದಾದರೆ ತೀರಾ ವಿಚಿತ್ರವಲ್ಲದಿದ್ದರೂ ನಮಗೆ ಸಹ್ಯವಾಗುವಂತಹದ್ದಲ್ಲವೇನೋ! ಆಹಾರ ಪದ್ಧತಿಯಲ್ಲಿನ ನಿಸ್ಸಾರಗಳು ಒಂಥರಾ ಜಿಗುಪ್ಸೆ ಮೂಡಿಸುತ್ತವೆ.. 'ಅತಿಥಿ ದೇವೋ ಭವ' ಅನ್ನೋ ವಿಚಾರ ಸರಣಿಗಳ ನಡುವೆ ಬೆಳೆದ ಭಾರತೀಯರಾದ ನಮಗೆ ವಾಸ್ತವಕ್ಕೆ ಹತ್ತಿರವಾಗಿ ಬದುಕೋ, ವಿಶೇಷವೆನಿಸೋ ಆದರಾತಿಥ್ಯಗಳ ತೋರದಿರೋ ಆ ನೆಲ ಕಸಿವಿಸಿಯ ಛಾಯೆಯನ್ನೊಮ್ಮೆ ಮೂಡಿಸಿಹೋಗುತ್ತದೆ.. ಇದೆಲ್ಲದರ ಹೊರತಾಗಿಯೂ ಯೂರೋಪಿಯನ್ನರ ಬದುಕು ನಮ್ಮನ್ನೊಮ್ಮೆ ಕಲುಕಿ ಹೋಗದಿರೋ ಸಾಧ್ಯತೆಗಳೇ ಕಮ್ಮಿ! ಜನರ ಭಾವಗಳ ತೀರಾ ಹತ್ತಿರದಿಂದ ನೋಡೋ ನಂಗೆ ಮಾತ್ರ ಈ ತರದ ಅನುಭವವಾ ಗೊತ್ತಿಲ್ಲ ನಂಗೆ..!! ಕಡೆಗೂ ಇಟಲಿ ಭ್ರಮ ನಿರಸನವಾಗದಂತೆ ಮತ್ತೆ ತನ್ನೆಡೆಗೆ ಬರುವಂತೆಯೇ ಮಾಡುತ್ತದೆಯೇ ಹೊರತು ಆಕರ್ಷಣೆಯ ಪ್ರಮಾಣ ಎಳ್ಳಷ್ಟೂ ಕಮ್ಮಿಯಾಗುವುದಿಲ್ಲ.. 
ಇಟಲಿಯೆಂಬ ಮಹಾನಗರ ಅದರೊಳಗೆ ನನ್ನ ಸೆಳೆದುಕೊಂಡ ಪರಿಯಿದು! ಅಪ್ಪ ಆಗಾಗ ಹೇಳ್ತಿದ್ದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತಿದೆ.. 'ಯಾವುದೇ ಜಾಗ, ಅನುಭವಗಳು ನಮ್ಮದಾಗಬೇಕಾದರೆ ನಾವೇ ಅಲ್ಲಿಗೆ ಹೋಗಬೇಕೆನ್ನೋ ಅಗತ್ಯವಿಲ್ಲ.. ಅನುಭವದ ಕಥೆಗಳನ್ನ ಮನಸ್ಸಿಟ್ಟು ಕೇಳಿದರೆ ಸಾಕು ' ಎಂದು.. ಹೌದಲ್ಲವಾ? ಗೆಳೆಯ ಇಟಲಿಗೆ ಹೊರಟಾಗ ಸಂಭ್ರಮ ಮಗ್ಗುಲಾಗಿ ನನ್ನೆಡೆಗೆ ಹೊರಳಿತ್ತು! ಈ ಹೊತ್ತಿಗೆ ಅವನ ಅನುಭವಗಳ ಕಥೆಗಳು ಮನಃ ಪಟದಲ್ಲಿ ಎಂದೂ ಕಾಣದ ಇಟಲಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿವೆ! ಫೋಟೋ, ವೀಡಿಯೋಗಳ ಜೊತೆಗೆ ಅವನಲ್ಲಿನ ಭಾವ ಬದಲಾವಣೆಯೂ ನನ್ನನ್ನಿಷ್ಟು ಬರೆಯೋ ಹಾಗೆ ಮಾಡ್ತು ಎಂದರೆ ಅತಿಶಯೋಕ್ತಿಯೇನಲ್ಲ! ಮಹಾನಗರಕ್ಕೆ ಪ್ರದಕ್ಷಿಣೆ ಹಾಕೋ ಸುಸಮಯ ಬೇಗನೇ ಬರಲಿ ನಂಗೆ ಅನ್ನೋದೇ ದಿನ ನಿತ್ಯದ ಪ್ರಾರ್ಥನೆಯಾಗಿ ಹೋಗಿದೆ.. 
ನಿಜವಾಗಿ ಆ ದೇಶವನ್ನ  ಕಣ್ತುಂಬಿಕೊಳ್ಳಬೇಕೆನ್ನೋ ತುಡಿತ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ ನನ್ನೊಳಗೇ.. ಕಾಲಮಾನದ ಅಂತರ ಮೂರೂವರೆ ಗಂಟೆಯಾದರೂ ನನ್ನೂರಿಗೂ ಅಲ್ಲಿಗೂ ಇರೋ ವ್ಯತ್ಯಾಸ ಅಜಗಜಾಂತರ.. ಗೆಳೆಯನೇ ಆ ದೂರದೂರಿನಿಂದ ತಂದಿರೋ ಪ್ರಾಚೀನತೆಯ ಪ್ರತೀಕವಾಗಿರೋ ಗಡಿಯಾರ ಟಿಕ್ ಟಿಕ್ ಅಂತಿದ್ರೆ ಎದೆಗೂಡಿಗೂ ಆ ಉಡುಗೊರೆಗೂ ಬೆಸೆದಿರೋ ನಂಟು ಮತ್ತೆ ಮತ್ತೆ ನನ್ನಲ್ಲಿಷ್ಟು ಜೀವ ಸಂವೇದನೆಗಳ ಉಂಟು ಮಾಡಿ ಹೋಗ್ತಿದೆ! ಮುಂದೆ ಇಟಲಿಗೆ ಹೋದಾಗ ಆ ನವಿಲು ಮೈಯ ಗಡಿಯಾರ ಸಮಯ ತೋರಿಸುತ್ತೆ ನಂಗೆ ಅನ್ನೋ ಕಂಪನದೊಂದಿಗೆ ಇಟಲಿಯ ಕನವರಿಕೆಗಳು ಮುಂದುವರೆಯುತ್ತವೆ.. :)