ಶುಕ್ರವಾರ, ನವೆಂಬರ್ 13, 2015

ಭ್ರಾತೃ ಬಿದಿಗೆ

ಭ್ರಾತೃ ಬಿದಿಗೆ :
     ಭ್ರಾತೃ ಬಿದಿಗೆಯಂತೆ ಇಂದು!! ಯಮ ಧರ್ಮರಾಜ ತನ್ನ ತಂಗಿಯ ಮನೆಗೆ ಹೋಗಿ ಸಕಲಾದರಗಳನ್ನು ಸ್ವೀಕರಿಸಿ , ಹರಸಿ ಹಾರೈಸಿ ಬರುತ್ತಾನಂತೆ. ಅದೆಷ್ಟು ಚಂದವಲ್ಲವಾ ಸಂಪ್ರದಾಯಗಳು, ಹಬ್ಬಗಳು, ಅವುಗಳ ಹಿಂದಿನ ಕಥೆಗಳು :) ದೇವರಲ್ಲಿಯೂ ಮನುಷ್ಯತ್ವದ ಎಳೆ ಹುಡುಕಿ, ಅವರಲ್ಲಿನ ಸಂಬಂಧಗಳಿಗೂ ಬೆಲೆ ಕೊಟ್ಟು ಅದರ ಸುತ್ತೊಂದು ಕಥಾ ಹಂದರವ ಹೆಣೆದು ಸಂಸ್ಕೃತಿಯ ನೆಪದಲ್ಲಿ ನಮ್ಮೆದುರಿಡುವುದು ಅದ್ಭುತವೇ ಸೈ. ಧನುರ್ಧಾರಿ ದಾಶರಥಿಗಿಂತ ಸಂಸಾರಸಮೇತನಾಗಿ ನಿಂತ ಪ್ರೇಮಮೂರ್ತಿ ಶ್ರೀರಾಮಚಂದ್ರನೇ ಹೆಚ್ಚು ಆಪ್ತವಾಗುತ್ತಾನೆ ಎಂಬ ಹೆಚ್.ಎಸ್ ವೆಂಕಟೇಶಮೂರ್ತಿಯವರ ಮಾತುಗಳು ನೆನಪಾಗುತ್ತದೆ. ಯಮ ಇದ್ದಾನೋ ಇಲ್ಲವೋ ಎಂಬುದೇ ಗೊಂದಲವಾಗಿರುವಾಗ, ಆ ಯಮನಿಗೊಬ್ಬಳು ತಂಗಿ ಬೇರೆ!! ಪ್ರತೀ ಹಬ್ಬಕ್ಕೂ ತನ್ನದೇ ವೈಶಿಷ್ಟ್ಯ, ವಿಭಿನ್ನತೆ. ಆದರೆ ಅದರ ಹಿಂದಿರುವ ಹೂರಣವ ಗಮನಿಸಹೋದರೆ ಅಚ್ಚರಿಯಾಗುತ್ತದೆ. ಕೃಷಿ ಪ್ರಧಾನವಾದ ನಮ್ಮ ನಾಡಲ್ಲಿ ಕಾರ್ತಿಕವೆಂದರೆ ಒಂಥರಾ ವಿರಾಮದ ಸಮಯ. ಸುಗ್ಗಿಯಲ್ಲಿನ ಮೈಮುರಿಯುವ ಕೆಲಸವೆಲ್ಲಾ ಮುಗಿದು, ಅಡಿಕೆ ಕೊಯ್ಲಿಗೂ ಮುನ್ನ ಒಂದಿಷ್ಟು ವಿಶ್ರಾಂತಿ ಪಡೆಯೋ ಹೊತ್ತು. ಅಣ್ಣ ಎನಿಸಿಕೊಂಡವನಿಗೂ ಮದುವೆಯಾಗಿ ಗಂಡನ ಮನೆಯಲ್ಲಿರೋ ತಂಗಿಯ ನೆನಪಾಗುವುದರಲ್ಲಿ ತಪ್ಪೇನಿಲ್ಲ! ಇತ್ತ ತಂಗಿಯೂ ಬೇಗ ಕತ್ತಲಾಗೋ ನೆಪದಲ್ಲಿ ಮನೆಯ ಕೈಂಕರ್ಯಗಳನ್ನೆಲ್ಲಾ ಸರಸರನೆ ಮುಗಿಸಿ ತಂಪು ಸಂಜೆಯಲ್ಲಿ ತವರ ಕನವರಿಸೋ ಸಂದರ್ಭ. ದೀಪಾವಳಿಯ ಸಂಭ್ರಮ ಸಡಗರಗಳ ಜೊತೆಗೆ ತವರೂರಿಂದ ಅಣ್ಣನೂ ಬಂದರೆ ಖುಷಿಯ ಕಡೆಯ ಹಂತ ಅವಳಿಗೆ. ಅಮ್ಮನೋ-ಹೆಂಡತಿಯೋ ಬಲಿಪಾಡ್ಯಮಿಗೆಂದು ತಯಾರಿಸಿದ ಬಗೆ ಬಗೆಯ ಸಿಹಿ ತಿನಿಸುಗಳನ್ನೆಲ್ಲಾ ಕಟ್ಟಿಕೊಂಡು ತಂಗಿಯ ಮನೆಗೆ ಹೋಗುವ ಆನಂದ ಅಣ್ಣನಿಗೆ. ತಂಗಿಯ ಮನೆಯ ಸೌಭಾಗ್ಯವ ಅಣ್ಣ ಕಣ್ತುಂಬಿಕೊಳ್ಳಬೇಕು, ಅವಳ ನೋವುಗಳಿಗೊಂದಿಷ್ಟು ಸಾಂತ್ವನ ಹೇಳಬೇಕು ಜೊತೆ ಜೊತೆಗೇ ತಂಗಿಯ ಬೆಂಬಲಕ್ಕೆ ನಾವಿದ್ದೇವೆ ಎಂಬ ಸೂಕ್ಷ್ಮವ ಬೀಗರಿಗೆ ರವಾನಿಸಬೇಕು.. ಇತ್ತ ತಂಗಿಯೂ ಒಂದಿಷ್ಟು ಭಾವ ಕಳವಳಗಳ ಹೊರಹಾಕಬೇಕು, ತಾನು ಸುಖದಲ್ಲಿದ್ದೇನೆ ಎಂಬ ವಿಷಯವ ಅಣ್ಣನ ಮೂಲಕ ಅಪ್ಪ-ಅಮ್ಮನಿಗೆ ತಲುಪಿಸಬೇಕು ಹಾಗೆಯೇ ಗಂಡನ ಮನೆಯವರ ಮುಂದೆ ತನ್ನ ತವರಿನ ಸಿರಿಯ ಕೊಂಡಾಡಬೇಕು. ಅಣ್ಣನಿಗೆ ಏನಿಷ್ಟವೋ ಅದನ್ನೆಲ್ಲಾ ಕೈಯ್ಯಾರೆ ಮಾಡಿ ತನಗೆ ತೃಪ್ತಿಯಾಗುವವರೆಗೆ ಬಡಿಸಿ ಕೈತುಂಬಾ ದಕ್ಷಿಣೆ ನೀಡಿ ಸಂಭ್ರಮಿಸಬೇಕು. ಊಟದ ಮಧ್ಯ ತವರಿನ ಕಥೆಗಳ ಕೇಳಿ ಖುಶಿಸಬೇಕು! ಲಂಗ ದಾವಣಿಯುಟ್ಟು ತನ್ನ ಮುಂದೆಯೇ ಕುಣಿಯುತ್ತಿದ್ದ, ಮಾತು ಮಾತಿಗೂ ಮೂತಿ ದೊಡ್ಡ ಮಾಡಿ ಅಳುತ್ತಿದ್ದ ಹುಡುಗಿ ಸಂಸಾರದ ಭಾರವ ನಿಭಾಯಿಸುವ ಪರಿ ನೋಡಿ ಅಣ್ಣನಿಗೆ ಅಚ್ಚರಿಯಾದರೆ ; ಜಡೆ ಎಳೆದು ಕಾಟ ಕೊಡುತ್ತಿದ್ದ, ಸದಾ ಕಿತ್ತಾಡುತ್ತಿದ್ದ ಅಣ್ಣ ಜವಾಬ್ದಾರಿಯುತ ವ್ಯಕ್ತಿಯಾದ ಬಗೆಗಿಷ್ಟು ಬೆರಗು ತಂಗಿಯಲ್ಲಿ. ಕಡೆಗೆ ಮರಳುವಾಗ, ಅಣ್ಣ 'ಬೆಳೆದ ಮನೆಗೂ ಸೇರಿದ ಮನೆಗೂ ದೀಪವಾಗು ತಾಯಿ' ಎಂದು ಹರಸಿ ಹಾರೈಸುವಾಗ ಕಣ್ತುಂಬಿಕೊಳ್ಳುವ ಕ್ಷಣವನ್ನ ಪದಗಳಲ್ಲಿ ಹಿಡಿದಿಡಲು ಸಾಧ್ಯವಾ? ನಾಗರ ಪಂಚಮಿಗೆ ಭಂಡಾರ ಒಡೆಯಲು ಬಂದು ಹೋದ ಅಣ್ಣ ಮತ್ತೆ ಭ್ರಾತೃ ಬಿದಿಗೆಗೇ ಬರುವುದು. ಒಂದೊಂದು ಮಾಸಕ್ಕೆ ಒಂದೊಂದು ಕಾರಣ ಹುಡುಕಿ ತವರು ಮನೆಯ ಹಾದಿ ಕಾಯೋ ಹೆಣ್ಣಿನ ತಳಮಳಗಳು ಅವಳಿಗೆ ಮಾತ್ರ ಅರ್ಥವಾಗೋ ಸಂಗತಿ.
      ಆಧುನಿಕತೆಯೇ ಮೈತಳೆದಂತಿರೋ ಈ ಘಳಿಗೆಯಲ್ಲಿ ವಾಟ್ಸಾಪ್ನಲ್ಲೋ, ಫೇಸ್ಬುಕ್ನಲ್ಲೋ  'ಹ್ಯಾಪಿ ಭ್ರಾತೃ ಬಿದಿಗೆ' ಅಂತಲೋ, 'ಮಿಸ್ಸಿಂಗ್ ಯೂ' ಅಂತಲೋ ಒಂದು ಪೋಸ್ಟ್ ಬರೆದು ಸುಮ್ಮನಾಗೋ ಜನಗಳ ಅಂತರಂಗವ ಹೊಕ್ಕು ನೋಡಬೇಕಿದೆ ಆ ಪ್ರೀತಿಯ ಭಾವ ಅರಿಯಲು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡೋ ಈ ಯುಗದಲ್ಲಿ ಇಷ್ಟಾದರೂ ಮಾಡುತ್ತಾರಲ್ಲಾ ಎಂದು ಸಂಭ್ರಮಿಸಬೇಕೋ ಅಥವಾ ಬಂಧ-ಬಾಂಧವ್ಯಗಳ ಹುಡುಕುತ್ತಾ ಕೊರಗಬೇಕೋ ಎಂಬುದರ ನಡುವಿನ ಗೊಂದಲ ನನ್ನದು. ಕಾರಣಗಳೇನೇ ಇರಲಿ ಭ್ರಾತೃ ಬಿದಿಗೆಯಂದು ನಂಗಿಲ್ಲದ ಅಣ್ಣ ನೆನಪಾಗುತ್ತನೆಂಬುದಂತೂ ಸತ್ಯ. ಅಣ್ಣ-ತಮ್ಮಂದಿರಿಲ್ಲದೇ ಬೆಳೆದ ನಂಗೆ ಈ ಭಾವಗಳೆಲ್ಲಾ ತಿಳಿದಿಲ್ಲವಾದರೂ ಹೀಗಿದ್ದಿರಬಹುದು ಎಂದು ಕಲ್ಪನೆ ಮೂಡುವಂತೆ ಮಾಡಿದ್ದು ಅಣ್ಣ-ತಮ್ಮಂದಿರನ್ನು ಬೆಳಗ್ಗಿನಿಂದಲೂ ಕನವರಿಸುತ್ತಿದ್ದ ನಾನಿರುವ ಪಿ.ಜಿಯ ಮನೆಯೊಡತಿ.. ಅಣ್ಣ ಮಾತ್ರವಲ್ಲ ತಮ್ಮನೂ ಆಗಬಹುದು ಕಣೇ ಎಂದವರಂದರೂ ಯಾಕೋ ನಂಗ್ಯಾವತ್ತೂ ತಮ್ಮ ಇರಬೇಕೆಂಬ ಭಾವ ಕಾಡಿಲ್ಲವಾದ್ದರಿಂದ ಬರಹದ ತುಂಬೆಲ್ಲಾ ಅಣ್ಣನೇ ತುಂಬಿಕೊಳ್ಳುತ್ತಾ ಹೋದ..
      ವಿಪರ್ಯಾಸವೆಂದರೆ ಹೊತ್ತುರಿಯುತ್ತಿರುವ ಘರ್ಷಣೆಗಳ ಪರಿಣಾಮವಾಗಿ ಈ ಬಾರಿಯ ಬಿದಿಗೆಗೆ ಯಮಧರ್ಮರಾಯನಿಗೂ ತಂಗಿಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲವೇನೋ! ಧರ್ಮದ ದಳ್ಳುರಿಯಲ್ಲಿ ಬೇಯುತ್ತಿರುವ ಮನಸುಗಳಿಗೆಲ್ಲಾ ಬಿದಿಗೆಯ ಚಂದ್ರ ತಂಪು ನೀಡಲಿ. ವ್ಯಕ್ತಿಪೂಜೆಯ ಹೊರತಾಗಿ ವ್ಯಕ್ತಿತ್ವವನ್ನು ಆರಾಧಿಸೋ ವಿವೇಕ ಎಲ್ಲ ಗೌರವಾನ್ವಿತ ಘನತೆವೆತ್ತ ಜನಗಳಿಗೆ ಲಭಿಸಲಿ. ಯಾರ ಭಾವನೆಗಳಿಗೂ ನೋವುಂಟು ಮಾಡದೇ ಉತ್ಸವವಾಗಲೀ, ಜಯಂತಿಯಾಗಲಿ ಆಚರಿಸೋ ಪ್ರಜ್ನೆ ಸರ್ವರಿಗೂ ಮೂಡಲಿ ಎಂಬ ಸದಾಶಯದೊಂದಿಗೆ..
ಪ್ರೀತಿಯಿಂದ
ಲಹರಿ

ಬುಧವಾರ, ಸೆಪ್ಟೆಂಬರ್ 23, 2015

ಕದಡಿಹೋದ ಮನವ ಹಿಡಿದು..

ಸಂದು ಹೋದವಲ್ಲೇ ಗೆಳತೀ.. ಬದುಕಲ್ಲಿಷ್ಟು ದಿನಗಳು! ಸದ್ದು-ಗದ್ದಲವ ಮಾಡದಂತೆ.. 'ನೀ ಮಾತು ಮರೆತು ಮೌನಕ್ಕೆ ಜಾರಿದಾಗೆಲ್ಲಾ ಹುಡುಕಲು ಹೊರಡುತ್ತೇನೆ ನಾ ನಿನ್ನೊಳಗಿನ ಆ ನನ್ನ ವ್ಯಕ್ತಿತ್ವದ ಛಾಯೆಯನ್ನು' ಎಂದು ಬರೆದಿದ್ದೆ ನಾ ಅಂದು, ನಕ್ಕು ಸುಮ್ಮನಾಗಿದ್ದೆ ನೀ! ನನ್ನ ಈ ವ್ಯಕ್ತಿತ್ವ ನಿನ್ನೊಳಗೆ ಇಳಿದಿದ್ದೇ ಸುಳ್ಳಾ ಎಂದೆನಿಸಲಾರಂಭಿಸಿದೆ ಇಂದು. ತಿಂಗಳಾಯ್ತಲ್ಲೆ ಹುಡುಗಿ ನಾವಿಬ್ಬರೂ ಮಾತು ಮರೆತು , ನಮ್ಮಿಬ್ಬರ ಮನಸು ಮುರಿದು.. 'ದೃಷ್ಟಿಯಾಗತ್ತೆ ಕಣೇ ನಿಮ್ಮಿಬ್ಬರ ಗೆಳೆತನಕ್ಕೆ' ಎನ್ನುತ್ತಿದ್ದ ಗೆಳತಿಯೂ ನೀವ್ಯಾಕೆ ದೂರ ಸರಿಯುತ್ತಿದ್ದೀರ ಎಂದು ಬಿಕ್ಕಲಾರಂಭಿಸಿದ್ದಾಳೆ :( ನನ್ನೆಲ್ಲಾ ಕಂಬನಿಗಳೂ ಅರ್ಥವಾಗದಷ್ಟು ಬದುಕಿನಿಂದ ಅಂತರವ ಕಾಯ್ದುಕೊಳ್ಳಲಾರಂಭಿಸಿದ್ದೀಯಾ ನೀನು? ತಿಳಿಯುತ್ತಿಲ್ಲ ಕಣೇ.. ಬಿಡಿಸಿ ಕೇಳಲು ಧೈರ್ಯವೂ ಸಾಲುತ್ತಿಲ್ಲ ನಂಗಿಲ್ಲಿ! ಜೀವದ ಗೆಳತಿ ಎಂಬಷ್ಟು ಆಪ್ತ ಭಾವಗಳ ಸುರಿಸಿ ಯಾವಾಗಲೂ ನನ್ನವಳೇನೋ ಎನಿಸುತ್ತಿದ್ದ ನೀ ಯಾಕೋ ಈಗೀಗ ಹತ್ತಿರವಿದ್ದೂ ದೂರ.. ಆ ಬಿಟ್ಟು ಹೋದ ಗೆಳೆತನದ ಬಗ್ಗೆ ನೆನೆಪಿಸಿಕೊಂಡು ನಿನ್ನ ಮಡಿಲಲ್ಲಿ ಮುಖ ಹುದುಗಿಸಿ ಅತ್ತಿದ್ದರಿಂದ ಹಿಡಿದು , ಸುಖಾ ಸುಮ್ಮನೆ ಕಂಡಲ್ಲೆಲ್ಲಾ ನಗುತ್ತಿದ್ದ ಆ ವಡಾಪಾವ್ ಅಂಗಡಿ ಹುಡುಗನ ತನಕ ನನ್ನ ಬದುಕಿನ ಪ್ರತೀ ಕ್ಷಣದಲ್ಲೂ ನೀನಿದ್ದೀಯ.. ಫನ್, infatuation, ಮಸ್ತಿಗಳ ಹೊರತಾಗಿಯೂ ಬದುಕಿನ್ನೇನೋ ಬೇರೆಯದಿದೆ ಎಂಬುದ ಅರಿತವರು ನಾವು! ಅರಿತು ,ಬೆರೆತು ಜೊತೆ ನಡೆದ ಹೆಜ್ಜೆಗಳ್ಯಾಕೋ ಅಣಕವಾಡುತ್ತಿವೆ ನನ್ನ ಒಂಟಿತನವ ಕಂಡು..  ತೀರಾ ಆಪ್ತವೆನಿಸುತ್ತಿದ್ದ ಆ ಏಕಾಂತದ ಸಂಜೆಗಳ್ಯಾಕೋ ಈಗೀಗ ಅಸಹನೀಯವಾಗುತ್ತಿವೆ..  ನನ್ನೆಲ್ಲಾ ದುಃಖಕ್ಕೆ , ಕಣ್ಣೀರಿಗೆ ನಿನ್ನ ಸಾಂತ್ವನ, ದೊಡ್ಡ ನಗುವಿನ ಹಿಂದಿರುವ ನಿನ್ನ dialogue, ಪ್ರತೀ ಖುಷಿಯಲ್ಲೂ ಪಾಲು ಬೇಕೆನ್ನುವ ನಿನ್ನ ಹುಚ್ಚುತನ … ಬರೆದು ಮುಗಿಯಲಾದೀತೇನೇ? :)
ನಿನ್ನದೆಲ್ಲಾ ನನ್ನದೆನ್ನುವ ನನ್ನ ಕೆಟ್ಟ ಸ್ವಾರ್ಥ, Hospital ಬೆಡ್ ಮೇಲೆ ಅರೆಕ್ಷಣವೂ ನಿಂಗೆ ರೆಪ್ಪೆ ಮುಚ್ಚಲು ಬಿಡದ ನನ್ನ ಹಠ, ನಿನ್ನ ಅರ್ಥವಾಗದ ಜೋಕುಗಳಿಗೆ ಕಣ್ ಕಣ್ ಬಿಡುವ ನನ್ನ ಪೆದ್ದುತನ… ಎಂದಾದರೂ ಮರೆಯಲಾದೀತೇನೇ?

ಆಡಿದಾಟಗಳೇನೋ ಕಂಡ ಕನಸುಗಳೇನೋ
ಕೊನೆಯುಂಟೆ ಮೊದಲುಂಟೆ ಕನಸೆ ಜೀವ.. <3
ನನ್ನ ಬದುಕಿನ ಕನಸುಗಳನ್ನೆಲ್ಲಾ ನಿನ್ನೆದುರು ಬಿಚ್ಚಿಟ್ಟು ಹೃದಯ ಹಗುರಾಗಿಸಿಕೊಂಡ ಕ್ಷಣಗಳೆಷ್ಟೊ! ನಿನ್ನೆಲ್ಲಾ ಕನಸುಗಳಿಗೆ ಜೀವವಾಗುವ , ಸ್ಪೂರ್ಥಿ ತುಂಬುವ ಮನಸು ಕೊಡು ಭಗವಂತಾ ಎಂದು ಪ್ರಾರ್ಥಿಸಿದ ದಿನಗಳೆಷ್ಟೊ! ಲೆಕ್ಕ ಹಾಕುತ್ತಾ ಕೂತರೆ ಮತ್ತೆರಡು ವರ್ಷ ಬೇಕಾದೀತು.. ನಾ ನನ್ನ ಕಲ್ಪನೆಯ ಕೃಷ್ಣನಿಗೆ ರೂಪ ಕೊಡುತ್ತಾ ಕೂತಿದ್ದರೆ ನೀ ಲೌಕಿಕದ ಸಂಭ್ರಮದಲ್ಲಿ ಮುಳುಗೇಳುತ್ತಿದ್ದೆ. ಮಳೆ, ಬಣ್ಣ ಎಂತೆಲ್ಲಾ ಭಾವಗಳ ಪದರಗಳಲ್ಲಿ ನಾ ಮೈ ಮರೆತರೆ , materialistic ಬದುಕ ಮೆರಗಿಗೆ ನೀ ಕಣ್ಣರಳುಸುತ್ತಿದ್ದೆ!! ನನ್ನೆಲ್ಲಾ ಭಾವಗಳಿಗೆ ಕಿವಿಯಾಗುತ್ತಿದ್ದ ನೀನು ನಿನ್ನ ಬೇಸರವ ಅಕ್ಷರಕ್ಕಿಳಿಸುತ್ತೇನೆ ಎಂದಾಗ ಮತ್ರ ಮತ್ತದೇ ನಿರ್ಭಾವುಕ ಮೌನಕ್ಕೆ ಜಾರುತ್ತಿದ್ದೆ.. ಎಲ್ಲಿ ಹೋದವೇ ಆ ದಿನಗಳು? ಬದುಕೆಲ್ಲೋ ಕವಲೊಡೆಯುತ್ತಿರುವ ಭಾವ ನನ್ನಲ್ಲಿ.. ಯಾಕೋ ಈ ಬಿರುಕಿಗೆ ಅವ ಕಾರಣವೆಂದೆನಿಸಿ ಅವನ್ನನೂ ಬೇಡಿಯಾಯ್ತು ನಾನು! ಮರಳಿಸಿ ನಿನ್ನ ನನ್ನೀ ಪ್ರಪಂಚಕ್ಕೆ ಎಂದು.. ಊಹೂಂ! ಅವನಿಗೂ ನಿನ್ನ ಮೌನವನ್ನು ದಾಟಿಸಿಬಿಟ್ಟಿದ್ದೀಯೇನೋ.. ಮಾತನಾಡಲೊಲ್ಲ ಅವ! ಅವನೊಡನೆ ಮಾತನಾಡುವ ತಾಳ್ಮೆಯೂ ನಂಗಿಲ್ಲ ಬಿಡು.. ಹೆಗಲಿಗೆ ಹೆಗಲು ಕೊಟ್ಟು, ಇರಿಸು-ಮುರಿಸುಗಳಿಗೆ ಬೆನ್ನು ಹಾಕಿ , ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಆ ಘಳಿಗೆಗಳು ಬದುಕಲ್ಲಿ ಮರಳಿ ಬೇಕಿದೆ ನಂಗೆ! ಅಸಹಜ ನಗುವ ಪಕ್ಕಕ್ಕೆ ಸರಿಸಿ, ಮುಖವಾಡವ ಕಳಚಿ ನಿನ್ನೊಡನೆ ಜೊತೆಗೂಡಬೇಕಿದೆ ನಂಗೆ.. ಕಹಿಯ ಬಿರುಕು ಮೂಡದಿರಲಿ ನಮ್ಮೀ ಸ್ನೇಹ ಸೇತುವಿನಲ್ಲಿ.. ಬದುಕಿಗಾಗುವಷ್ಟು ಸವಿ ನೆನಪ ಕಟ್ಟಿಕೊಂಡು ಹೊರಟು ಬಿಡುತ್ತೇನೆ ನಾ ನನ್ನೂರಿಗೆ! ಅದ್ಭುತ ಗೆಳೆತನದ ಭಾಗವಾದ ಹೆಮ್ಮೆಯ ಜೊತೆಗೆ , ನಿನ್ನದೊಂದು ಪ್ರೀತಿಯ ಅಪ್ಪುಗೆಯ ಕೊಟ್ಟು ಬೀಳ್ಕೊಡೇ ಹುಡುಗೀ.. ಕದಡಿಹೋದ ಮನವ ಹಿಡಿದು ನಾನಿಲ್ಲಿ ಒಂಟಿಯಾಗಿ ನಿಂತಿದ್ದೇನೆ ಬದುಕ ಬಗೆಗೊಂದು ಕೌತುಕವ ಹೊತ್ತು! ಅದೇ ಮುಗಿಯದ ನಗುವ ಹೊತ್ತು ನಾವು ಹೋಗುತ್ತಿದ್ದ ಆ ಕವಲು ಹಾದಿಯ ತಿರುವಿನಲ್ಲಿ.. ನೀ ಬಂದು ಜೊತೆ ಸೇರುತ್ತೀಯೆಂಬ ನಿರೀಕ್ಷೆಯೊಂದಿಗೆ! 


ಶುಕ್ರವಾರ, ಆಗಸ್ಟ್ 28, 2015

ನೂಲಿನೆಳೆ ಶ್ರೀರಕ್ಷೆಯಾಗಲಿ..:)

'ಅಕ್ಕ ಬೇಕಿರಲಿಲ್ಲ ನಂಗೆ ಅಣ್ಣ ಬೇಕಿತ್ತು' ಅಂತ ಅಮ್ಮನಲ್ಲಿ ಮುಗಿಯದ ಮುನಿಸು ತೋರಿದ್ದಿದೆ.. ಕಿವಿಯೋಲೆಯಿಂದ ಕಾಲ್ಗೆಜ್ಜೆಯ ತನಕ ಎಲ್ಲವೂ ಅಕ್ಕನದ್ದೇ ಹಾಕುವಾಗ ಅಣ್ಣ ಇದ್ದಿದ್ರೆ ಹೊಸತೇ ಸಿಗ್ತಿತ್ತಲ್ವಾ ಎಂದು ಕನವರಿಸಿದ್ದಿದೆ! ಟ್ರಿಪ್, ಎಕ್ಸ್ ಕರ್ಷನ್ ಎಂದೆಲ್ಲಾ ತಿರುಗುವಾಗ ಬೆಳ್ಳಂಬೆಳಗ್ಗೆ ಡ್ರಾಪ್ ಮಾಡೋಕೆ, ರಾತ್ರೋರಾತ್ರಿ ಮನೆಗೆ ಕರೆದುಕೊಂಡು ಬರೋಕಾದ್ರೂ ಅಣ್ಣ ಇರಬೇಕಿತ್ತು ಅಂತ ಹಂಬಲಿಸಿದ್ದಿದೆ.. ಸುಖಾಸುಮ್ಮನೆ ತಂಗಿ ಎಂದು ಕರೆದ ಪಕ್ಕದ ಮನೆಯ ಹುಡುಗನನ್ನು ಅಣ್ಣ ಎಂಬಷ್ಟೇ ಹಚ್ಚಿಕೊಂಡು , ಅವನ ಮುದ್ದಿನ ತಂಗಿಯಾಗಿ, ದೊಡ್ಡ ದೊಡ್ಡ ಚಾಕಲೇಟ್ ಗಳ ಒಬ್ಬಳೇ ಒಡತಿಯಾಗಿ, ಅವನ ಮನೆ ಮಗಳೇ ಆಗಿ ಹೋಗಿದ್ದ ದೊಡ್ಡ ಖುಷಿಯ ಸಂಭ್ರಮದ ಭಾವ ಇನ್ನೂ ಮನದಲ್ಲಿದೆ! ಅದ್ಯಾಕೋ ಅವನ ಜೊತೆಗಿದ್ದ ಭಾವಗಳೆಲ್ಲಾ ಬಂಧನಗಳಾಗಿ ಬದಲಾಗಿ ಕಾರಣವನ್ನೂ ಹೇಳದೇ ಎದ್ದು ಬಂದಂದಿನಿಂದ ಅಣ್ಣನೆಂಬ ಕನಸು ಕನವರಿಕೆ ಕಮರಿಹೋಗಿದ್ದವು..
ವರ್ಷಗಳುರುಳಿ ಸಂಬಂಧಗಳನ್ನೆಲ್ಲಾ ಅಂತೆಯೇ ಬಿಟ್ಟು ಬಂಧನಗಳನಾಗಿಸದೇ ಬದುಕೋ ರೀತಿ ಕಲಿತ ಮೇಲೆ ಜೊತೆಗೂಡಿದವರಿವರು! ನನ್ನದಲ್ಲದ ಊರಲ್ಲಿ ಹೆಜ್ಜೆ ಹೆಜ್ಜೆಗೂ ಹೆದರಿ ಕಂಗಾಲಾಗುತ್ತಿದ್ದ ನಂಗೊಂದಿಷ್ಟು ಆತ್ಮಸ್ಥೈರ್ಯವ ತುಂಬಿ ಬೆಸೆದುಕೊಂಡ ಬಾಂಧವ್ಯಕ್ಕೆ 'ಅಣ್ಣ' ಅನ್ನೋ ಹೆಸರು ನೀಡಿ ಮೊಗದಲ್ಲಿ ನಗುವ ಮೂಡಿಸಿದವರು..
ನಮ್ಮೊಳಗೊಂದಷ್ಟು ಮುಗಿಯದ ತರಲೆಗಳಿವೆ, ತೀರದ ಮಾತುಗಳಿವೆ, ಅರ್ಥವೇ ಆಗದ ಭಾವಗಳಿವೆ, ಇರಿಸು-ಮುರಿಸುಗಳ ಮಹಾಪೂರವಿದೆ, ಶುದ್ಧ ಪ್ರೀತಿಯೊಂದಿಗೆ ಮನಸುಗಳ ಬೆಸೆದಿರೋ ಆತ್ಮೀಯತೆಯಿದೆ.. 'ಅಣ್ಣಾ ಎಂತ ಗೊತ್ತೇನೋ' ಅಂತಲೇ ಶುರುವಾಗೋ ಮಾತುಕಥೆಗಳು ಕಡೆಗೆ ನಿಮ್ಮ ಕಾಲೆಳುಯುವಿಕೆಗೆ ಕೆನ್ನೆಯುಬ್ಬಿಸಿ ಕುಳಿತಾಗ ಸಿಗೋ ಸಿಲ್ಕ್ ಈಗಲೂ ಅದರ ಮಧುರತೆಯನ್ನ ನೆನಪಿಸುತ್ತದೆ! ಕಾಲೇಜಿನ ತುಂಬೆಲ್ಲಾ 'ಅಣ್ಣಾ' ಅನ್ನಬೇಡ್ವೇ, ಎಲ್ಲರೂ ಅಣ್ಣ ಅಂತಾರೆ ಅಂತೇನೋ ಹುಸಿಮುನಿಸು ತೋರಿದ್ದಿದೆ.. ಇಳಿಸಂಜೆಯ ಕೆಂಪು ಕೆಂಪು ಬೆಳಕಲ್ಲಿ ಮುಗಿದುಹೋದ ಮೊದಲ ಪ್ರೀತಿಯನ್ನ ನನ್ನ ಮುಂದೆ ಹರವಿಟ್ಟು ಬಿಕ್ಕಿದ್ದಿದೆ! ಸಾಂತ್ವನಿಸಲು ತಿಳಿಯದೇ ನಾ ಕಂಗಾಲಾದಾಗ ಮುಗುಳ್ನಕ್ಕು ಐಸ್ ಕ್ರೀಮ್ ಕೊಡಿಸಿದ್ದಿದೆ.. ಹೆಚ್ಚೇ ಎನಿಸುವಷ್ಟು ಮಾತನಾಡಿ, ಹುಚ್ಚುಚ್ಚು ತರಲೆ ಮಾಡೋ ನನ್ನೊಮ್ಮೆ ಗದರಿ, ಮತ್ತೊಮ್ಮೆ ದೊಡ್ಡ ನಗು ನಕ್ಕು ಮುದ್ದಿಸೋದಿದೆ.. ಅರ್ಧರಾತ್ರಿಯ ಅವಾಂತರಗಳಿಗೆ ಹೆಗಲು ನೀಡಿ ಸಮಾಧಾನಿಸಿದ್ದಿದೆ! ಕತ್ತಲಲ್ಲೆಲ್ಲೋ ಮಧ್ಯರಸ್ತೆಯಲ್ಲಿ ನಿಂತು ದಾರಿ ತಿಳಿಯದಾದಾಗ ಮನೆ ತಲುಪಿಸಿ 'ಇನ್ಮುಂದೆಯಾದ್ರೂ ಹುಡುಗಿಯ  ತರ ಇರೋದನ್ನ ಕಲಿತುಕೋ' ಎಂದೊಮ್ಮೆ ಗುಡುಗಿ ಹೋದದ್ದಿದೆ.. ಕೆಲಸ ಸಿಕ್ಕ ತಕ್ಷಣ ನಂಗೊಂದು ಕರೆ ಮಾಡಿ ಖುಷಿಯ ಪಾಲು ನೀಡಿದ್ದಿದೆ! ಜೊತೆಗೇ ವಾಟ್ಸಪ್ ಅಲ್ಲೆಲ್ಲಾ ಹಾಕಿ ಜಾತ್ರೆ ಮಾಡ್ಬೇಡ ಅಂತ ಬೈದಿದ್ದಿದೆ.. :D  ಗಿರಿಯ ನೆತ್ತಿಯಲ್ಲಿ ನಿಂತು 'ತಂಗೀ, ಪ್ರೀತಿಸುತ್ತಿದ್ದೇನೆ ಕಣೇ ಅವಳನ್ನ.. ಬದುಕು ಬದಲಾಗುತ್ತಲ್ವಾ' ಎಂದು ಕೇಳಿದ್ದಿದೆ.. ಸೀರೆಯುಟ್ಟು ನಾ ಸಂಭ್ರಮಿಸುವಾಗ ಚಂದ ಕಾಣ್ತೀಯಾ ಆದ್ರೂ ಪುಟ್ತಂಗಿ ಅನಿಸೋಲ್ಲ ಎಂದೇನೋ ನೆಪ ಹೇಳಿ ಮತ್ತೆ ಉದ್ದಲಂಗಕ್ಕೆ ಜೋತುಬೀಳೋ ಹಾಗೆ ಮಾಡಿದ್ದಿದೆ.. ಕಡಲ ತೀರದಂತೆ ಕಾಣೋ ಹಿನ್ನೀರ ತಟದಲ್ಲಿ ನಿಂತು ಹೆಗಲು ತಬ್ಬಿ ' ನಿನ್ನಂಥಾ ಮಗಳು ಬೇಕು ಕಣೇ ಮುದ್ದಮ್ಮಾ' ಎಂದು ನನ್ನನ್ನೊಮ್ಮೆ ಭಾವುಕತೆಯಲ್ಲಿ ತೇಲಿಸಿದ್ದಿದೆ.. ಹಾವುಕವಲಿನ ರಸ್ತೆಗಳಲ್ಲಿ ಹೆಂಗೆಂಗೂ ಬೈಕ್ ಓಡಿಸಿ ಕಡೆಗೊಮ್ಮೆ 'ಗಾಬರಿಯಾಯ್ತೇನೇ ಪುಟ್ಟಿ' ಎಂದು ಕಣ್ಣುಮಿಟುಕಿಸಿದ್ದಿದೆ.. :ಫ್ ಹುಟ್ಟುಹಬ್ಬದ ದಿನ ದೊಡ್ಡದೊಂದು ಟೆಕ್ಸ್ಟ್ ಕಳಿಸಿ, ಚಂದದೊಂದು ಚಿತ್ರ ಬಿಡಿಸಿ , ನಂಗಿಷ್ಟವಾದದ್ದನ್ನೆಲ್ಲಾ ಕೊಡಿಸಿ ರಾಜಕುಮಾರಿಯ ಫೀಲ್ ಮೂಡಿಸಿದ್ದಿದೆ! :) 

ರಾಖಿ ಹಬ್ಬಕ್ಕೆ ದೂರದೂರಿಂದ ಬಂದು ಚಾಕಲೇಟ್ ಗಳ ಮೂಟೆ ಕೊಡಿಸಿ 'ಸಿಹಿಯಿರಲಿ ಕಣೇ ಬದುಕ ತುಂಬೆಲ್ಲಾ' ಎಂದು ಹರಸಿ ಹಾರೈಸಿದ್ದಿದೆ.. 'ಕನಸುಗಳೇಕೋ ಕೈ ತಾಕುತ್ತಿಲ್ಲವೋ ಅಣ್ಣಾ.. ಬೇಸರಿಸಿದೆ ಜಗ' ಎಂದರೆ ಕೈ ಹಿಡಿದೆತ್ತಿ ನಾ ಕಂಡ ಕನಸುಗಳನ್ನೆಲ್ಲಾ ದಕ್ಕಿಸಿಕೊಳ್ಳುವವರೆಗೆ ಜೊತೆ ನಿಂತಿದ್ದೆದೆ.. ತೀರಾ ಅವಲಂಬಿಸುತ್ತಿದ್ದೇನೆ ಅಂತನಿಸಿದಾಗೆಲ್ಲಾ ನನ್ನಿಂದ ದೂರ ನಿಂತು ನನ್ನ ನಾ ಸಂಭಾಳಿಸಿಕೊಳ್ಳಬಲ್ಲೆ ಎಂಬ ನಂಬಿಕೆ ಬಂದಾಗಲೇ ಬಳಿ ಬಂದದ್ದಿದೆ! ನೆನಪುಗಳ ರಾಶಿ ಹಾಕಿ ಕುಳಿತರೆ ಮನಸೆಲ್ಲಾ ಒದ್ದೆ ಒದ್ದೆ.. ಮಳೆಯಾದ ಮೇಲಿನ ಲಾಂಗ್ ಡ್ರೈವ್ ಗೆಲ್ಲಾ ನೆನಪಾಗ್ತೀಯಾ ಕಣೇ ಹುಡುಗೀ ಅಂತನ್ನೋ ಗೆಳೆಯನಿಗಿಂತ ಮಳೇಲಿ ಜಾಸ್ತಿ ನೆನಿಬೇಡ ಜ್ವರ ಬರತ್ತೆ ಅನ್ನೋ ಅಣ್ಣಂದಿರೇ ಹೆಚ್ಚು ಇಷ್ಟವಾಗ್ತಾರೆ ನಂಗೀಗ.. ' ನೈಲ್ ಪಾಲಿಶ್ ಕಲರ್ ಚಂದ ಇಲ್ಲ' ಎಂಬುದರಿಂದ ಹಿಡಿದು 'ಪ್ರೀತಿ ಪ್ರೇಮ ಎಲ್ಲಾ ನಿಂಗೆ ಸರಿ ಹೊಂದಲ್ವೇ.. ಇದ್ದುಬಿಡು ಬಾನ ತುಂಬಾ ಹಾರಾಡೋ ಹಕ್ಕಿಯಾಗಿ ' ಎಂಬಲ್ಲಿಯವರೆಗೆ ಬದುಕ ಪ್ರತಿ ನಿರ್ಧಾರದಲ್ಲೂ ಅವರದ್ದೊಂದು ಪ್ರೀತಿಯ ಅಪ್ಪಣೆಯಿದ್ದೇ ಇದೆ.. ಪಿ.ಜಿ ಯಲ್ಲಿನ ಗಲಾಟೆಗಳಿಗೆ ಅತ್ತು ಕಣ್ಣು ಕೆಂಪಾದಾಗೆಲ್ಲಾ ಗಂಟೆಗಟ್ಟಲೆ ಪಕ್ಕ ಕೂತು ಕಡೆಗೊಂದು ಗೋಲ್ ಗಪ್ಪ ಕೊಡಿಸಿ 'ಬದುಕಲ್ಲಿನ್ನೂ ಕಲಿಯಬೇಕಿದ್ದು ಹೆಚ್ಚಿದೆ ನಿಂಗೆ' ಅಂತೆಲ್ಲಾ ಉಪದೇಶ ಕೊಡೋದಿದೆ.. ಕಾಲೇಜ್ ಫಂಕ್ಷನ್ ಅಂತ ಊರೆಲ್ಲಾ ತಿರುಗೋವಾಗೋ ಹೆದರೋ ಅಪ್ಪ-ಅಮ್ಮಂಗೆ ಫೋನ್ ಮಾಡಿ 'ನಾ ನೋಡ್ಕೋತೀನಿ ಅಂಕಲ್ ಆರಾಮಾಗಿರಿ' ಅಂತೆಲ್ಲಾ ಧೈರ್ಯ ತುಂಬಿದ್ದಿದೆ.. ಈಗಲೂ ಅಮ್ಮನಿಗೆ ದೂರು ಹೇಳ ಹೋದರೆ ನಿನ್ನಣ್ಣಂದಿರಿದ್ದಾರಲ್ಲಾ ಸರಿ ಮಾಡೋಕೆ ಎಂತಂದು ನಗೋದಿದೆ! ;) 'ನಿನ್ನಪ್ಪ-ಅಮ್ಮಂಗೆ ಹೇಳಿರೇ.. ನಿನ್ನ ಮದುವೆಗೆ ನಾನೇ ಅರಳು ಹಾಕೋದು' ಅನ್ನೋ ಮಾತು ಕೇಳಿದಾಗೆಲ್ಲಾ ಕಣ್ಣಂಚಲ್ಲಿ ನೀರ ಸೆಲೆ..
'ತಂಗೀ.. ಈ ಸಲದ ರಾಖಿ ಹಬ್ಬಕ್ಕೆ ಎಂತ ಗಿಫ್ಟ್ ಬೇಕೇ' ಅನ್ನೊ ಮೆಸೇಜ್ ನೋಡಿ ನೆನಪಾದ ಭಾವಗಳನ್ನೆಲ್ಲಾ ಗುಡ್ಡೆ ಹಾಕುತ್ತಾ ಹೋದಾಗ ಹಿಂಗೊಂದು ಬರಹವಾಯಿತು! :*  ಮನದ ಜೊತೆಗೇ ಮನೆಯಲ್ಲೂ ನಂಗೊಂದು ಸ್ಥಾನ ನೀಡಿ ಅವರ ಮನೆಗಳಲ್ಲೂ ಮುದ್ದು ಮಗಳಾಗಿಸಿರೋ ಇವರ ಬಗ್ಗೆ ಬದುಕ ಪೂರ್ತಿ ಮುಗಿಯದ ಕೃತಜ್ಞತೆಯಿದೆ.. ಎಲ್ಲ ಅಣ್ಣಂದಿರಿಗೂ ಬ್ಲಾಗ್ ಲೋಕದಿಂದೊಂದು ಶುಭಾಶಯ ಹೇಳಿ ಹೋಗೋ ನೆಪದಲ್ಲಿ ಬಂದವಳು ನಾನಿಲ್ಲಿ! '' ಕಳೆದು ಹೋದ ಖುಷಿಗಳನ್ನು ಮಡಿಲಿಗೆ ತಂದು ಸುರಿದವರು ನೀವು.. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾದವರು ನೀವು.. ನೂಲಿನೆಳೆ ಶ್ರೀರಕ್ಷೆಯಾಗಲಿ..:) ಬಾಂಧವ್ಯ ಭದ್ರವಾಗಲಿ.. ಪ್ರೀತಿ ಚಿರವಾಗಲಿ :*  ರಕ್ಷಾ ಬಂಧನದ ಶುಭಾಶಯಗಳು " 
ಇಂತಿ ಪ್ರೀತಿಯ 
ಲಹರಿ.. 


ಶನಿವಾರ, ಆಗಸ್ಟ್ 1, 2015

ಜುಲೈ 26!!

ಒಂದೈದು ವರ್ಷದ ಮಗು ನಾನಾಗ! ಅಪ್ಪನ ಕೆಲಸದ ನಿಮಿತ್ತ ಅದ್ಯಾವುದೋ ಕುಗ್ರಾಮದಲ್ಲಿ ವಾಸ.. ದೂರದರ್ಶನ, ಪತ್ರಿಕೆಗಳೆಲ್ಲಾ ನಮ್ಮನ್ನು ತಾಕುತ್ತಿದ್ದಿದ್ದು ಅಷ್ಟಕ್ಕಷ್ಟೇ! ಆಕಾಶವಾಣಿ ಮಾತ್ರ ಕೈಗೆಟುಕುತ್ತಿತ್ತು.. ಅಪ್ಪ ಹೇಳೋ ರಾಜ-ರಾಣಿಯರ ಕಥೆ ಕೇಳಿ ಮಲಗುತ್ತಿದ್ದ ದಿನಗಳವು.. ಆ ಕಥೆಗಳಲ್ಲಿ ಬರೋ ಸುಕೋಮಲೆಯರು , ಅವರ ಪ್ರೀತಿಯ ಸಾಲುಗಳು ಅಕ್ಕನಿಗೆ ಇಷ್ಟವಾಗ್ತಿದ್ರೆ ನಂಗೆ ಯುದ್ಧ-ಹೋರಾಟ ಅಂತೆಲ್ಲಾ ಬಂದಾಗ ಮಾತ್ರ ಕಥೆ ಇಂಟೆರೆಸ್ಟಿಂಗ್ ಅನ್ನಿಸ್ತಿತ್ತು.. ಅಭಿಮನ್ಯು ಅಂದ್ರೆ ಪಂಚಪ್ರಾಣ! ತನ್ನ ಸ್ಥಾನಕ್ಕಾಗಿ ತಪಸ್ಸು ಮಾಡೋ ಧೃವ, ಅರ್ಜುನನೊಂದಿಗೆ ಸಮಾಸಮ ಯುದ್ಧ ಮಾಡೋ ಕರ್ಣ.. ಎಷ್ಟೋ ದಿನ ಅಪ್ಪನಲ್ಲಿ ಹೇಳಿದ್ದೇ ಕಥೆ ಹೇಳಿಸಿ ಮಲಗಿದ್ದುಂಟು!
ಇನ್ನೂ ಮಳೆಗಾಲ ಶುರುವಾಗಿ ಹೆಚ್ಚು ದಿನಗಳಾಗಿರಲಿಲ್ಲ.. ಅಪ್ಪ ಯಾಕೋ ಆತಂಕದಲ್ಲಿದ್ದ ಹಾಗಿತ್ತು.. ಕಾರಣ ಕೇಳೋವಷ್ಟು ಧೈರ್ಯ ಇರಲಿಲ್ಲವಾದ್ದರಿಂದ ನಾನೂ ಸುಮ್ಮನಾಗಿದ್ದೆ. ಅವತ್ತು ಕಥೆ ಹೇಳೋಕೆ ಬಂದಿದ್ದ ಅಪ್ಪ ಕಣ್ಣಂಚಲ್ಲಿ ನೀರು ತುಂಬಿಕೊಂಡು ನಿಜವಾದ ಯುದ್ಧದ ಕಥೆ ಹೇಳ್ತೀನಿ ಅಂತಂದಿದ್ದರು! ನಂಗೋ ಹಿಡಿಸಲಾಗದ ಆಶ್ಚರ್ಯ.. ನಿಜಕ್ಕೂ ಯುದ್ಧ ಮಾಡ್ತಾರ ಅಂತ ಬೆರಗುಗಣ್ಣಿಂದ ಕೇಳಿದ್ದೆ.. ಆಮೇಲೆಲ್ಲಾ ಅಪ್ಪ ಆಕಾಶವಾಣಿಗೆ ಕಿವಿಗೊಟ್ಟು ಕೇಳೋದು ರಾತ್ರಿ ಅದೇ ಕಥೆಗಳನ್ನ ನಂಗೆ ಹೇಳೋದು ಇದೇ ನಡೆಯುತ್ತಿತ್ತು! ತೀರಾ ಸನ್ನಿವೇಶಗಳು, ಅಂಕಿಅಂಶಗಳು ನೆನಪಿಲ್ಲವಾದರೂ ಇಂದಿಗೂ ಆ ಹೆಸರುಗಳು , ಜಾಗಗಳು ಅಚ್ಚೊತ್ತಿದೆ ಮನದಲ್ಲಿ :) ಅಮ್ಮನ ಬಳಿ ಇಂಥದೇ ಕಥೆಗಳನ್ನ ನನ್ನ ಬಾಲ ಭಾಷೆಯಲ್ಲಿ ವಿವರಿಸೋವಾಗ ಅವಳ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.. ದೇವರ ಮುಂದೊಂದು ದೀಪ ಹಚ್ಚಿ ಕುಕ್ಕರುಗಾಲಿನಲ್ಲಿ ಕೂತು   ಅವರನ್ನೆಲ್ಲಾ ಕಾಪಾಡಪ್ಪಾ ಭಗವಂತಾ ಎಂದು ಪ್ರಾರ್ಥಿಸಿಯೇ ಮುಂದಿನ ಕೆಲಸಕ್ಕೆ ತೊಡಗುತ್ತಿದ್ದುದು ಅಮ್ಮ! 
      ಬುದ್ಧಿ ಬೆಳೆದ ಮೇಲೇಯೇ ಕಾರ್ಗಿಲ್ ಯುದ್ಧದ ತೀವ್ರತೆಗಳು ಅರ್ಥವಾಗಿದ್ದು! ಬದುಕಲ್ಲೊಮ್ಮೆ ಅವರ ಕಂಡು ಕೈ ಮುಗಿಯಬೇಕೆಂಬ ಉತ್ಕಟತೆ ಆರಂಭವಾಗಿತ್ತು.. :) ಇಂದಿನವರೆಗೂ ಸಿಕ್ಕ ಯೋಧರಿಗೆಲ್ಲಾ ಕಣ್ಣ ಹನಿಯೊಂದಿಗಿನ ಸಮರ್ಪಣಾ ಭಾವದ ಧನ್ಯವಾದವನ್ನ ತಿಳಿಸಿದ್ದೇನೆ! ನಮ್ಮ ಕ್ಷೇಮಕ್ಕೆ ಸಕಲವನ್ನೂ ಧಾರೆಯೆರೆವ ಅವರೆಡೆಗೆ ಬದುಕ ಪೂರ್ತಿ ಮುಗಿಯದ ಆರಾಧನೆ ನನ್ನಲ್ಲಿ.. ಸೈನಿಕರ ಮರಣದ ಕಥೆ ಕೇಳುವಾಗೆಲ್ಲಾ ಅಪ್ಪನಲ್ಲಿ ಗೊಂದಲವ ಹರವಿಡುತ್ತಿದ್ದೆ! ಅವರ ಮಕ್ಕಳೆಲ್ಲಾ ಮುಂದೇನು ಮಾಡ್ತಾರೆ ಅಂತ.. ನಿನ್ನ ಹಾಗೇ ಅವರೆಲ್ಲಾ ಧೈರ್ಯವಂತರು ಅಪ್ಪನ ಬದುಕನ್ನೇ ಮಾದರಿಯನ್ನಾಗಿಟ್ಟುಕೊಂಡು ಬದುಕುತ್ತಾರೆ ಅಂತೇನೋ ಅಪ್ಪ ಹೇಳಿ ಸಮಾಧಾನಿಸಿದ್ದ ನೆನಪು.. ನಾನೂ ಯೋಧನ ಮಗಳಾಗಬಾರದಿತ್ತಾ ಎಂದೆನಿಸಿತ್ತು ಆಕ್ಷಣಕ್ಕೆ.. !! ತದನಂತರದ್ದೆಲ್ಲಾ ಮಾಮೂಲಿ ಹುಡುಗಿಯ ಬದುಕೇ ನಂದೂ.. ಅದೇ ಬಣ್ಣ ಬಣ್ಣದ ಬಟ್ಟೆಯ ಗುಂಗಲ್ಲಿ , ಪ್ರಪಂಚದ ಬೆರಗಲ್ಲಿ ಮುಳುಗಿ ಹೋದವಳೇ ನಾನು! ಕಿಶೋರಾವಸ್ಥೆ ದಾಟಿ ಹರೆಯಕ್ಕೆ ಬಂದಾಗಲೂ ಎಲ್ಲರಂತೆ ಸಿನಿಮಾ ಹೀರೋಗಳ ಗುಂಗಲ್ಲೇ ರಾತ್ರಿ ಪೂರ ನಿದ್ದೆ ಬಿಟ್ಟವಳು.. ಅದ್ಯಾವುದೋ ಪ್ರೇಮ ಚಿತ್ರಗೀತೆಯನ್ನ ಹಗಲೂ ಇರುಳೂ ಕೂತು ಕಂಠ ಪಾಠ ಮಾಡಿದವಳು! ಅಪರೂಪಕ್ಕೊಮ್ಮೆ ದೇಶಭಕ್ತಿ ಉಕ್ಕಿ ಹರಿಯುತ್ತಿದ್ದಾದರೂ ನಾ ಮಾಡಿದ್ದ ಕೆಲಸ ಯೋಧರಿಗೆ ಕೈ ಮುಗಿಯುವುದೊಂದೇ.. ಬಾಲ್ಯದ ಅಭ್ಯಾಸದಂತೆ ಅದೊಂದು ನನ್ನೊಳಗೇ ಬೆಳೆದುಬಂದಿತ್ತು!
                                         'ಅವ' ಸಿಗುವ ತನಕ ನನ್ನದೂ ತೀರಾ ಸಾಮಾನ್ಯ ಬದುಕಾಗಿತ್ತು.. ಬದುಕ ತಿರುವಿನಲ್ಲೆಲ್ಲೋ ಅವ ಕೈ ಹಿಡಿದಿದ್ದ! ಹಳೆಯ ಜನ್ಮದ ನೆನಪ್ಯಾವುದೋ ತಾಕಿ ಹೋದಂತಾಗಿತ್ತು ನನ್ನೊಳಗೆ.. ಅವನಿಗಿದ್ದ ಏಕೈಕ ಗುರಿ ಪರಮವೀರ ಚಕ್ರ! ನನ್ನೊಳಗೆ ಹುದುಗಿಹೋಗಿದ್ದ ಅದೆಷ್ಟೋ ಆಸೆ ಕನಸುಗಳನ್ನ ಅವ ಕೆದಕಿತೆಗೆದಿದ್ದ.. ಅವನ ಕಣ್ಣಲ್ಲಿ ನಕ್ಷತ್ರಗಳ ಮೇಲಿದ್ದ ವಾಂಛೆ ಜಗತ್ತಿನ ಅಷ್ಟೈಶ್ವೈರ್ಯಗಳನ್ನೂ ಕಾಲಕಸ ಮಾಡಿತ್ತು! ಪ್ರೀತಿಯಾಗಿತ್ತು ಅವನ ಮೇಲೆ.. ಒಲವಾಗಿತ್ತು ಅವನ ಕನಸ ಮೇಲೆ! ಪ್ರೀತಿಯ ಭಾವ ವಿನಿಮಯ ಮಾಡಿಕೊಂಡ ಮೇಲೂ ನಮ್ಮೊಳಗೆ ಯಾವುದೇ ರಸಿಕ ಸಂವಾದಗಳಿರಲಿಲ್ಲ.. ತುಂಟತನ, ದೈಹಿಕ ಬಯಕೆಗಳೆಲ್ಲವೂ ದೂರಾತಿದೂರ.. ಅವನ ಕನಸಿಗೆ ಹೆಜ್ಜೆ ಜೋಡಿಸೋ ಆತ್ಮಬಂಧು ನಾನಾಗಿದ್ದೆ! ಅಪ್ಪನ ರಾಜಕುಮಾರಿಯಾಗಿ ಮೆರೆದವಳು ಇವನ ಹೃದಯ ಸಿಂಹಾಸನ ಅಲಂಕರಿಸಹೊರಟಿದ್ದೆ.. 'ಸಿಂಹಾಸನದ ಪಕ್ಮದಲ್ಲೊಂದು ಜಾಗ ಮಾಡಿ ನಾ ನಿನ್ನ ಕೂರಿಸಿಯೇನು ಕಣೇ ಹುಡುಗೀ, ಆ ಸ್ಥಾನವನ್ನಾಗಲೇ ತಾಯಿ ಭಾರತಿಗೆ ಸಮರ್ಪಿಸಿಯಾಗಿದೆ' ಎಂದಿದ್ದ ಅವ.. ಪ್ರೀತಿ ಇಮ್ಮಡಿಯಾಗಿತ್ತು! ಅಲ್ಲಿಂದ ಮುಂದೆ ಹಿಂತಿರುಗಿ ನೋಡಿದ್ದಿಲ್ಲ ನಾವು.. ಪ್ರೀತಿಯ ಪ್ರತಿ ಘಳಿಗೆಯಲ್ಲೂ ದೇಶಪ್ರೇಮ ಸುರಿದಿದ್ದಿದೆ, ಕಂಡ ಕನಸುಗಳಲ್ಲೆಲ್ಲಾ ತಾಯಿ ಭಾರತಿಯ ಕನವರಿಕೆಗಳಿವೆ, ಹಾಕಿಕೊಂಡ ಆಣೆ ಪ್ರಮಾಣಗಳೆಲ್ಲಾ ಅವಳ ಹೆಸರಲ್ಲೇ! ಅವನ ಕನಸ ಹಾದಿಯಲ್ಲಿನ ಹೆಜ್ಜೆಯಲ್ಲಿ ಗೆಜ್ಜೆಯ ದನಿಯಾದ ಸಾರ್ಥಕತೆ ನನ್ನಲ್ಲಿ.. ಇನ್ನೂ ನೆನಪಿದೆ ಅವನ ಮೊದಲ ಎಸ್. ಎಸ್.ಬಿ ಮುಗಿದ ದಿನ ಆಕಾಶಕ್ಕೆ ಕೇಳುವಂತೆ ಖುಷಿಯಲ್ಲಿ ಕುಣಿದಿದ್ದೆ ನಾ.. 
                        ಮತ್ತದೇ ಮಳೆಗಾಲದ ಮೊದಲ ದಿನಗಳು ಈಗ.. ಅವನ ಟ್ರೈನಿಂಗ್ ಮುಗಿದು ಯೋಧಪಡೆ ಸೇರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ..  ನಿನ್ನೆಯ ಬೆಳದಿಂಗಳಲ್ಲಿ ಅವನಿಗೆ ಕೇಳಿದ್ದೆ.. ಕೊನೆಯಾಸೆಯೇನೋ ಎಂದು! 'ತ್ರಿವರ್ಣ ಧ್ವಜದೊಳಗೆ ಸುತ್ತಿ ತರಬೇಕು ನನ್ನ' ಅಂದಾಕ್ಷಣ ಮೈ ರೋಮಗಳೆಲ್ಲಾ ನೆಟ್ಟಗಾಗಿತ್ತು ನಂಗೆ.. ಇವತ್ತು ಜುಲೈ 26!! ಬಾಲ್ಯದಲ್ಲೆಲ್ಲೋ ಅಪ್ಪ ಕಣ್ಣ ಹನಿಯೊಂದಿಗೆ ಸೈನ್ಯದ ಕಥೆ ಹೇಳಲು ಆರಂಭಿಸಿದ ದಿನ.. 'ಕಾರ್ಗಿಲ್ ವಿಜಯ ದಿವಸ್'!! ನನ್ನವನಿಗೊಂದು ದೊಡ್ಡ ಸೆಲ್ಯೂಟ್ ನೊಂದಿಗೆ ಬೀಳ್ಕೊಡುತ್ತಿದ್ದೇನೆ.. ಮರಳಿ ಬರುತ್ತಾನೆಂಬ ನಂಬಿಕೆಯ ಹೊರತಾಗಿ.. :)

ಭಾನುವಾರ, ಜೂನ್ 14, 2015

ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ..

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ! ರಾಧಾ-ಕೃಷ್ಣರು ಎಂದೂ ಸೇರುವುದಿಲ್ಲವೆಂಬ ಸತ್ಯ ತಿಳಿದಿದ್ದರೆ ಅಂದೇ ರುಕ್ಮಿಣಿಯಾಗುತ್ತಿದ್ದೆನೇನೋ… ಪ್ರೀತಿಸುವುದೊಂದೇ ಗೊತ್ತಿತ್ತು ಈ ಹೃದಯಕ್ಕೆ.
ಕಡುನೀಲಿ ಬಣ್ಣದ ಶರ್ಟ್ ತೊಟ್ಟು ಕೈಯಲ್ಲೊಂದು ಸಿಗರೇಟ್ ಹಿಡಿದವನ ನೋಡಿದಾಗ ನನ್ನೊಳಗೊಂದು ಹೂಕಂಪನ ಮೂಡಿತ್ತು.೧೯೯೬ರ ವ್ಯಾಲೆಂಟೈನ್ಸ್ ಡೇ ದಿನ ತುಂಗೆಯ ಕೊನೇ ಮೆಟ್ಟಿಲ ಮೇಲೆ ಕೂತು ನಿನ್ನ ಕಿರುಬೆರಳು ಹಿಡಿದ ಕ್ಷಣ ಆ ಹೂಕಂಪನಕ್ಕೊಂದು ಅರ್ಥ ಮೂಡಿತ್ತು. ಹೀಗೆ ಹದಿನೇಳರ ಹರೆಯದಲ್ಲಿ ಸದ್ದಾಗದೆ ಮೂಡಿದ್ದ ಪ್ರೀತಿಯೊಂದು ಮುಂದಿನ ಆರು ವರ್ಷಗಳ ಕಾಲ ಕನಸಾಗಿತ್ತು,ಕನವರಿಕೆಯಾಗಿತ್ತು,ಬದುಕಾಗಿತ್ತು! ನೀ ನೀನಾಗಿರುವುದಕ್ಕಿಂತ ಹೆಚ್ಚಾಗಿ ನಾನಾಗಿದ್ದೆ,ನಿನ್ನೊಳಗಿನ ನನ್ನನ್ನು ಹುಡುಕುವುದರಲ್ಲಿ ನಾ ಕಳೆದುಹೋಗಿದ್ದೆ.ನಿನ್ನ ಹಣೆಗೊಂದು ಕೊನೆಯ ಮುತ್ತು ನೀಡಿದ ಕ್ಷಣದಿಂದ ಹುಡುಕುತ್ತಿದ್ದೇನೆ , ಈ ಯೂರೋಪ್ ನಗರದಲ್ಲಿ, ಅಮೃತಶಿಲೆಯ ಮಹಲುಗಳಲ್ಲಿ ಎಲ್ಲಾದರೂ ನೀ ಕಾಣುತ್ತೀಯೇನೋ ಎಂದು! ನಿನ್ನೊಳಗಿದ್ದ ನಾ ಕಾಣುತ್ತೀನೇನೋ ಎಂದು…
ಭಾರತೀಬೀದಿಯ ಆ ಕೊನೆಯ ತಿರುವಿನಲ್ಲಿ ಇನ್ನೂ ನಿನ್ನ ಆತ್ಮದ ಚೂರೊಂದು ನನ್ನ ಗೆಜ್ಜೆಯ ದನಿಗಾಗಿ ಕಾಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ ಆಗಾಗ! ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ, ಹುಡುಕಿ ಹುಡುಕಿ ನನಗಷ್ಟೇ ಕೇಳಿಸುತ್ತಿದ್ದ ಅದೊಂದಿಷ್ಟು ಹಾಡುಗಳು, ಮಳೆಗಾಲದಲ್ಲಿ ಮತ್ತೆ ಮತ್ತೆ ಬರುತ್ತಿದ್ದ ಆ ಬೆಚ್ಚಗಿನ ಜ್ವರ.. ’ನೆನಪೆಂದರೆ ಮಳೆಬಿಲ್ಲ ಛಾಯೆ!’ ಸಪ್ತಸಾಗರದಾಚೆಯಿಲ್ಲಿ ಸುಪ್ತ ಮನಸ್ಸೊಂದು ಮುದುಡಿದೆ. ನಿನ್ನಿಂದ ಗಾವುದ ಗಾವುದ ದೂರಕುಳಿತು ಪದಕ್ಕಿಳಿಸುತ್ತಿರುವ ನನ್ಯಾವ ಭಾವಗಳೂ ನಿನ್ನ ತಾಕುವುದಿಲ್ಲವೆಂಬ ಸತ್ಯದ ಅರಿವಿದ್ದೂ ಬರೆಯುತ್ತಿದ್ದೇನೆ! ಅಕ್ಷರಗಳ ಜೊತೆಗಿದ್ದಷ್ಟು ಹೊತ್ತೂ ನಿನ್ನ ಸಾಮೀಪ್ಯದ ಸುಖ ಈ ಮನಸ್ಸಿಗೆ..
      
ಈ ದೇಶದಲ್ಲಿ ಮೊದಲ ಮಳೆಯ ಮಣ್ಣಿನ ಘಮವಿಲ್ಲ, ರಾಧಾ-ಕೃಷ್ಣರ ವಿರಹದ ತಾಪವಿಲ್ಲ! ಸಂಬಂಧಗಳ ಹಪಾಹಪಿಯಿಲ್ಲ, ಬಯಕೆಗಳ ಕಾತರವಿಲ್ಲ, ಎಲ್ಲವೂ ಆಚ್ಛಾದಿತ ಹಿಮದಂತೆ ನಿರ್ಲಿಪ್ತತೆಯಲ್ಲಿ ಮಡುಗಟ್ಟಿದ ಮೌನ. ಹೀಗಿರುವಾಗಲೇ ನೀ ನೆನಪಾಗುತ್ತೀಯ! ಭಾರತೀ ಬೀದಿಯ ಹೆಜ್ಜೆ ಗುರುತುಗಳು, ಉಕ್ಕೇರುತ್ತಿದ್ದ ತುಂಗೆ, ಬೆಟ್ಟದ ದಾರಿಯ ಪಕ್ಕದಲ್ಲಿ ಅರಳುತ್ತಿದ್ದ ಸಂಪಿಗೆ, ಭೋರ್ಗರೆದು ಸುರಿವ ಮಳೆ, ಕಾರಿಡಾರಿನ ತುದಿಯಲ್ಲಿ ಇನ್ಫ಼ರಾಸೊನಿಕ್ ತರಂಗಗಳನ್ನೆಬ್ಬಿಸುತ್ತಿದ್ದ ಆ ಜೇಡ. ಹೀಗೆ ನೆನಪುಗಳ ಜಾತ್ರೆ ಸಾಗುತ್ತದೆ ಮನದ ಪರದೆಯ ಮೇಲೆ!
      
ಹನ್ನೆರಡು ಮಳೆಗಾಲಗಳ ಹಿಂದೆ ನಿನ್ನ ಜೊತೆ ಮಳೆಯ ಹನಿಗಳೊಡನೆ ಆಟವಾಡಿದ್ದು! ಅಲ್ಲಿಂದೀಚೆಗೆ ಮಳೆಯೆಂದರೆ ಕಿಟಕಿಯ ಮೇಲೆ ಬೀಳುವ ನೀರ ಗುಳ್ಳೆಗಳು. ಈ ದ್ವಾದಶ ವರ್ಷಗಳಲ್ಲಿ ಯಾವ ಶನಿವಾದ ಸಂಜೆಯಲ್ಲಿಯೂ ಆಮ್ಲೆಟ್ ತಿಂದಿಲ್ಲ! ಹುಚ್ಚು ಹಿಡಿಸುವ ಹುಡುಗನ ಸ್ಥಾನದಿಂದ ಶಾರುಖ್ ಕೆಳಗಿಳಿದಿದ್ದಾನೆ. ಗಾಜರ್ ಕಾ ಹಲ್ವ ಹಾಗೂ ಪೆಟ್ರೊಲಿನ ವಾಸನೆಯನ್ನು ಪ್ರಯತ್ನ ಪೂರಕವಾಗಿ ದೂರಮಾಡಿದ್ದೇನೆ. ಇವೆಲ್ಲದರ ನಡುವೆಯೂ ಆಗಾಗ ಬರುವ ಬೆಚ್ಚಗಿನ ಜ್ವರ ನಿನ್ನನ್ನು ಇಡಿ ಇಡಿಯಾಗಿ ಮನಃಪಟ್ಲದ ಮೇಲೆ ಮೂಡಿಸಿಬಿಡುತ್ತದೆ. ಹೂಕಂಪನ, ಹೆಣೆದ ಕನಸುಗಳು, ಖಾಲಿಯಾಗದ ವಿರಹ, ಮುಗಿದುಹೋದ ಪ್ರೀತಿ, ಕಂಬನಿ ತುಂಬಿದ ಬದುಕು! ತೀವ್ರಗೊಳ್ಳೂವ ಜ್ವರದೊಂದಿಗೆ ಮತ್ತೆ ಮತ್ತೆ ಆವರಿಸಿಕೊಳ್ಳುತಾ ಹೋಗುತ್ತದೆ ನಿನ್ನತನ ನನ್ನನ್ನು..
          
ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ! ಬದುಕು ರಾಧೆಯ ಪಾತ್ರಕ್ಕೇ ಅಂಟಿಕೊಂಡಂತಿತ್ತು. ಕಡೆಯ ಪಕ್ಷ ಮೀರಳಾಗಿದ್ದರಾದರೂ ನಿನ್ನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಬಹುದಿತ್ತೇನೋ! ಅವ್ಯಕ್ತತೆಯ ಭಾವವೇ ನೀನಾಗಿ ರೂಪುಗೊಂಡಿದೆ ಈಗ. ಕೃಷ್ಣನ ಹೆಸರೇ ತಿಳಿದಿಲ್ಲದ ಊರಿನಲ್ಲಿ ಅವನ ಕೊಳಲ ದನಿ ಹುಡುಕುವ ರಾಧೆಯಾಗಿದ್ದೇನೆ. ಎಂದಾದರೂ ಬದುಕು ಬದಲಾಗಬಹುದು, ರಾಗಗಳ ಸುಳಿಗಳಲ್ಲಿ ನಾ ಮತ್ತೆ ಕಳೆದು ಹೋಗಬಹದು, ಕವಿತೆಗಳ ಭಾವದಲ್ಲಿ ಕಳೆದು ಹೋದ ನಾನು ಮರಳಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ…                                                        
– ದೇವಯಾನಿ.!